ಬಿಹಾರ: ಆರ್ಜೆಡಿ ವರಿಷ್ಠ (RJD) ಹಾಗೂ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಜೈಲಿನಲ್ಲಿ (Jail) ಶಿಕ್ಷೆ ಅನುಭವಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಅವರಿಗೆ ಇದೀಗ ಇಡಿ (ED) ಸಂಕಷ್ಟ ಎದುರಾಗಿದೆ. ಲಾಲೂ ಪ್ರಸಾದ್ ಯಾದವ್ ಅವರ ಮನೆ, ಅವರ ಪತ್ನಿ, ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ (Rabri Devi) ಮನೆ, ಅವರ ಪುತ್ರರಿಂದ ಮನೆ, ಕಚೇರಿ ಸೇರಿದಂತೆ ಹಲವೆಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (Enforcement Directorate Officers) ದಾಳಿ ನಡೆಸಿದ್ದರು. ಇದೀಗ ಲಾಲೂ ಪ್ರಸಾದ್ ಯಾದವ್ ಮನೆಯಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಮೊತ್ತದ ನಗದು ಹಣ ಹಾಗೂ 600 ಕೋಟಿ ಹಣದ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆ ಪತ್ರಗಳು ಲಭ್ಯವಾಗಿವೆ ಅಂತ ಹೇಳಲಾಗಿದೆ.
ಏನಿದು ಪ್ರಕರಣ?
2004-09ರ ಅವಧಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಭಾರತೀಯ ರೈಲ್ವೇಯ ವಿವಿಧ ವಲಯಗಳಲ್ಲಿ ಗ್ರೂಪ್ ಡಿ ಹುದ್ದೆಗಳಿಗೆ ವಿವಿಧ ವ್ಯಕ್ತಿಗಳನ್ನು ನೇಮಿಸಲಾಗಿತ್ತು. ಈ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿತ್ತು ಎನ್ನಲಾಗಿದೆ. ಉದ್ಯೋಗದ ಬದಲಿಗೆ ಅಭ್ಯರ್ಥಿಗಳು ತಮ್ಮ ಭೂಮಿಯನ್ನು ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಿದರು ಎಂದು ಆರೋಪಿಸಲಾಗಿದೆ.
ಲಾಲೂ ಪ್ರಸಾದ್ ಕುಟುಂಬಕ್ಕೆ ಇಡಿ ಶಾಕ್
ಲಾಲೂ ಪ್ರಸಾದ್ ಯಾದವ್ ಅವರ ದಕ್ಷಿಣ ದೆಹಲಿ ಮನೆ, ಲಾಲೂ ಪ್ರಸಾದ್ ಅವರ ಪುತ್ರಿಯರಾದ ರಾಗಿಣಿ ಯಾದವ್, ಚಂದಾ ಯಾದವ್ ಮತ್ತು ಹೇಮಾ ಯಾದವ್, ಆರ್ಜೆಡಿ ಮಾಜಿ ಶಾಸಕ ಸೈಯದ್ ಅಬು ದೋಜಾನಾ, ಅಮಿತ್ ಕತ್ಯಾಲ್, ನವದೀಪ್ ಸರ್ದಾನ ಮತ್ತು ಪ್ರವೀಣ್ ಜೈನ್ ಅವರಿಗೆ ಪಾಟ್ನಾ, ಫುಲ್ವಾರಿ ಷರೀಫ್, ದೆಹಲಿ ಮುಂತಾದ ಸ್ಥಳಗಳಲ್ಲಿ ಇಡಿ ದಾಳಿ ನಡೆಸಲಾಗಿತ್ತು. ಜೊತೆಗೆ ರಾಂಚಿ ಮತ್ತು ಮುಂಬೈನಲ್ಲಿಯೂ ಹುಡುಕಾಟ ನಡೆಸಲಾಗಿತ್ತು.
ಇದನ್ನೂ ಓದಿ: Marriage: ಒಂದೇ ದಿನ, ಒಂದೇ ಮುಹೂರ್ತದಲ್ಲಿ ಇಬ್ಬರು ಯುವತಿಯರಿಗೆ ತಾಳಿ ಕಟ್ಟಿದ ವರ! ಇದು ವಿಶೇಷ ಟ್ರಯಾಂಗಲ್ ಲವ್ಸ್ಟೋರಿ!
ದಾಖಲೆ ಇಲ್ಲದ 1 ಕೋಟಿ ರೂಪಾಯಿ ನಗದು ಜಪ್ತಿ
ಉದ್ಯೋಗಕ್ಕಾಗಿ ಭೂಮಿ ಪಡೆದಿರುವ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬ ಸದಸ್ಯರ ವಿರುದ್ಧ ಇಡಿ ದಾಳಿ ಮುಂದುವರೆದಿದೆ. ಈ ವೇಳೆ ಬರೋಬ್ಬರಿ 1 ಕೋಟಿ ದಾಖಲೆ ಇಲ್ಲದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
600 ಕೋಟಿ ರೂಪಾಯಿಗಳ ಅವ್ಯವಹಾರದ ಶಂಕೆ
ಇನ್ನೊಂದು ರಿಯಲ್ ಎಸ್ಟೇಟ್ ಮತ್ತು ಇತರ ಕ್ಷೇತ್ರಗಳಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬದ ಪರವಾಗಿ ಅವ್ಯವಹಾರ ನಡೆದಿರುವ ಬಗ್ಗ ದಾಖಲೆ ಸಿಕ್ಕಿವೆ. ಇಡಿ ಅಧಿಕಾರಿಗಳ ದಾಳಿ ವೇಳೆ 600 ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಜೊತೆಗೆ 1.5 ಕೆಜಿ ಚಿನ್ನಾಭರಣ, 540 ಗ್ರಾಂ ಚಿನ್ನದ ಗಟ್ಟಿ ಮತ್ತು 900 ಅಮೆರಿಕನ್ ಡಾಲರ್ ಸೇರಿದಂತೆ ವಿದೇಶಿ ಕರೆನ್ಸಿ ವಶಪಡಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಇಡಿ ವಿರುದ್ಧ ಲಾಲೂ ಕುಟುಂಬಸ್ಥರ ಆರೋಪ
ಇನ್ನು ಇಡಿ ಅಧಿಕಾರಿಳ ವಿರುದ್ಧವೇ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ತಮ್ಮ ಮಗ ತೇಜಸ್ವಿ ಯಾದವ್ ಅವರ ದೆಹಲಿ ನಿವಾಸದಲ್ಲಿ ದಾಳಿಯ ಸಂದರ್ಭದಲ್ಲಿ ಇಡಿ ಅಧಿಕಾರಿಗಳು, ತಮ್ಮ ಗರ್ಭಿಣಿ ಸೊಸೆಯನ್ನು 15 ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಮಾಡಿ, ಕಿರುಕುಳ ನೀಡಿದ್ದಾರೆ ಎಂದು ಲಾಲೂ ಪ್ರಸಾದ್ ಯಾದವ್ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ