ಬೆಂಗಳೂರು (ಏ. 2): ಎಸ್ಐಟಿ ಮುಂದೆ ಇಂದು ವಿಚಾರಣೆಗೆ ಹಾಜರಾಗಬೇಕಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ. ಈ ಕುರಿತು ಮಾತನಾಡಿರುವ ಅವರ ಪರ ವಕೀಲರಾದ ಶ್ಯಾಮ್ ಸುಂದರ್, ರಮೇಶ್ ಜಾರಕಿಹೊಳಿಗೆ ಆರೋಗ್ಯ ಸಮಸ್ಯೆಯಾಗಿದೆ. ಈ ಹಿನ್ನಲೆ ಇಂದು ವಿಚಾರಣೆಗೆ ಹಾಜರಾಗಿಲ್ಲ. ಈ ಕುರಿತು ಎಸ್ಐಟಿ ತಂಡದ ಗಮನಕ್ಕೆ ತರಲಾಗಿದ್ದು, ಎರಡು ದಿನ ಕಾಲಾವಕಾಶ ಕೇಳಲಾಗಿದೆ. ಅವರು ಮತ್ತೊಮ್ಮೆ ನೊಟೀಸ್ ಕೊಡುವುದಾಗಿ ತಿಳಿಸಿದ್ದಾರೆ.ಅವರಿಗೆ ಯಾವುದೇ ಬಂಧನದ ಭೀತಿ ಇಲ್ಲ. ಅನಾರೋಗ್ಯದ ಹಿನ್ನಲೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಗೋಕಾಕ್ನಲ್ಲಿಯೇ ಇದ್ದಾರೆ. ಎಲ್ಲೂ ಹೋಗಿಲ್ಲ ಎಂದು ತಿಳಿಸಿದರು.
ಈಗಾಗಲೇ ಎರಡು ಬಾರಿ ಎಸ್ಐಟಿ ಮುಂದೆ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿದ್ದಾರೆ. ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಬಳಿಕ ರಮೇಶ್ ಜಾರಕಿಹೊಳಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೆಚ್ಚಿನ ವಿಚಾರಣೆಗೆ ಇಂದು ಹಾಜರಾಗುವಂತೆ ಅವರಿಗೆ ಎಸ್ಐಟಿ ಇಂದು ನೋಟಿಸ್ ನೀಡಿತ್ತು. ಅವರು ಇಂದು ವಿಚಾರಣೆಗೆ ಹಾಜರಾಗುವುದು ಬಹುತೇಕ ಅನುಮಾನ ಎನ್ನಲಾಗಿತ್ತು. ಈಗ ಅವರ ಪರ ವಕೀಲರು ಎಸ್ಐಟಿ ಮುಂದೆ ಹಾಜರಾಗಿ, ಅವರ ಗೈರಿನ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಚಾರಣೆಗೆ ಹಾಜರಾದ ಸಂತ್ರಸ್ತೆ
ಕಳೆದೆರಡು ಮೂರು ದಿನಗಳಿಂದ ಎಸ್ಐಟಿ ವಿಚಾರಣೆಗೆ ಹಾಜರಾಗಿರುವ ಸಂತ್ರಸ್ತ ಯುವತಿ ಇಂದು ಕೂಡ ಎಸ್ಐಟಿ ವಿಚಾರಣೆ ಹಾಜರಾಗಿದ್ದಾರೆ. ಕಳೆದೆರಡು ದಿನಗಳಿಂದ ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸಂತ್ರಸ್ತೆಯನ್ನು ಇಂದು ಅಧಿಕಾರಿಗಳು ಪ್ರಶ್ನಿಸಲಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ಸಂತ್ರಸ್ತೆಯನ್ನು ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಮಹಜರು ವೇಳೆ ಯುವತಿಯಿಂದ ಪಡೆದ ಹೇಳಿಕೆ ಆಧಾರದ ಮೇಲೆ ಇಂದು ಎಸ್ಐಟಿ ಅಧಿಕಾರಿಗಳು ಯುವತಿಯ ವಿಚಾರಣೆ ನಡೆಸಲಿದ್ದಾರೆ.
ಟೆಕ್ನಿಕಲ್ ಸೆಲ್ಗೆ ತನಿಖಾಧಿಕಾರಿ ಎಸಿಪಿ ಕವಿತಾ, ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ, ಇನ್ಸ್ಪೆಕ್ಟರ್ ಮಾರುತಿ, ಕುಮಾರಸ್ವಾಮಿ ಇಂದು ಸುದೀರ್ಘ ವಿಚಾರಣೆ ನಡೆಸಲಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ