ಬೀದರ್: ಸಾಹುಕಾರರ ಮನೆಯಲ್ಲಿ ಮಲಗುವ ನಾಯಿಗೆ ಇವರು ಕೊಡುವ ವಿದ್ಯುತ್ ಸಾಕಾಗುವುದಿಲ್ಲ (Free Electricity) ಎಂದು ಜೆಡಿಎಸ್ (JDS) ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ (Congress) ಇನ್ನೂರು ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿರುವ ವಿಚಾರಕ್ಕೆ ಬೀದರ್ನಲ್ಲಿ (Bidar) ಪ್ರತಿಕ್ರಿಯೆ ನೀಡಿದ ಅವರು ಹೀಗಾದರೆ ಬಡವರಿಗೆ ಕೊಡುವ ಇನ್ನೂರು ಯೂನಿಟ್ ವಿದ್ಯುತ್ ಎಲ್ಲಿ ಸಾಗುತ್ತದೆ ಎಂದು ಪ್ರಶ್ನಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮರಾಠಿ ಪೇಶ್ವೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡುತ್ತಾರೆ ಎಂಬ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ವಿವಾದವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಿ ಎಂ ಇಬ್ರಾಹಿಂ, ಯಾವುದರ ವಿರುದ್ಧ ಬಸವಣ್ಣನವರು ಕೂಗೆತ್ತಿದರೋ, ಯಾವುದರ ವಿರುದ್ಧ ಕನಕದಾಸರು ಕೂಗೆತ್ತಿದರೋ, ಅದರ ವಿರುದ್ಧವಾಗಿ ಎಚ್ಡಿ ಕುಮಾರಸ್ವಾಮಿಯವರು ಕೂಗೆತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು. ಅಲ್ಲದೇ, ಬ್ರಾಹ್ಮಣರ ಬಗ್ಗೆ ಎಚ್ ಡಿ ಕುಮಾರ ಸ್ವಾಮಿ ಮಾತಾಡಿದ್ದು ತಪ್ಪಲ್ಲ, ಶೃಂಗೇರಿಯ ಶಾರದಾ ಪೀಠ ಒಡೆದವರು ಯಾರು? ಇದಕ್ಕೆ ಬಿಜೆಪಿಯರು ಸ್ಪಷ್ಟತೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
'ಸಿದ್ದರಾಮಯ್ಯರನ್ನ ಗೆಲ್ಲಿಸಿದ್ದು ನಾನೇ'
ಇನ್ನು ನಮ್ಮ ಜೆಡಿಎಸ್ ಪಕ್ಷ ಬಸವಣ್ಣನವರ ತತ್ವದ ಆಧಾರದ ಮೇಲೆ ನಡೆಯುತ್ತಿದೆ ಎಂದ ಸಿ ಎಂ ಇಬ್ರಾಹಿಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಎರಡು ಸಲ ರಾಜಕೀಯ ಜೀವನ ಕಲ್ಪಿಸಿಕೊಟ್ಟವನೂ ನಾನೇ. ಸಿದ್ದರಾಮಯ್ಯಗೆ ಮೇಕಪ್ ಮಾಡಿಸಿ ಮುಖ್ಯಮಂತ್ರಿ ಮಾಡಿಸಿದವನೂ ನಾನೇ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಗೆ ಕರೆತಂದು ಕ್ಷೇತ್ರದಲ್ಲಿ ಓಡಾಡಿ ಗೆಲ್ಲಿಸಿದವನೂ ನಾನೇ ಎಂದು ಹೇಳಿದರು.
ಸ್ಯಾಂಟ್ರೋ ರವಿ, ಸಿ.ಟಿ. ರವಿ ನೆಂಟನಾ?
ಇನ್ನು ಸ್ಯಾಂಟ್ರೋ ರವಿ, ಸಿ. ಟಿ. ರವಿ ಅವರ ನೆಂಟನಾ? ಎಂದು ಪ್ರಶ್ನೆ ಮಾಡಿದ ಸಿಎಂ ಇಬ್ರಾಹಿಂ, 12 ಮಂದಿಯನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದರಲ್ಲ, ಅದರ ಸಿಡಿ ಹೊರಗೆ ಬರಲಿ, ಅದರ ಮೇಲೆ ಇವತ್ತಿನ ಚುನಾವಣೆ ನಡೆಯುತ್ತದೆ, ಇವರು ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತಾರೆಯೇ? ಐದಾರು ಹೆಣ್ಣು ಮಕ್ಕಳು ಸ್ಯಾಂಟ್ರೋ ರವಿ ಬಗ್ಗೆ ದೂರು ಕೊಟ್ಟಿದ್ದಾರೆ. ಬಿಜೆಪಿಯವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ ? ಎಂದು ಖಾರವಾಗಿ ಪ್ರಶ್ನಿಸಿದರು.
ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಯಾರು? ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದ ಸಿ ಎಂ ಇಬ್ರಾಹಿಂ, ನಮ್ಮ ಪಕ್ಷದಿಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ. ಬಿಜೆಪಿಯವರಿಗೆ ತಾಕತ್ತಿದ್ದರೆ, ಧಮ್ ಇದ್ದರೆ ಪ್ರಹ್ಲಾದ್ ಜೋಶಿಯವರನ್ನ ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ