news18-kannada Updated:August 10, 2020, 7:09 PM IST
ಡಿ.ಕೆ ಶಿವಕುಮಾರ್
ಬೆಂಗಳೂರು; ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ಪರಿಹಾರವಾಗಿ 10 ಸಾವಿರ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಘೋಷಿಸುವ ಅಗತ್ಯ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಎರಡು ದಿನಗಳ ಕಾಲ ಕೊಡಗಿಗೆ ಭೇಟಿ ನೀಡಿದ್ದೆ. ಪ್ರಕೃತಿ ವಿಕೋಪದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೊಡಗಿನಿಂದಲೇ ನಾನು ಹಾನಿ ಪ್ರದೇಶಗಳ ಭೇಟಿ ಆರಂಭಿಸಿದ್ದೇನೆ. ಹಿಂದೆಯೂ ಪ್ರವಾಹದಿಂದ ಹಾನಿಯಾಗಿತ್ತು. ಸರ್ಕಾರ ಕೊಟ್ಟಿರುವ ಭರವಸೆಗಳನ್ನು ಈಡೇರಿಸಿಲ್ಲ. ಅಲ್ಲಿ ಮನೆಗಳನ್ನು ಕಟ್ಟುವ ಕೆಲಸವೂ ನನೆಗುದಿಗೆ ಬಿದ್ದಿದೆ. 5 ಸಾವಿರ ಬಾಡಿಗೆಗೆ ಮೂರು ತಿಂಗಳು ನೀಡಿದ್ದಾರೆ. ನಂತರ ಆ ಬಾಡಿಗೆ ಹಣವನ್ನು ನೀಡುತ್ತಿಲ್ಲ. ಅಲ್ಲಿಗೆ ಭೇಟಿ ನೀಡಿದಾಗ ಇದು ಗಮನಕ್ಕೆ ಬಂದಿದೆ ಎಂದು ವಿವರಿಸಿದರು.
ಎಲ್ಲೆಲ್ಲಿ ಭೂ ಕುಸಿತ, ಮನೆ ಹಾನಿಯಾಗುತ್ತೆ ಅಂತಹ ಕಡೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. 10 ಸಾವಿರ ಕೋಟಿ ಪ್ಯಾಕೇಜ್ ಗೆ ಒತ್ತಾಯಿಸಿದ್ದೇನೆ. ಸರ್ಕಾರ ಸರ್ವಪಕ್ಷ ನಿಯೋಗವನ್ನ ಕೊಂಡೊಯ್ಯಬೇಕು. ಕೇಂದ್ರದ ಬಳಿಗೆ ಕರೆದೊಯ್ಯಬೇಕು. ಈ ವಿಚಾರದಲ್ಲಿ ಸರ್ಕಾರಕ್ಕೆ ನಾವು ಬೆಂಬಲ ಕೊಡುತ್ತೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಹಿಂದೆಯೂ ಅಪಾರ ಹಾನಿ ಉಂಟಾಗಿತ್ತು. ಈಗಲೂ ಹಾನಿ ಆಗಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪರಿಹಾರ ಕಾರ್ಯ ಕಲ್ಪಿಸಲು 10 ಸಾವಿರ ಕೋಟಿ ಅನಿವಾರ್ಯವಾಗಿದೆ ಎಂದರು.
ಇದನ್ನು ಓದಿ: ಒಂದು ದಿನ ವಿರಾಮ ನೀಡಿ ದಕ್ಷಿಣ ಕನ್ನಡದಲ್ಲಿ ಮತ್ತೆ ಅಬ್ಬರಿಸಿದ ವರುಣ; ಮಳೆ ಆರ್ಭಟಕ್ಕೆ ಭರ್ತಿಯಾದ ನದಿ, ಹಳ್ಳ-ಕೊಳ್ಳಗಳು
ಕೆಪಿಸಿಸಿಯಿಂದ 6 ತಂಡಗಳ ರಚನೆ ಮಾಡಿದ್ದೇವೆ. ತಂಡಗಳನ್ನು ಪ್ರವಾಹ ಪೀಡಿತ ಸ್ಥಳಕ್ಕೆ ಕಳಿಸುತ್ತೇವೆ. ಈ ತಂಡಗಳು ಪರಿಹಾರದ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ನಂತರ ಅದರ ಬಗ್ಗೆ ನಾವು ಸರ್ಕಾರದ ಗಮನಕ್ಕೆ ತರುತ್ತೇವೆ. ಕಳೆದ ಬಾರಿ 35 ಸಾವಿರ ಕೋಟಿ ಪರಿಹಾರ ಕೇಳಲಾಗಿತ್ತು. ಆದರೆ ಕೇಂದ್ರ ಕೊಟ್ಟಿದ್ದು 1860 ಕೋಟಿ ಮಾತ್ರ. ಸರ್ಕಾರ ಕೇವಲ ಆಶ್ವಾಸನೆ ಕೊಟ್ಟರೆ ಸಾಲದು. ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಬೇಕು ಎಂದರು.
Published by:
HR Ramesh
First published:
August 10, 2020, 7:09 PM IST