ಬೆಂಗಳೂರು (ಮಾರ್ಚ್ 20); ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವೆಸಗಿದ್ದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿದ್ದ ಅರ್ಜಿಯ ಮಧ್ಯಂತರ ಆದೇಶವನ್ನು ಇಂದು ಹೈಕೋರ್ಟ್ ಪ್ರಕಟಿಸಲಿದೆ.
2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಮುನಿರತ್ನ ಪ್ರತಿನಿಧಿಸುವ ಕ್ಷೇತ್ರದಲ್ಲಿ ನಕಲಿ ಮತದಾರ ಚೀಟಿಗಳು ಪತ್ತೆಯಾಗಿದ್ದವು. ಹೀಗಾಗಿ ಮುನಿರತ್ನ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ ಆರ್ಆರ್ ನಗರದ ಪರಾಜಿತ ಅಭ್ಯರ್ಥಿ ಮುನಿರಾಜು ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಅವರ ಶಾಸಕ ಸ್ಥಾನವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದರು.
ಆದರೆ, ವಿಚಾರಣೆ ಹಂತದಲ್ಲಿ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೋರ್ಟ್ ತಳ್ಳಿಹಾಕಿತ್ತು. ಹೀಗಾಗಿ ಮುನಿರಾಜು ಮತ್ತೊಂದು ದೂರು ಸಲ್ಲಿಸಿದ್ದರು. ಹೀಗಾಗಿ ಈ ಎರಡೂ ದೂರುಗಳ ಕುರಿತ ಆದೇಶವನ್ನು ಹೈಕೊರ್ಟ್ ಇದು ಪ್ರಕಟಿಸಲಿದೆ. ಕಲಬುರಗಿ ಪೀಠದಿಂದ ನ್ಯಾ|ಕೃಷ್ಣ ಎಸ್ ದೀಕ್ಷಿತ್ ವಿಡಿಯೋ ಕಾನ್ಫರೆನ್ಸ್ ಮೂಲಕ ಆದೇಶ ಪ್ರಕಟಿಸಲಿದ್ದಾರೆ.
ಕಳೆದ ವರ್ಷ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಶಾಸಕ ಮುನಿರತ್ನ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು. ಅಲ್ಲದೆ, ಸ್ಪೀಕರ್ ಮತ್ತು ಸುಪ್ರೀಂ ಕೋರ್ಟ್ನಿಂದ ಅನರ್ಹ ಎಂದೂ ಮುದ್ರೆ ಒತ್ತಿಸಿಕೊಂಡಿದ್ದರು. ಹೀಗಾಗಿ ಆರ್ ಆರ್ ನಗರಕ್ಕೆ ಉಪ ಚುನಾವಣೆ ಎದುರಾಗಿತ್ತು. ಆದರೆ, ಕೋರ್ಟ್ ಮುನಿರಾಜು ಗೌಡ ಸಲ್ಲಿಸಿದ್ದ ಅರ್ಜಿ ಬಾಕಿ ಇದ್ದ ಕಾರಣ ಚುನಾವಣಾ ಆಯೋಗ ಆರ್ ಆರ್ ನಗರದ ಚುನಾವಣೆಯನ್ನು ಮಾತ್ರ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.
ಇಂದು ಹೈಕೋರ್ಟ್ ಆದೇಶ ಪ್ರಕಟವಾದ ನಂತರ ಚುನಾವಣಾ ಆಯೋಗ ಆರ್ ಆರ್ ನಗರದ ಚುನಾವಣಾ ದಿನಾಂಕವನ್ನು ಘೋಷಿಸಿದರೂ ಅಚ್ಚರಿ ಇಲ್ಲ.
ಇದನ್ನೂ ಓದಿ : 7 ವರ್ಷ ಹಗ್ಗಜಗ್ಗಾಟದ ನಿರ್ಭಯಾ ಅತ್ಯಾಚಾರ ಪ್ರಕರಣ ನೇಣು ಶಿಕ್ಷೆಯೊಂದಿಗೆ ಸಮಾಪ್ತಿ; ಸೂರ್ಯೋದಯಕ್ಕೂ ಮುನ್ನವೇ ಕಣ್ಮುಚ್ಚಿದ ಅಪರಾಧಿಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ