ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatre) ಭಾಗಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಇಂದು ಬೆಂಗಳೂರಿಗೆ ಹಿಂದಿರುಗಿದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಸುದ್ದಿಗೋಷ್ಠಿಯ ಕುರಿತು ಪ್ರತಿಕ್ರಿಯಿಸಿದರು. ಪಾಪ ಅವರು ಫಸ್ಟ್ರೇಷನ್ ಆಗಿದ್ದಾರೆ. ರಮೇಶ್ ಜಾರಕಿಹೊಳಿ ಮಂತ್ರಿ ಆಗಬೇಕಿತ್ತು, ಆದರೆ ಅವರ ಪಾರ್ಟಿ ಸಂಪುಟದಲ್ಲಿ (Cabinet) ಸ್ಥಾನ ಕೊಡಲಿಲ್ಲ. ಅವರ ಪಕ್ಷದವರು ರಮೇಶ್ ಜಾರಕಿಹೊಳಿ ಅವರನ್ನು ಆಸ್ಪತ್ರೆಗೆ ತೋರಿಸಬೇಕಿದೆ. ಚುನಾವಣೆಯಲ್ಲಿ ನೋಡೋಣ ಎಂದು ಹೇಳಿದ್ದಾರೆ. ಅವರಿಗೆ ಒಳ್ಳೆಯದು ಆಗಲಿ ಎಂದು ಪ್ರತಿಕ್ರಿಯಿಸಿದರು.
ಇದೇ ವೇಳೆ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ವಿಮಾನದಲ್ಲಿ ಹೊರಡುವ ಮುಂಚೆ ಕೆಲವೊಂದು ಪಾಯಿಂಟ್ಸ್ ನೋಡಿದೆ. ಎಲೆಕ್ಷನ್ ಬಜೆಟ್ ಮಾಡಿದ್ದಾರೆ ಅಂತ ಹೇಳುತ್ತಿದ್ದಾರೆ. ರಾಗಿ ಖರೀದಿಗೆ ಸಿರಿಧಾನ್ಯ ಎಂದು ಹೆಸರು ಕೊಟ್ಟಿದ್ದಾರೆ. ಇನ್ನೂ ಸ್ವಲ್ಪ ಸ್ಟಡಿ ಮಾಡೋದು ಇದೆ. ರಾಜಕೀಯ ಉದ್ದೇಶ ಇಟ್ಟುಕೊಂಡು ಬಜೆಟ್ ಮಾಡಿದ್ದಾರೆ ಎಂದು ಹೇಳಿದರು.
ಬಜೆಟ್ ನಿರಸಾದಾಯಕ
ವಿಮಾನ ನಿಲ್ದಾಣದಲ್ಲಿ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ, ಕೇಂದ್ರ ಬಜೆಟ್ ಸಂಪೂರ್ಣ ನಿರಸಾದಾಯಕವಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.
ಹೊಸ ಹೂಡಿಕೆದಾರರಿಗೆ ಪ್ರೋತ್ಸಾಹಿಸುವ ಯಾವುದೇ ಅಂಶವಿಲ್ಲ. ಆರ್ಥಿಕತೆ ವೃದ್ಧಿ, ರಫ್ತು ಉತ್ತೇಜನ, ತೈಲ ಕ್ಷೇತ್ರದ ಸುಧಾರಣೆಯ ಮಹತ್ವವಾದ ನಿರ್ಧಾರವಿಲ್ಲ. ಪೆಟ್ರೋಲ್, ಡೀಸೆಲ್ ಪ್ರತಿ ಲೀ ₹ 20 ಹಾಗೂ ಎಲ್ಪಿಜಿ ಸಿಲಿಂಡರ್ ₹500 ಸೇರಿದಂತೆ ಅಡುಗೆ ಎಣ್ಣೆಯ ದರ ಕಡಿತ ಮಾಡಬೇಕಿತ್ತು ಎಂದರು.
ಉದ್ಯೋಗ ಸೃಷ್ಟಿಯ ಯಾವುದೇ ಯೋಜನೆ ಇಲ್ಲ. ದೂರ ದೃಷ್ಟಿಯ ಮಾಪಕವಿಲ್ಲದೇ ಬಜೆಟ್ ಮಂಡನೆ ಮಾಡಲಾಗಿದೆ. ಖಾಸಗಿ ಸಂಸ್ಥೆಗಳು, ಎಂಎಸ್ಎಂಇ ಗಳಿಗೆ ಹೆಚ್ಚುವರಿ ಪ್ರೋತ್ಸಾಹ ನೀಡಿ, ಯುವಕರಿಗೆ ಕೆಲಸ ನೀಡುವ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಹೇಳಿದರು.
ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲ
ಬಡತನ ನಿರ್ಮೂಲನೆ, ಗ್ರಾಮೀಣಾಭಿವೃದ್ಧಿ ಹಾಗೂ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಪ್ಲಾನ್ ಇಲ್ಲ. ಕೃಷಿ ಉತ್ಪನ್ನಗಳ ರಫ್ತು, ಕೃಷಿ ಕಾರ್ಮಿಕರಿಗೆ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟರ ಅಭಿವೃದ್ಧಿಯ ಕುರಿತು ಗಮನ ಹರಿಸಲು ಸರ್ಕಾರ ಸೋತಿದೆ. ನಗರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ, ನರೇಗಾ ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದರು.
ಸ್ಯಾಂಟ್ರೋ ರವಿ ಪ್ರಕರಣದ ಐಓ ವರ್ಗಾವಣೆಗೆ ಪ್ರತಿಕ್ರಿಯಿಸಿದ ಸುರ್ಜೇವಾಲಾ, ಕರ್ನಾಟಕ ಸಿಎಂ ಜೊತೆ ಸ್ಯಾಂಟ್ರೋ ರವಿ ಸಂಬಂಧ ಹೊಂದಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ಇದೊಂದು ರಾಜಕೀಯ ಕರಾಳ ಪರಿಸ್ಥಿತಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನ 'ವಿಷ ಕನ್ಯೆ' ಬಗ್ಗೆ ಪ್ರಸ್ತಾಪಿಸಿದ ರಮೇಶ್ ಜಾರಕಿಹೊಳಿ
ತಮ್ಮನ್ನು ಸಿ.ಡಿ ಪ್ರಕರಣದಲ್ಲಿ (CD Case) ಸಿಲುಕಿಸಿದ್ದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (KPCC President DK Shivakumar) ಅಂಡ್ ಕಂಪನಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಎಂದು ಆರೋಪಿಸಿದ್ದಾರೆ. ಅಲ್ಲದೆ, ಸಿ.ಡಿಯನ್ನು ಇಟ್ಟುಕೊಂಡು ನನಗೆ ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದರು.
ನಾನು ಅಂದು ಒಪ್ಪಿಕೊಂಡಿದ್ದರೆ ಸಿ.ಡಿ ಬಿಡುಗಡೆ ಆಗುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ಬೆಳಗಾವಿ (Belagavi) ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಸವಿವರವಾಗಿ ಮಾತನಾಡಿದ್ದಾರೆ. ನಾನು ಸಹಕಾರಿ ಸಚಿವನಾಗಿದ್ದ ವೇಳೆ ಶಾಂತಿನಗರ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ (Shanthinagar Housing Co Operative Society) ಕೇಸ್ನಲ್ಲಿ ಫೈಲ್ ಕ್ಲೀಯರ್ ಮಾಡಲಿಲ್ಲ ಎಂದು ನನ್ನ ವಿರುದ್ಧ ಇಷ್ಟೆಲ್ಲಾ ಷಡ್ಯಂತರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ