ಬೆಂಗಳೂರು(ಜ. 31): ಕೊರೋನಾ ಪಾಸಿಟಿವ್ನಿಂದಾಗಿ ವಿಕ್ಟೋರಿಯಾ ಅಸ್ಪತ್ರೆ ಸೇರಿದ್ದ ತಮಿಳುನಾಡಿನ ವಿ ಕೆ ಶಶಿಕಲಾ ನಟರಾಜನ್ ಇಂದು ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಸಮಯಕ್ಕೆ ಸರಿಯಾಗಿ ಶಶಿಕಲಾ ಡಿಸ್ಚಾರ್ಜ್ ಆಗಿ ವಿಕ್ಟೋರಿಯಾ ಅಸ್ಪತ್ರೆಯ ಕೊರೊನಾ ಸೆಂಟರ್ ನಿಂದ ಹೊರಬಂದರು. ತಮ್ಮ ನೆಚ್ಚಿನ ಚಿನ್ನಮ್ಮ ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರ ಬರ್ತಿರೋ ವಿಷಯ ತಿಳಿದು ಅವರ ಆಪ್ತರು, ಬೆಂಬಲಿಗರು ಮತ್ತು ಅಭಿಮಾನಿಗಳು ವಿಕ್ಟೋರಿಯಾ ಅಸ್ಪತ್ರೆ ಬಳಿ ಜಮಾಯಿಸಿ ಅದ್ದೂರಿಯಾಗಿ ಸ್ವಾಗತ ಕೋರಿದರು.
ಇಂದು ಶಶಿಕಲಾರನ್ನ ಅಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಬಗ್ಗೆ ನಿನ್ನೆಯೇ ದೃಢ ಪಡಿಸಿದ್ದ ಅಸ್ಪತ್ರೆ ವೈದ್ಯರು ಇಂದು ಬೆಳಗ್ಗೆ ಶಶಿಕಲಾ ಆರೋಗ್ಯದ ಬಗ್ಗೆ ನಾರ್ಮಲ್ ಚೆಕಪ್ ನಡೆಸಿದರು. ಬಳಿಕ ಶಶಿಕಲಾ ಸಹೋದರ ದಿನಕರನ್ ಅವರು ಅಸ್ಪತ್ರೆಗೆ ಆಗಮಿಸಿ ವೈದ್ಯರ ಜೊತೆ ಸಮಾಲೋಚನೆ ನಡೆಸಿ ಶಶಿಕಲಾ ಡಿಸ್ಚಾರ್ಜ್ ಪ್ರಕ್ರಿಯೆ ಆರಂಭಿಸಿದರು. ಹನ್ನೆರಡು ಗಂಟೆ ಸುಮಾರಿಗೆ ಡಿಸ್ಚಾರ್ಜ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶಶಿಕಲಾರನ್ನ ಅಸ್ಪತ್ರೆ ಸಿಬ್ಬಂದಿ ವೀಲ್ ಚೇರ್ನಲ್ಲಿ ಹೊರಗಡೆಗೆ ಕರೆ ತಂದರು. ಬಳಿಕ ವೀಲ್ ಚೇರ್ನಿಂದ ಎದ್ದು ನಿಂತ ಶಶಿಕಲಾ ಒಮ್ಮೆ ಅಸ್ಪತ್ರೆ ಮುಂಭಾಗ ನೆರೆದಿದ್ದ ಅಭಿಮಾನಿಗಳ ಕಡೆ ಕೈ ಮುಗಿದು ಕೈ ಬೀಸಿದರು. ಅಸ್ಪತ್ರೆ ಹೊರ ಭಾಗದಲ್ಲಿ ದಿನಕರನ್ ಮತ್ತು ಆಪ್ತರು ಶಶಿಕಲಾರನ್ನ ಬರಮಾಡಿಕೊಂಡರು.
ಇದನ್ನೂ ಓದಿ: ಕುಮಾರಸ್ವಾಮಿ ಯಾವ ಸೀಮೆ ಲೀಡರ್? ಜೆಡಿಎಸ್ ಪಕ್ಷ ಸತ್ತು ತುಂಬಾ ದಿನಗಳಾಗಿವೆ; ಜಮೀರ್ ಅಹಮದ್ ವಾಗ್ದಾಳಿ
ಶಶಿಕಲಾ ಡಿಸ್ಚಾರ್ಜ್ ಅಗುತ್ತಿರುವ ಹಿನ್ನೆಲೆಯಲ್ಲಿ ಎರಡು ಹೊಚ್ಚ ಹೊಸ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರುಗಳನ್ನ ವ್ಯವಸ್ಥೆ ಮಾಡಲಾಗಿತ್ತು. TN 09 BX 3377 ಮತ್ತು TN 09 BX 3737 ಕಾರುಗಳನ್ನ ವ್ಯವಸ್ಥೆ ಮಾಡಿದ್ದು ಶಶಿಕಲಾ BX 3377 ಸಂಖ್ಯೆಯ ಕಾರಿನಲ್ಲಿ ಶಶಿಕಲಾ ಪ್ರಯಾಣಿಸಿದರು. ಶಶಿಕಲಾ ಅವರು ಡಿಸ್ಚಾರ್ಜ್ ನಂತರ ಎಲ್ಲಿ ಉಳಿದುಕೊಳ್ತಾರೆ ಅನ್ನೋ ಬಗ್ಗೆ ಸಾಕಷ್ಟು ಸಸ್ಪೆನ್ಸ್ ಇತ್ತು. ಆನೇಕಲ್ ಫಾರ್ಮ್ ಹೌಸ್, ಪ್ರೆಸ್ಟಿಜ್ ವಿಲ್ಲಾ ಎಂದ ಹೇಳಲಾಗಿತ್ತು. ಅದರೆ ಅಂತಿಮವಾಗಿ ದೇವನಹಳ್ಳಿ ಏರ್ಪೋರ್ಟ್ ಬಳಿಯ ಪ್ರೆಸ್ಟೀಜ್ ಗಾಲ್ಫ್ ರೆಸಾರ್ಟ್ನಲ್ಲಿ ಶಶಿಕಲಾ ವಾಸ್ತವ್ಯ ಹೂಡಿದರು. ವೈದ್ಯರ ಸಲಹೆಯಂತೆ ಕ್ವಾರಂಟೈನ್ಗೆ ಒಳಗಾಗಿ ಆ ಬಳಿಕ ಚೆನ್ನೈಗೆ ತೆರಳುವುದಾಗಿ ಶಶಿಕಲಾ ಸಹೋದರ ದಿನಕರನ್ ತಿಳಿಸಿದರು.
ಇದೇ ವೇಳೆ, ಶಶಿಕಲಾ ಡಿಸ್ಚಾರ್ಜ್ ವೇಳೆ ಮತ್ತೊಂದು ಅಚ್ಚರಿಯ ಬೆಳವಣಿಗೆಯೊಂದು ಎದುರಾಗಿತ್ತು. ಶಶಿಕಲಾರನ್ನ ಎಐಎಡಿಎಂಕೆ ಪಕ್ಷದ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದ್ದರು. ಇಂದು ಶಶಿಕಲಾ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಎಐಎಡಿಎಂಕೆ ಪಕ್ಷದ ಚಿಹ್ನೆಯುಳ್ಳ ಬಾವುಟ ಕಟ್ಟಲಾಗಿತ್ತು. ಇದರಿಂದ ತನ್ನ ಮಾತೃಪಕ್ಷದ ಶಶಿಕಲಾ ಒಲವು ಹೊಂದಿರುವ ಬಗ್ಗೆ ಎತ್ತಿ ತೋರಿಸುತ್ತಿತ್ತು. ಸದ್ಯ ಮುಂದಿನ ಏಪ್ರಿಲ್ನಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ಎದುರಾಗಲಿದ್ದು ಜೈಲಿನಿಂದ ಬಿಡುಗಡೆಯಾಗಿದ್ದನ್ನೇ ಗ್ರಾಂಡ್ ಎಂಟ್ರಿಯಾಗಿಸಲು ವೇದಿಕೆ ರೂಪಿಸುವಂತೆ ಎದ್ದು ಕಾಣುವಂತಿದೆ.
ಸದ್ಯ ಇನ್ನೂ ಹತ್ತು ದಿನಗಳ ಕಾಲ ನಗರದಲ್ಲೆ ವಾಸ್ತವ್ಯ ಹೂಡಲಿರುವ ಶಶಿಕಲಾ ಆ ಬಳಿಕ ಚೆನ್ನೈಗೆ ವಾಪಸ್ ಆಗಲಿದ್ಧಾರೆ. ಈ ವೇಳೆ ಚಿನ್ನಮ್ಮನಿಗೆ ಯಾವ ರೀತಿ ವೆಲ್ ಕಮ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವರದಿ: ಮುನಿರಾಜು ಹೊಸಕೋಟೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ