ಕಾಸರಗೋಡು: ರಸ್ತೆ ಅಗಲೀಕರಣಕ್ಕಾಗಿ (Road Widening) ಮಸೀದಿಯೊಂದರ ಮಿನಾರ್ (Masjid Minar) ಕೆಡಹುವ ಸಮಯದಲ್ಲಿ ಅಚಾತುರ್ಯವೊಂದು ಸಂಭವಿಸಿದ ಘಟನೆ ಕೇರಳದ ಕಾಸರಗೋಡು (Kasaragod) ನಗರ ಹೊರ ವಲಯದ ನುಳ್ಳಿಪ್ಪಾಡಿ (Nullippady) ಬಳಿ ನಡೆದಿದೆ. ಮಂಗಳವಾರ ಸಂಜೆ ಮಸೀದಿಯ ಗೋಪುರ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಸ್ವಲ್ಪದರಲ್ಲೇ ಭಾರೀ ದೊಡ್ಡ ಅನಾಹುತ ತಪ್ಪಿದೆ.
ಜೆಸಿಬಿ ಮೂಲಕ ಮಸೀದಿ ಮಿನಾರ್ ತೆರವು
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸ್ವಲ್ಪದರಲ್ಲೇ ಬಹುದೊಡ್ಡ ಅನಾಹುತ ತಪ್ಪಿದ್ದು, ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಕಾಸರಗೋಡು ನಗರ ಹೊರವಲಯದ ನುಳ್ಳಿಪ್ಪಾಡಿಯಲ್ಲಿ ಇರುವ ಮಸೀದಿಯ ಗೋಪುರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿತ್ತು. ಪಕ್ಕದಲ್ಲೇ ಹೈಟೆನ್ಶನ್ ವಿದ್ಯುತ್ ತಂತಿಗಳು ಕೂಡ ಹಾದು ಹೋಗಿತ್ತು. ಆದರೆ ಮಸೀದಿಯ ಮಿನಾರ್ ಗೋಪುರವನ್ನು ಜೆಸಿಬಿ ಮೂಲಕ ಕೆಡಹುವ ವೇಳೆ ಏಕಾಏಕಿ ಗೋಪುರ ಹೈ ಟೆನ್ಶನ್ ವಯರ್ ಮೇಲೆ ಬಿದ್ದಿದೆ. ಇದರಿಂದ ಅಕ್ಕಪಕ್ಕದಲ್ಲೆಲ್ಲ ಇದ್ದ ವಿದ್ಯುತ್ ಕಂಬಗಳು ತುಂಡಾಗಿ ಕೆಳಗೆ ಬಿದ್ದಿದ್ದು, ಆದರೆ ಯಾರಿಗೂ ಪ್ರಾಣಪಾಯದಂತಹ ಹಾನಿ ಆಗಿಲ್ಲ.
ಹತ್ತಾರು ವಿದ್ಯುತ್ ಕಂಬಗಳು ಬಿದ್ದು ಜಖಂ
ಮಸೀದಿಯ ಮೇಲ್ಭಾಗದ ಮಿನಾರ್ ನೇರವಾಗಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆಯೇ ಉರುಳಿದ ಕಾರಣ ಮಿನಾರ್ ಬಿದ್ದ ರಭಸಕ್ಕೆ ತಂತಿಗಳು ಸ್ಪರ್ಶಿಸಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಪರಿಣಾಮ ಹತ್ತಿರ ಇದ್ದ ಸುಮಾರು ಹತ್ತಾರು ಕಂಬಗಳು ಧರಾಶಾಹಿಯಾಗಿ ಹಾನಿ ಉಂಟಾಗಿದೆ. ಅಲ್ಲದೇ, ರಸ್ತೆಯಲ್ಲಿ ಓಡಾಡುತ್ತಿದ್ದ ಹತ್ತಾರು ವಾಹನಗಳ ಮಧ್ಯೆ ವಿದ್ಯುತ್ ಕಂಬಗಳು ಬಿದ್ದು ಜಖಂ ಉಂಟಾಗಿದೆ.
ಬೇಜವಾಬ್ದಾರಿಗೆ ವಾಹನ ಸವಾರರ ಹಿಡಿ ಶಾಪ
ಘಟನೆ ನಡೆದ ಬೆನ್ನಲ್ಲೇ ಕಾಸರಗೋಡು - ಚೆರ್ಕಳ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಉರುಳಿ ಬಿದ್ದ ವಿದ್ಯುತ್ ಕಂಬಗಳ ತೆರವು ಆಗುವ ತನಕ ಗಂಟೆಗಟ್ಟಲೇ ವಾಹನಗಳು ರಸ್ತೆಯಲ್ಲೇ ನಿಲ್ಲಬೇಕಾದ ಸ್ಥಿತಿ ಉಂಟಾಯಿತು. ಇದರಿಂದ ಕೆಲಸ ಕಾರ್ಯಗಳನ್ನು ಮುಗಿಸಿ ಮನೆಗೆ ಹೊರಟಿದ್ದ ವಾಹನ ಸವಾರರು ಮನೆ ತಲುಪಲು ತುಂಬಾ ತಡವಾಯಿತು. ಜೊತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಮಿನಾರ್ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳಿಗೆ ವಾಹನ ಸವಾರರು ಹಿಡಿಶಾಪ ಹಾಕುವಂತಾಯಿತು.
ಪ್ರಾಣಪಾಯ ಸಂಭವಿಸದೇ ಇದ್ದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಿದ ಪ್ರತ್ಯಕ್ಷದರ್ಶಿಗಳು
ನುಳ್ಳಿಪ್ಪಾಡಿಯಲ್ಲಿನ ಮಸೀದಿಯ ಮಿನಾರ್ ತೆರವು ವೇಳೆ ಮುಂಜಾಗರೂಕತಾ ಕ್ರಮ ಕೈಗೊಳ್ಳದೆಯೇ ಇಂತಹ ಕಾರ್ಯಾಚರಣೆಗೆ ಇಳಿದ ಪರಿಣಾಮ ಮಹಾ ಯಡವಟ್ಟು ಸಂಭವಿಸಿದ್ದು, ಸದ್ಯ ಇಂತಹ ಮಹಾ ಅವಘಡದಲ್ಲಿ ಯಾವುದೇ ಪ್ರಾಣಪಾಯ ಉಂಟಾಗದೇ ಇರೋದೇ ಆಶ್ಚರ್ಯ ತರಿಸಿದೆ. ಈ ವೇಳೆ ಸ್ಥಳದಲ್ಲೇ ಇದ್ದ ಪ್ರತ್ಯಕ್ಷದರ್ಶಿಗಳು ಅಪಾಯ ಸಂಭವಿಸದೇ ಇದ್ದುದ್ದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಿದರು.
ಘಟನೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಕೆಎಸ್ಇಬಿ ಅಧಿಕಾರಿಗಳು ಉರುಳಿ ಬಿದ್ದ ವಿದ್ಯುತ್ ಕಂಬಗಳು ಮತ್ತು ಹೈಟೆನ್ಶನ್ ವಯರ್ಗಳ ತೆರವು ಕಾರ್ಯಾಚರಣೆ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ