ಚಾಮರಾಜನಗರ: ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ (CN Ashwath Narayan) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಟೀಕಿಸುವ ಭರದಲ್ಲಿ ಟಿಪ್ಪು ಸುಲ್ತಾನ್ (Tipu Sultan) ರೀತಿಯಲ್ಲೇ ಸಿದ್ದರಾಮಯ್ಯ ರನ್ನೂ ಹೊಡೆದು ಹಾಕಿಬಿಡಿ ಎಂಬ ಹೇಳಿಕೆ ರಾಜಕೀಯ ವಲಯಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಉಲ್ಲೇಖಿಸಿ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅಶ್ವತ್ಥ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ರಾಜ್ಯ ಮುಖ್ಯಮಂತ್ರಿಯಾಗಿದ್ದವರು, ಈಗ ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ಈ ರಾಜ್ಯದ ದೊಡ್ಡ ಆಸ್ತಿ. ಅಂತಹವರನ್ನು ಕೊಲೆ ಮಾಡಿ ಎಂದು ಸಚಿವರೊಬ್ಬರು ಹೇಳಿಕೆ ಕೊಟ್ಟರೂ ಸರ್ಕಾರ, ಗೃಹಸಚಿವರು, ಮುಖ್ಯಮಂತ್ರಿ ಇನ್ನೂ ಯಾವುದೇ ಕ್ರಮ ತೆಗೆದುಕೊಳ್ಳದೆ ಏನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಚಾಮರಾಜನಗರದ ಹನೂರಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಅಶ್ವತ್ಥ ನಾರಾಯಣ್ರನ್ನು ಎಫ್ಐಆರ್ ಹಾಕಿ ಬಂಧಿಸಬೇಕೆಂದು ಆಗ್ರಹ ವ್ಯಕ್ತಪಡಿಸಿದರು. " ಯಾವನೋ ಮಂತ್ರಿ ಹೇಳ್ತಾನೆ, ಟಿಪ್ಪುವನ್ನು ಯಾರೋ ಗೌಡ ಕೊಚ್ಚಿಹಾಕಿ ಕೊಲೆ ಮಾಡಿದನಂತೆ, ಅದೇ ರೀತಿ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಿ ಅಂತಾ ಹೇಳ್ತಾನೆ. ಈ ರೀತಿ ಅಸಂಬದ್ಧ ಹೇಳಿಕೆ ನೀಡಿದರೂ ಸರ್ಕಾರ, ಹೋಮ್ ಮಿನಿಸ್ಟರ್ ಚೀಫ್ ಮಿನಿಸ್ಟರ್ ಕ್ರಮ ತೆಗೆದುಕೊಳ್ಳದೇ ಏನು ಮಾಡುತ್ತಿದ್ದಾರೆ? ಎಂದು ಕಿಡಿಕಾಡಿದರು.
ಇದನ್ನೂ ಓದಿ: Siddaramaiah: ಮಂತ್ರಿಯಾಗಿರುವವರು ಕೆಲವರು ಕಾಂಗ್ರೆಸ್ ಸೇರ್ತಾರೆ; ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಈಗ ವಿಪಕ್ಷ ನಾಯಕ, ಅವರು ರಾಜ್ಯಕ್ಕೆ ದೊಡ್ಡ ಆಸ್ತಿ. ಆದರೆ ಅಧಿಕಾರದ ಮತ್ತಿನಲ್ಲಿ ಸಚಿವ ಕೊಚ್ಚಿ ಕೊಲೆ ಮಾಡಿ ಅಂತಿದ್ದಾನೆ. ಅವನೊಬ್ಬ ನೀಚ, ಒಬ್ಬ ಶಿಕ್ಷಣ ಸಚಿವ ಹೀಗೆ ಹೇಳುತ್ತಿದ್ದಾನೆ ಎಂದು ಏಕವಚನದಲ್ಲೇ ಅಶ್ಚತ್ಥ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೆಯೇ ಗೃಹ ಸಚಿವ, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಡಿಜಿಪಿ ಏನು ಕ್ರಮ ಕೈಗೊಂಡಿಲ್ಲ ಎಂದು ಡಿಕೆಶಿ ಕಿಡಿಕಾರಿದರು.
ಕ್ಷಮಾಪಣೆ ಕೇಳಿದರೆ ಸಾಕಾ?
ಸಿದ್ದರಾಮಯ್ಯರನ್ನು ಕೊಲೆ ಮಾಡಿ ಎಂದು ಪ್ರಚೋದನೆ ನೀಡಿ ಈಗ ಕ್ಷೆಮೆ ಕೇಳಿದರೆ ಸಾಕಾ? ನಾನೇನು ಆತನನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ಎಂದು ಹೇಳಲ್ಲ. ಈ ನೆಲದ ಕಾನೂನು ಪಾಲಿಸಿ ಅಂತಾ ಒತ್ತಾಯಿಸುತ್ತೇನೆ. ಆತ ಎಲ್ಲಿ ಆ ಹೇಳಿಕೆ ನೀಡಿದ್ದಾನೋ, ಆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದೇ ಎಫ್ಐಆರ್ ಹಾಕಿ ಬಂಧಿಸಬೇಕು. ಇಂತಹ ಘಟನೆ ಆಡಳಿತ ನಡೆಸುವವರಿಗೆ ಕಪ್ಪು ಚುಕ್ಕಿ ಎಂದು ಕಾಂಗ್ರೆಸ್ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲೇ ಹೋದರೂ ಲಂಚ ಲಂಚ ಅನ್ನುತ್ತಾರೆ
ಬಿಜೆಪಿ ಆಡಳಿತದಲ್ಲಿ ಎಲ್ಲೇ ಹೋದರೂ ಲಂಚ ಲಂಚ ಎನ್ನುತ್ತಾರೆ. ಕೆಎಸ್. ಈಶ್ವರಪ್ಪ ಯಾಕೆ ರಾಜಿನಾಮೆ ಕೊಟ್ರು? ಸಂತೋಷ್ ಪಾಟೀಲ್ನಿಂದ 40% ಕಮಿಷನ್ ಕೇಳಿದ್ರು, ಆತ ಮುಖ್ಯಮಂತ್ರಿಗೆ, ಪ್ರಧಾನ ಮಂತ್ರಿಗೆ ಪತ್ರ ಬರೆದರು ಆತನಿಗೆ ರಕ್ಷಣೆ ಸಿಗಲಿಲ್ಲ. ಆ ದುಡ್ಡನ್ನು ಕೊಡುವುದಕ್ಕಾಗದೆ ಆತ್ಮಹತ್ಯೆ ಮಾಡಿಕೊಂಡ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಕೊಡದಿದ್ದರೆ ಬಿಲ್ ಕ್ಲಿಯರ್ ಆಗುವುದಿಲ್ಲ ಎಂದು ಹೇಳಿದ್ದಾರೆ.
ಸ್ವಾಮೀಜಿಯೊಬ್ಬರು ನಮ್ಮ ದುಡ್ಡಿಗೆ ನಾವೇ 30% ಕಮಿಷನ್ ಕೊಡಬೇಕು ಅಂತಾ ಆರೋಪಿಸಿದ್ದಾರೆ. ಎಚ್ .ವಿಶ್ವನಾಥ್ 20% ಕಮಿಷನ್ ಆರೋಪ ಮಾಡಿದ್ದಾರೆ. 20 ಸಾವಿರ ಕೋಟಿ ಬಿಲ್ ಕಮಿಷನ್ ಕೊಡದೆ ಪಾಸ್ ಆಗುತ್ತಿಲ್ಲ ಅಂತಾ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಬಿಜೆಪಿ ಭ್ರಷ್ಟಾಚಾರ ಸರ್ಕಾರ ಎನ್ನುವುದಕ್ಕೆ ಇಷ್ಟು ಸಾಕಲ್ವ. ಮುಂದೆ ಕಾಂಗ್ರೆಸ್ ಸರ್ಕಾರ ಬರಲಿದೆ, ಇದೆಲ್ಲವನ್ನು ತನಿಖೆ ಮಾಡಿಸುತ್ತೇವೆ ಎಂದು ಡಿಕೆ ಶಿವಕುಮಾರ್ ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಸರ್ಕಾರವನ್ನು ಟೀಕಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ