ದಾವಣಗೆರೆ (ನ.25): ಜನನ ಪ್ರಮಾಣದಿಂದ ಹಿಡಿದು ಬೀದಿ ದೀಪದ ಸೌಲಭ್ಯದವರೆಗೂ ಜನರು ಮಹಾನಗರ ಪಾಲಿಕೆ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಇದೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಎಂಬ ವಿನೂತನ ಕಾರ್ಯಕ್ರಮವನ್ನು ದಾವಣಗೆರೆ ಮಹಾನಗರ ಪಾಲಿಕೆ ಜಾರಿಗೆ ತಂದಿದೆ. ಈ ಮೂಲಕ ಜನರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ಹೋಗಿ ನಿವಾರಿಸುವ ಯತ್ನ ನಡೆಸಿದೆ. ಈ ಕಾರ್ಯಕ್ರಮ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಿ ಎ ಸವರಾಜ ಶ್ಲಾಘನೆ ವ್ಯಕ್ತಪಡಿಸಿದರು. ‘ಮನೆ ಬಾಗಿಲಿಗೆ ಮಹಾನಗರಪಾಲಿಕೆ’ ಎಂಬ ವಿನೂತನ ಕಾರ್ಯಕ್ರಮದಿಂದ ಆಡಳಿತ ಯಂತ್ರವೇ ತಮ್ಮ ಮನೆ ಬಾಗಿಲಿಗೆ ಬಂದು ಸೇವೆ ನೀಡಲಿರುವುದು ಸಂತಸದಾಯಕ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಲಭೂತ ಸೌಕರ್ಯ ಒದಗಿಸುವ ದಿಸೆಯಲ್ಲಿ ದಾವಣಗೆರೆ ಮಹಾನಗರಪಾಲಿಕೆ ಮುಂಚೂಣಿಯಲ್ಲಿದ್ದು, ಇದೇ ರಾಷ್ಟ್ರದಲ್ಲಿಯೇ ಮೊದಲ ಬಾರಿ ಈ ರೀತಿಯ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಮೂಲಕ ಜನರು ಪಾಲಿಕೆ ಕಚೇರಿಗೆ ಅಲೆಯುವುದು ತಪ್ಪುವುದರ ಜೊತೆಗೆ ಕಾಲಮಿತಿಯೊಳಗೆ ತಮ್ಮ ಕೆಲಸಗಳಾಗಲಿವೆ. ಸಾರ್ವಜನಿಕರು ಯಾರೇ ಮಧ್ಯವರ್ತಿಗಳನ್ನು ಅವಲಂಬಿಸಬೇಕಿಲ್ಲ. ಜನನ ಮರಣ ಪ್ರಮಾಣ ಪತ್ರದಿಂದಿಡಿದು ಖಾತಾ ಬದಲಾವಣೆ, ಕಟ್ಟಡ ನವೀಕರಣ, ಕುಡಿಯುವ ನೀರು ಬೀದಿ ದೀಪದಂತಹ ಸೌಲಭ್ಯಗಳು ದೊರೆಯುವುದರಿಂದ ಜಿಲ್ಲೆ ಜನತೆ ಸುಖ ಸಂತೋಷ ನೆಮ್ಮದಿಯಿಂದ ಇರಬಹುದಾಗಿದೆ ಎಂದರು.
ಈಗಾಗಲೇ ಮಹಾನಗರಪಾಲಿಕೆಗೆ ರಾಜ್ಯ ಸರ್ಕಾರ ರೂ.125 ಕೋಟಿ ಬಿಡುಗಡೆ ಮಾಡಿದ್ದು ಅದಕ್ಕಾಗಿ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ಆಡಳಿತ ಯಂತ್ರ ಮತ್ತಷ್ಟು ಚುರುಕು ಪಡೆದು ಪ್ರತಿ ವಾರ್ಡ್ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳಾಗಿ ಎಲ್ಲರಿಗೂ ಸೌಲಭ್ಯಗಳು ಸಿಗಲಿ ಎಂದು ಆಶಿಸಿದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸುವ ದಿಸೆಯಲ್ಲಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿದೆ. ಅವರೂ ಕೂಡ ಸಮ್ಮತಿಸಿದ್ದು ದಾವಣಗೆರೆ ನಗರವನ್ನು ಸುಸಜ್ಜಿತ ಜಿಲ್ಲಾಸ್ಪತ್ರೆ ಆಗಲಿದೆ ಎಂದರು.
ಸಂಸದ ಸಿದ್ದೇಶ್ವರ ಮಾತನಾಡಿ, ಪಾಲಿಕೆ ಕೆಲಸಗಳಿಗೆ ಹಿನ್ನೆಡೆಯಾಗಿತ್ತು. ಈಗ ಮತ್ತೆ ಕಾಮಗಾರಿಗಳು ವೇಗ ಪಡೆಯಲಿವೆ. ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಬೇಗ ಬೇಗ ಪೂರ್ಣಗೊಳಿಸಬೇಕು. ನಗರದಲ್ಲಿ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಬೇಕು. ಆಯಾ ವಾರ್ಡ್ನ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಗಿಡಗಳ ಆರೈಕೆಯತ್ತ ಗಮನ ನೀಡಬೇಕೆಂದರು. ಇಂದು ಎಲ್ಲರೂ ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸಿದರೆ ನಗರದ ಅಭಿವೃದ್ದಿ ಸಾಧ್ಯ. ಪಾಲಿಕೆಯಲ್ಲಿ ತಡವಾಗುತ್ತಿದ್ದ ಕಟ್ಟಡ ಪರವಾನಗಿ, ಖಾತೆ ಬದಲಾವಣೆ ಮುಂತಾದ ಕೆಲಸಗಳು ಬಹಳ ಬೇಗ ಆಗಲಿವೆ. ಪಾಲಿಕೆ ವಿನೂತನ ಕಾರ್ಯಕ್ರ ಆಯೋಜಿಸಿದ್ದು ಯಶ ಕಾಣಲಿ ಎಂದರು.
ಮಹಾನಗರಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್ ಮಾತನಾಡಿ, ಮಹಾತ್ಮಾ ಗಾಂಧಿ ಗ್ರಾಮ ವಿಕಾಸ ಯೋಜನೆಯಡಿ ದಾವಣಗೆರೆ ಮಹಾನಗರಪಾಲಿಕೆಗೆ ರೂ.125 ಕೋಟಿ ಹಣ ಬಂದಿದ್ದು, ನಗರ ಹೆಚ್ಚು ಅಭಿವೃದ್ದಿ ಕಾಣಲಿದೆ. ನಗರದಾದ್ಯಂತ 21 ಸಾವಿರ ಬೀದಿ ದೀಪಗಳಿದ್ದು ಅವುಗಳನ್ನು ಎಲ್.ಇ.ಡಿ ದೀಪಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ 80 ಕ್ಷ ಬರುತ್ತಿದ್ದ ಒಂದು ತಿಂಗಳ ವಿದ್ಯುತ್ ಬಿಲ್ನಲ್ಲಿ 50 ಲಕ್ಷ ಉಳಿತಾಯ ಆಗಲಿದೆ. ಇದರೊಂದಿಗೆ 1 ಲಕ್ಷ ಗಿಡಗಳನ್ನು ನೆಡಲು ಕಾರ್ಯಕ್ರಮ ರೂಪಿಸಿದ್ದು 1500 ಹಣ್ಣಿನ ಗಿಡ ನೆಡಲಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ಯಥೇಚ್ಚ ಆಹಾರ ದೊರೆಯಲಿದೆ. ಜೂನ್ ತಿಂಗಳಲ್ಲಿ 95200 ಗಿಡಗಳನ್ನು ನೆಡಲಾಗುತ್ತಿದ್ದು ಹಸಿರು ದಾವಣಗೆರೆ ಆಗಲಿದೆ.
ಹೀಗಾಗಿ ದಾವಣಗೆರೆ ಅಭಿವೃದಿಗೆ ಪ್ರತಿ ವಾರ್ಡ್ಗೆ ಕನಿಷ್ಟ ರೂ.10 ಕೋಟಿಯಂತೆ ಹಣ ನೀಡಿದರೆ ಸಮಗ್ರವಾಗಿ ಅಭಿವೃದ್ದಿ ಮಾಡಬಹುದಾಗಿದೆ. ಹಾಗಾಗಿ ಸರ್ಕಾರಿ ಹೆಚ್ಚು ಅನುದಾನ ನೀಡಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ