ದೊಡ್ಡಬಳ್ಳಾಪುರ (ಜ. 4): ಕರ್ನಾಟಕದ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದೇವರ ದರ್ಶನಕ್ಕೆ ತೆರಳುವ ವಾಹನ ಸವಾರರಿಂದ ಸುಂಕ ವಸೂಲಿ ಮಾಡಲಾಗುತ್ತಿದ್ದು, ಬೇಕಾಬಿಟ್ಟಿ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ಜನವರಿ 19ರಂದು ನಡೆಯಲಿದ್ದು, ಕ್ಷೇತ್ರದಲ್ಲಿ ನಡೆಯುವ ದನಗಳ ಜಾತ್ರೆ ಈಗಾಗಲೇ ಶುರುವಾಗಿದೆ. ಜನವರಿ ಮತ್ತು ಡಿಸೆಂಬರ್ ತಿಂಗಳಲ್ಲಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುವರು. ಭಕ್ತರು ಕಾಣಿಕೆಯಾಗಿ ನೀಡುವ ಹುಂಡಿ ಹಣದಿಂದಲೇ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಆದಾಯವಿದೆ.
ಡಿಸೆಂಬರ್ ತಿಂಗಳ ಹುಂಡಿ ಹಣ ಎಣಿಕೆ ಮಾಡಿದ್ದಾಗ ದಾಖಲೆಯ 60 ಲಕ್ಷ ರೂ. ಹಣ ಸಂಗ್ರಹವಾಗಿತ್ತು. ಇದರ ಜೊತೆಗೆ ದೇವಸ್ಥಾನಕ್ಕೆ ವಾಹನಗಳ ಪ್ರವೇಶ ಶುಲ್ಕದಿಂದ ಸಹ ಆದಾಯ ಬರುತ್ತಿದೆ. 10 ತಿಂಗಳು ಎಸ್ಎಸ್ ಘಾಟಿ ಗ್ರಾಮ ಪಂಚಾಯತ್ ನವರು ವಾಹನಗಳ ಪ್ರವೇಶ ಶುಲ್ಕದ ಆದಾಯ ಪಡೆದ್ದಾರೆ. ಡಿಸೆಂಬರ್ ಮತ್ತು ಜನವರಿ ತಿಂಗಳ ವಾಹನಗಳ ಪ್ರವೇಶ ಶುಲ್ಕದ ಆದಾಯ ಘಾಟಿ ದೇವಸ್ಥಾನ ಆಡಳಿತ ಮಂಡಳಿಗೆ ಹೋಗುತ್ತದೆ. ವಾಹನಗಳ ಸವಾರರಿಂದ ಸಂಗ್ರಹಿಸುತ್ತಿರುವ ಪ್ರವೇಶ ಶುಲ್ಕವನ್ನು ಅಕ್ರಮವಾಗಿ ಪಡೆಯಲಾಗುತ್ತಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.
2020ರ ಡಿಸೆಂಬರ್ 1ರಿಂದ 2021ರ ಜನವರಿ 31ರವರೆಗಿನ ಎರಡು ತಿಂಗಳ ವಾಹನಗಳ ಮೇಲಿನ ಸುಂಕ ವಸೂಲಿಯ ಹಕ್ಕನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಬಹಿರಂಗ ಹರಾಜು ಮಾಡಲಾಗಿದೆ. ಇದರ ಗುತ್ತಿಗೆಯನ್ನು 13 ಲಕ್ಷಕ್ಕೆ ಪಾಲ್ ಪಾಲ್ ದಿನ್ನೆಯ ಅಪ್ಪಯ್ಯಪ್ಪ ಎಂಬುವವರು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ರಾತ್ರಿ ರಿಸೆಪ್ಷನ್ಗೆ ಇದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆ; ಛತ್ರದಲ್ಲೇ ವಧುವಿನ ಕೈಹಿಡಿದ ಮತ್ತೋರ್ವ ಯುವಕ
ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕಿಸುವ ದೊಡ್ಡಬಳ್ಳಾಪುರ ಕಡೆಯಿಂದ ಮತ್ತು ಗೌರಿಬಿದನೂರು ಕಡೆಯಿಂದ ಎರಡು ಕಡೆ ವಾಹನಗಳ ಪ್ರವೇಶ ಸುಂಕವನ್ನು ವಸೂಲು ಮಾಡಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಂದ 10 ರೂಪಾಯಿ, ನಾಲ್ಕು ಚಕ್ರದ ವಾಹನಗಳಿಗೆ 20 ರೂಪಾಯಿ ಶುಲ್ಕ ವಿಧಿಸುವಂತೆ ಸೂಚನೆ ಇದೆ. ಇದರ ಜೊತೆಗೆ 30 ಮತ್ತು 50 ರೂಪಾಯಿ ಪ್ರವೇಶ ಸುಂಕ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯ ವಾಹನ ಸವಾರರಿಂದಲೂ ಸುಂಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ