ಕೊಡಗು(ಜೂ.28): ಕೊಡಗು (Kodagu) ಜಿಲ್ಲೆಯಲ್ಲಿ ಮತ್ತೆ ಹಲವು ಗ್ರಾಮಗಳಲ್ಲಿ ಭೂಕಂಪವಾಗಿದೆ. ಮಡಿಕೇರಿ (Madikeri) ತಾಲ್ಲೂಕಿನ ಸಂಪಾಜೆ, ಕರಿಕೆ, ಚೆಂಬು ಭಾಗಮಂಡಲ, ನಾಪೋಕ್ಲು, ಗಾಳಿಬೀಡು, ಅರವತ್ತೊಕ್ಲು ಮತ್ತು ಮಡಿಕೇರಿ ನಗರದ ಕೆಲವೆಡೆ ಭೂಕಂಪವಾಗಿದೆ. ಬೆಳಿಗ್ಗೆ 7 ಗಂಟೆ 45 ನಿಮಿಷದಲ್ಲಿ ಎರಡು ಸೆಕೆಂಡುಗಳ ಕಾಲ ಭೂಕಂಪವಾಗಿದೆ. ಭೂಕಂಪನಕ್ಕೆ (Earthquake) ಜನರಿಗೆ ಹಿಡಿದು ನೂಕಿದ ಅನುಭವವಾಗಿದೆ. ಇನ್ನು ಚೆಂಬು ಗ್ರಾಮದಲ್ಲಿ ಜನರು ಹೆದರಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಭೂಕಂಪದ ಅನುಭವವಾಗಿರುವ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರು ಬಂದಿದೆ.
ಇದನ್ನು ಪರಿಶೀಲಿಸಿದಾಗ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಮಾಹಿತಿಯ ಪ್ರಕಾರ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಿಂದ 5.2 ಕಿಮೀ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕ 3.0 ಮ್ಯಾಗ್ನಿಟ್ಯೂಡ್ನಲ್ಲಿ ಭೂಕಂಪವಾಗಿದೆ.
ಈ ಭೂಕಂಪದಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ ಹಲವು ಸೆಕೆಂಡ್ ಗಳಷ್ಟು ಸಮಯ ಕಂಪನದ ಅನುಭವವಾಗಿದೆ. ಕೊಡಗು ಜಿಲ್ಲೆ ಭೂಕಂಪದ ವಲಯ ಮೂರರಲ್ಲಿ ಬರುತ್ತದೆ. ಈ ಭೂಕಂಪನವನ್ನು ವೈಜ್ಞಾನಿಕವಾಗಿ ಪರಿಶೀಲಿಸಿದಾಗ ಸುಮಾರು 50 ಕಿಮೀ ಪ್ರದೇಶದವರೆಗೂ ಅನುಭವವಾಗುವ ಸಾಧ್ಯತೆ ಇದೆ.
ಗಾಬರಿಯಾಗೋ ಅಗತ್ಯವಿಲ್ಲ ಎಂದ ಅಧಿಕಾರಿಗಳು
ಆದರೆ ಈ ಕಂಪನದಿಂದ ಭಯ ಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ ವಸ್ತು ಅಲುಗಾಡಬಹುದು. ಜನತೆ ಗಾಬರಿ ಆಗುವ ಅವಶ್ಯಕತೆಯಿಲ್ಲ. ಈ ಭೂಕಂಪದ ಅನುಭವ ತಮಗೇನಾದರೂ ಆದರೆ ಹಾಗೂ ಭೂಮಿಯಲ್ಲಿ ಬಿರುಕುಗಳು ಕಂಡು ಬಂದರೆ ಕೊಡಗು ಜಿಲ್ಲೆಯ ವಿಪತ್ತು ನಿರ್ವಹಣಾ ಕೇಂದ್ರ 1077 ಕ್ಕೆ ಕರೆ ಮಾಡಿ ಮಾಹಿತಿ ಕೊಡಬೇಕಾಗಿ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಅವರು ಕೋರಿದ್ದಾರೆ.
ಒಂದು ವಾರದಲ್ಲಿ ಮೂರು ಬಾರಿ ಕಂಪಿಸಿದ ಭೂಮಿ
ಕಳೆದ ಒಂದು ವಾರದ ಅಂತರದಲ್ಲಿ 3 ಬಾರಿ ಭೂಕಂಪವಾಗಿದ್ದು, ಜನರು ಆತಂಕಪಡುವಂತೆ ಆಗಿದೆ. ಜೂನ್ 23 ಗುರುವಾರ ಮುಂಜಾನೆ 4 ಗಂಟೆ 37 ನಿಮಿಷಕ್ಕೆ ಭೂಕಂಪವಾಗಿತ್ತು. ಅದಾದ ಬಳಿಕ ಮತ್ತೆ ಶನಿವಾರ ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಭೂಕಂಪವಾಗಿತ್ತು. ಗುರುವಾರ ಸಂಭವಿಸಿದ್ದ ಭೂಕಂಪದ ಕೇಂದ್ರ ಬಿಂದು ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿಭಾಗದಲ್ಲಿ ಭೂಕಂಪವಾಗಿತ್ತು.
ಇದರಿಂದ ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿ, ಸೋಮವಾರಪೇಟೆ ತಾಲೂಕಿನ ಅಮ್ಮಳ್ಳಿ, ನೇಗಳ್ಳೆ ಮತ್ತು ರೇಂಜರ್ ಬ್ಲಾಕ್ ನಲ್ಲಿ ಭೂಕಂಪದ ಅನುಭವವಾಗಿತ್ತು. ಎರಡನೇ ಬಾರಿಗೆ ಕೊಡಗಿನ ಕರಿಕೆಯಲ್ಲಿಯೇ ಭೂಕಂಪವಾಗಿತ್ತು. ಆಗ ಕರಿಕೆ, ಚೆಂಬು ಸೇರಿದಂತೆ ಹಲವೆಡೆ ಭೂಕಂಪವಾಗಿತ್ತು.
ಇದನ್ನೂ ಓದಿ: ಹಾಸನದಲ್ಲಿ ಬೆಳಗಿನ ಜಾವ ಕಂಪಿಸಿದ ಭೂಮಿ; ನಿದ್ದೆಯಲ್ಲಿದ್ದ ಜನಕ್ಕೆ ಶಾಕ್!
ಇದೀಗ ಮತ್ತೆ ಮೂರನೇ ಬಾರಿಗೆ ಭೂಕಂಪವಾಗಿದ್ದು, ಕೊಡಗಿನ ಕರಿಕೆ, ಸಂಪಾಜೆ, ಚೆಂಬು, ನಾಪೋಕ್ಲು ಮತ್ತು ಮಡಿಕೇರಿ ನಗರದ ಕೆಲವು ಏರಿಯಾಗಳಲ್ಲಿ ಭೂಕಂಪನವಾದ ಅನುಭವವಾಗಿದೆ. ಕರಿಕೆಯಲ್ಲಿ ಬೆಳಿಗ್ಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾಗ ಭೂಕಂಪಿಸಿದ ಅನುಭವವಾಗಿದೆ. ಇದರಿಂದ ಜನರು ಹೆದರಿ ಅತ್ತಿತ್ತ ಓಡಾಡಿದ್ದಾರೆ ಎಂದು ಗ್ರಾಮದ ಅಜಯ್ ಎಂಬುವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಕೊಡಗಿನಲ್ಲಿ ಮತ್ತೆ ಶನಿವಾರ ಭೂಕಂಪನವಾಗಿದೆ. ಮಡಿಕೇರಿ (Madikeri) ತಾಲ್ಲೂಕಿನ ಕರಿಕೆ, ಚೆಂಬು, ಗೂನಡ್ಕ ಮತ್ತು ಸಂಪಾಜೆಗಳಲ್ಲಿ ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಭೂಕಂಪವಾಗಿದೆ. ಭೂಕಂಪನದ (Earthquake) ತೀವ್ರತೆಗೆ ಸಂಪಾಜೆ ಸಮೀಪದ ಗೂನಡ್ಕ ಗ್ರಾಮದ ಅಬುಶಾಲಿ ಎಂಬುವರ ಮನೆಯ ಗೋಡೆಗಳು ಬಿರುಕುಬಿಟ್ಟಿವೆ.
ಇದನ್ನೂ ಓದಿ: Kolara: ಮುನಿಸ್ವಾಮಿ ರಾಜಕೀಯ ಪ್ರತಿಷ್ಠೆಗೆ ಪೊಲೀಸರು ಹೈರಾಣ!
ಮಡಿಕೇರಿ ತಾಲ್ಲೂಕಿನ ಕರಿಕೆ ಗ್ರಾಮ ಪಟ್ಟಿಘಾಟ್ ಅರಣ್ಯ ಪ್ರದೇಶದ ಭೂಮಿಯಲ್ಲಿ ಭಾರಿ ಶಬ್ಧದೊಂದಿಗೆ ಭೂಕಂಪನವಾಗಿದೆ. ಪರಿಣಾಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮದ ಸುಧೀರ್ ಎಂಬುವರು ಹೆದರಿ ಹೋಗಿದ್ದಾರೆ. ಅದಾದ ಎರಡೇ ನಿಮಿಷದಲ್ಲಿ ಗ್ರಾಮದ ಎಲ್ಲೆಡೆಯಿಂದ ಜನರು ಕರೆಮಾಡಿ ಭೂಮಿ ಕಂಪಿಸಿದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ