ಬೆಂಗಳೂರು (ಜನವರಿ 03); ಬಿಜೆಪಿ ಈ ಹಿಂದೆ 'ಮನು'ವಾದವನ್ನು ಅನುಸರಣೆ ಮಾಡುತ್ತಿತ್ತು. ಆದರೆ, ಇದಿಗ ಬಿಜೆಪಿ ನಾಯಕರು 'ಮನಿ'ವಾದವನ್ನು ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯದ ಎಲ್ಲಾ ಬಿಜೆಪಿ ನಾಯಕರೂ ಡೋಂಗಿಗಳೇ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಅಮೆರಿಕ ಮೂಲದ ಸಂಸ್ಥೆಯೊಂದು ಡಾಕ್ಟರೇಟ್ ಗೌರವ ಘೋಷಿಸಿತ್ತು. ಈ ಕುರಿತು ಅಪಹಾಸ್ಯ ಮಾಡಿ ಮಾತನಾಡಿರುವ ರಾಮಲಿಂಗಾ ರೆಡ್ಡಿ, "ಯಡಿಯೂರಪ್ಪಗೆ ಡಾಕ್ಟರೇಟ್ ಕೊಟ್ಟಿದ್ದು ಯಾರು..? ಹೀಗಾಗಿಯೇ ಬಿಎಸ್ವೈ ಡಾಕ್ಟರ್ ಯಡಿಯೂರಪ್ಪ ಅಂತ ಹಾಕಿಕೊಳ್ಳೋದನ್ನೇ ಬಿಟ್ರು, ಅಂತಹ ಕಂಪನಿ ಇದೀಗ ಪ್ರಧಾನಿ ಮೋದಿಗೆ ಡಾಕ್ಟರೇಟ್ ಕೊಟ್ಟಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಸೋಲೋದಕ್ಕೆ ಓಟ್ ಕೊಡಿಸಿದರಲ್ಲ ಅದಕ್ಕೇ ಮೋದಿಗೆ ಅವಾರ್ಡ್ ಕೊಟ್ಟಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿಯವರು ಎಂದರೆ ಡೋಂಗಿಗಳು ಎಂದು ಕಿಡಿಕಾರಿ ಭ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿರುವ ರಾಮಲಿಂಗಾ ರೆಡ್ಡಿ, "ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ಯಾವ ಕಚೇರಿಗೆ ಹೋದರೂ ದುಡ್ಡಿಲ್ಲದೇ ಕೆಲಸ ಆಗುತ್ತಿಲ್ಲ. ಈ ಹಿಂದೆ ಇರಲಿಲ್ಲ ಎಂದಲ್ಲ, ಆದರೆ, ಅದಕ್ಕೊಂದು ಲಿಮಿಟ್ ಇತ್ತು. ಆದರೆ, ಈಗ ಭ್ರಷ್ಟಾಚಾರದ ಲಿಮಿಟ್ ಮೀರಿ ನಡೆಯುತ್ತಿದೆ" ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿ; ಟ್ವೀಟ್ ಮೂಲಕ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಘಟಕ
ರೈತ ವಿರೋಧಿ ಭೂ ಮಸೂದೆಯ ಬಗ್ಗೆಯೂ ಗಮನ ಸೆಳೆದಿರುವ ಅವರು, "ರೈತ ವಿರೋಧಿ ಕಾಯ್ದೆಗಳನ್ನ ಬಿಜೆಪಿ ಸರ್ಕಾರ ಜಾರಿ ಮಾಡುತ್ತಿದೆ. ಇದನ್ನು ವಿರೋಧಿಸಿ ರೈತರು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ರಾಜ್ಯ ಸರ್ಕಾರ ರೈತರನ್ನು ಮಾತನಾಡಿಸಲು ಈವರೆಗೆ ಮುಂದಾಗಿಲ್ಲ. ಇವರ ವಿರುದ್ಧ ಹೋರಾಟ ಮಾಡಿದವರನ್ನ ಖಲಿಸ್ತಾನಿಗಳು, ಪಾಕಿಸ್ತಾನಿಗಳು ಎಂದು ಬಿಂಬಿಸಲಾಗುತ್ತಿದೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ