ಆನೇಕಲ್(ಡಿ.04): ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನ ರೈತರು ರಾಗಿಯನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಾರೆ. ಅದರಲ್ಲೂ ರಾಗಿ ಬಿತ್ತನೆ, ಕಟಾವು ಒಕ್ಕಣೆಯನ್ನು ಸಾಂಪ್ರದಾಯಿಕ ಪದ್ದತಿಯಲ್ಲಿ ರೈತರು ಮಾಡುತ್ತಿದ್ದರು. ಆದ್ರೆ ಈ ಬಾರಿ ರಾಗಿ ಕಟಾವು ಮಾಡಲು ಯಂತ್ರಗಳ ಮೊರೆ ಹೋಗಿದ್ದು, ರೈತರಿಗೆ ಹೆಚ್ಚು ಉಪಯುಕ್ತವಾಗಿದೆ. ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕು ರಾಗಿ ಕಣಜ ಎಂದೇ ಖ್ಯಾತಿ ಗಳಿಸಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯುವ ಆನೇಕಲ್ ತಾಲ್ಲೂಕಿನ ಬಹುತೇಕ ರೈತರು ಇಂದಿಗೂ ಸಾಂಪ್ರದಾಯಿಕ ಪದ್ದತಿಯಲ್ಲಿ ರಾಗಿ ಬಿತ್ತನೆ, ಕುಂಟೆ, ಕಳೆ ಕೀಳುವಿಕೆ, ಕಟಾವು ಒಕ್ಕಣೆ ಮಾಡುವುದು ಕಂಡುಬರುತ್ತಿತ್ತು. ಆದ್ರೆ ಈ ಬಾರಿ ಅಕಾಲಿಕ ಮಳೆ ಮತ್ತು ಕೃಷಿ ಕಾರ್ಮಿಕರ ಅಭಾವ. ಸಿಕ್ಕರು ದುಬಾರಿ ಕೂಲಿಯಿಂದಾಗಿ ರಾಗಿ ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದು, ಯಂತ್ರಗಳಿಂದ ರಾಗಿ ಕಟಾವು ಮಾಡುವುದರಿಂದ ಕಡಿಮೆ ಅವಧಿಯಲ್ಲಿ ರಾಗಿ ಒಕ್ಕಣೆ ಮಾಡಿ ದವಸವನ್ನು ಮನೆಗೆ ಒಯ್ಯಬಹುದಾಗಿದೆ ಎಂದು ರೈತ ರಾಜಣ್ಣ ತಿಳಿಸಿದ್ದಾರೆ.
ಇನ್ನೂ ಕೃಷಿಯಲ್ಲಿ ಯಂತ್ರಗಳ ಬಳಕೆಯಿಂದ ತಂತ್ರಜ್ಞಾನ ಯಶಸ್ವಿಯಾಗಿ ಬಳಕೆ ಸಾಧ್ಯವಾಗುತ್ತದೆ. ಇದರಿಂದ ವೆಚ್ಚ ಕಡಿಮೆಯಾಗುತ್ತದೆ. ಸಕಾಲದಲ್ಲಿ ಬೆಳೆ ಕಟಾವು ಮಾಡಬಹುದು. ಜೊತೆಗೆ ಯಂತ್ರದಿಂದ ರಾಗಿ ಬೆಳೆ ಕಟಾವು ಮಾಡುವುದರಿಂದ ಕಣ ಸಿದ್ದಪಡಿಸಿ ಟ್ರಾಕ್ಟರ್ನಲ್ಲಿ ತುಳಿಸಿ ಒಕ್ಕಣೆ ಮಾಡುವ ಅವಶ್ಯಕತೆ ಇರುವುದಿಲ್ಲ. ಕಟಾವು ಜೊತೆ ಹುಲ್ಲು ಪ್ರತ್ಯೇಕವಾಗಿ ರಾಗಿ ಪ್ರತ್ಯೇಕವಾಗಿ ಬೇರ್ಪಡುವುದರಿಂದ ಶ್ರಮವಿಲ್ಲದೆ ರಾಗಿ ಒಕ್ಕಣೆ ಮಾಡಬಹುದಾಗಿದೆ ಎನ್ನುತ್ತಾರೆ ರೈತ ಪ್ರವೀಣ್.
ಒಟ್ಟಿನಲ್ಲಿ ಸಾಂಪ್ರದಾಯಿಕ ಪದ್ದತಿಯಲ್ಲಿ ರಾಗಿ ಕಟಾವು ಮಾಡುವುದರಿಂದ ರೈತರಿಗೆ ನಷ್ಟವೇ ಹೆಚ್ಚು. ಹಾಗಾಗಿ ಯಂತ್ರೋಪಕರಣಗಳ ಬಳಕೆ ಮಾಡಲು ರೈತ ಮನಸ್ಸು ಮಾಡಬೇಕು. ಆ ಮೂಲಕ ರೈತರು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕಿದೆ.
Published by:Latha CG
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ