ಶಿವಮೊಗ್ಗ: ಚನ್ನಗಿರಿಯ ಬಿಜೆಪಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅವರ ಭ್ರಷ್ಟಾಚಾರ ಹಗರಣಕ್ಕೆ (Corruption Case) ಸಂಬಂಧಿಸಿದಂತೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಈಶ್ವರಪ್ಪ, ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಈಗ ಪ್ರಾಥಮಿಕ ಹಂತದಲ್ಲಿದೆ. ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಅವರೇ ಹೇಳುತ್ತಿದ್ದಾರೆ. ಹೀಗಾಗಿ ಈಗಲೇ ಈ ಬಗ್ಗೆ ಏನು ಹೇಳಲು ಆಗುವುದಿಲ್ಲ ಎಂದು ಹೇಳಿದರು.
ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಯುತ್ತಿದೆ. ಕೋರ್ಟ್ಗೆ ಎಲ್ಲಾ ವಿವರವನ್ನು ವಿರೂಪಾಕ್ಷಪ್ಪ ನೀಡಿದ್ದಾರೆ ಎಂದ ಈಶ್ವರಪ್ಪ, ಉಪ್ಪು ತಿಂದವರು ನೀರು ಕುಡಿದೇ ಕುಡಿಯುತ್ತಾರೆ ಎಂದು ಹೇಳಿದರು.
'ಯಾರಿಗೆ ಟಿಕೆಟ್ ಇಲ್ಲ ಎಂದು ಬಿಎಸ್ವೈ ಹೇಳಿಲ್ಲ'
ಇನ್ನು ನಾಲ್ಕಾರು ಜನರಿಗೆ ಬಿಟ್ಟು ಬಿಜೆಪಿ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ ಎಂಬ ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ನಾಲ್ಕಾರು ಜನರು ಎಂದು ಅವರು ಹೇಳಿದ್ದಾರೆ. ಯಾರಿಗೆ ಟಿಕೆಟ್ ಇಲ್ಲ ಎಂದು ಅವರು ಹೇಳಿಲ್ಲ. ಆ ನಾಲ್ಕು ಜನರ ಯಾರಾದರೂ ಆಗಿರಬಹುದು. ಯಡಿಯೂರಪ್ಪ ಅವರು ಕೇಂದ್ರದ ಸಮಿತಿಯಲ್ಲಿದ್ದಾರೆ. ಅವರ ತಲೆಯಲ್ಲಿ ಏನೇನಿದಿಯೋ ನಮಗೆ ಗೊತ್ತಾಗಲ್ಲ. ಯಡಿಯೂರಪ್ಪ ಸೇರಿದಂತೆ ಪಕ್ಷದ ವರಿಷ್ಠರು ಈ ಬಗ್ಗೆ ಆಲೋಚಿಸುತ್ತಾರೆ. ನನಗೆ ಟಿಕೆಟ್ ಬಗ್ಗೆ ಪಕ್ಷದ ವರಿಷ್ಠರ ನಿರ್ಧಾರದಂತೆ ನಾನು ಮುಂದುವರೆಯುತ್ತೇನೆ ಎಂದು ಹೇಳಿದರು.
'ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳೇ ಬಂದ್ ಕರೆ ಕೊಟ್ಟಿದ್ದಾರೆ'
ಇದೇ ವೇಳೆ ಕಾಂಗ್ರೆಸ್ ಹೇಳಿದ್ದ ಎರಡು ಗಂಟೆಗಳ ಕಾಲದ ಬಂದ್ ಬಗ್ಗೆಯೂ ಮಾತನಾಡಿದ ಕೆಎಸ್ ಈಶ್ವರಪ್ಪ, ಬಂದ್ ಕರೆ ಕಟ್ಟಿರೋದು ಡಿಕೆ. ಶಿವಕುಮಾರ್ ಹಾಗೂ ಸಿದ್ಧರಾಮಯ್ಯ. ಇವರೇ ಭ್ರಷ್ಟಾಚಾರ ಮಾಡಿರುವವರು. ಇವರೇ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಈಗ ಬೇಲ್ ಮೇಲೆ ಇದ್ದಾರೆ. ಅರ್ಕಾವತಿ ವಿಚಾರದಲ್ಲಿ ಇವರು ಆರೋಪಿಯಾಗಿದ್ದಾರೆ. ಕಳ್ಳನೇ, ಈಗ ಕಳ್ಳ, ಕಳ್ಳ ಎಂದು ಕೂಗುವಂತಾಗಿದೆ. ಬಿಜೆಪಿ ಭ್ರಷ್ಟಾಚಾರ ಮಾಡಿದೆ ಎಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆದರೆ, ಈವರೆಗೂ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳೇ ಬಂದ್ ಕರೆ ಕೊಟ್ಟಿದ್ದಾರೆ. ಕಾಂಗ್ರೆಸ್ನವರು ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಂದ್ಗೆ ಕರೆ ಕೊಡಲು ಇವರಿಗೆ ಯಾವ ನೈತಿಕತೆ ಇದೆ? ಎಂದು ವ್ಯಂಗ್ಯವಾಡಿದರು.
ಇನ್ನು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆಯೂ ಮಾತನಾಡಿದ ಕೆಎಸ್ ಈಶ್ವರಪ್ಪ, ಒಂದೇ ಒಂದು ಹೆಸರು ಹೇಳಲಿ ನೋಡೋಣ. ಈವರೆಗೂ ಒಬ್ಬರೂ ಕೂಡ ಕಾಂಗ್ರೆಸ್ಗೆ ಹೋಗಿಲ್ಲ. ಮತ್ತೆ ಕಾಂಗ್ರೆಸ್ನವರು ಸುಳ್ಳು ಹೇಳುತ್ತಿದ್ದಾರೆ. ಸತ್ತೋಗುತ್ತಿರುವ ಪಾರ್ಟಿಗೆ ಯಾರಾದರೂ ಸೇರ್ತಾರೇನ್ರಿ...!? ಸ್ವಾರ್ಥಿಗಳು ಆಡುವ ಮಾತು ಇದು. ಕಾಂಗ್ರೆಸ್ನವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Shivamogga: ಮುಸಲ್ಮಾನ್ ಗೂಂಡಾಗಳಿಗೆ ಪೊಲೀಸರ ಹಾಗೂ ಸರ್ಕಾರದ ಭಯವಿಲ್ಲ; ಕಲ್ಲು ತೂರಾಟಕ್ಕೆ ಈಶ್ವರಪ್ಪ ಪ್ರತಿಕ್ರಿಯೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ