ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಹಳೆ ಮೈಸೂರು ಭಾಗದಲ್ಲಿ ಕಮಲ ಪತಾಕೆ ಹಾರಿಸಲು ಪಣ ತೊಟ್ಟಿರುವ ಬಿಜೆಪಿ (BJP), ಸಾಲು ಸಾಲು ಸಮಾವೇಶ ಆಯೋಜನೆ ಮಾಡುತ್ತಿದೆ. ಇದರ ಜೊತೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಬಿಜೆಪಿ ಸ್ಥಳೀಯ ಮುಖಂಡರನ್ನು (Operation Lotus) ತನ್ನತ್ತ ಸೆಳೆಯುವಲ್ಲಿ ಭಾಗಶಃ ಯಶಸ್ವಿಯಾದಂತೆ ಕಾಣಿಸುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಬಿಜೆಪಿ ಸೇರ್ತಾರ ಅನ್ನೋ ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ.
ಈ ಹಿಂದೆ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಭೇಟಿ ನೀಡಿದ ಸಂದರ್ಭದಲ್ಲಿಯೇ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಆಗುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳಿಗೆ ಪೂರಕ ಎಂಬಂತೆ ಅಮಿತ್ ಶಾ ಅವರಿಗೆ ಸ್ವಾಗತಕೋರಿರುವ ಫ್ಲೆಕ್ಸ್ಗಳಲ್ಲಿ ಸುಮಲತಾ ಅಂಬರೀಶ್ ಅವರ ಫೋಟೋ ಹಾಕಲಾಗಿತ್ತು.
ಮೋದಿ ನೇತೃತ್ವದಲ್ಲಿ ಕಮಲ ಸೇರ್ತಾರಾ?
ಇದೇ ಮಾರ್ಚ್ 11ರಂದು ಮಂಡ್ಯ ಜಿಲ್ಲೆಯ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸುಮಲತಾ ಬಿಜೆಪಿ ಸೇರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ತಿಳಿದು ಬಂದಿದೆ.
ಬಿಡದಿ ಟು ಮದ್ದೂರು ರೋಡ್ ಶೋ
ಮಾರ್ಚ್ 11ರಂದು ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ಪ್ರಧಾನಿಗಳು ಆಗಮಿಸಲಿದ್ದಾರೆ. ಉದ್ಘಾಟನೆ ನೆಪದಲ್ಲಿ ಬಿಡದಿಯಿಂದ ಮದ್ದೂರುವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ ಮೂಲಕ ಮತಗಳನ್ನು ಸೆಳೆಯುವ ಬಿಜೆಪಿಯ ಒಳ ಲೆಕ್ಕಾಚಾರ ಆಗಿದೆ.
ಪ್ರಧಾನಿಗಳ ರೋಡ್ ಶೋನಿಂದ ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಸನ್ನಿವೇಶ ಬದಲಾವಣೆ ಆಗುತ್ತೆ ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರ ಆಗಿದೆ.
ರೋಡ್ ಶೋ ಬಳಿಕ ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿ ಬೃಹತ್ ಸಮಾವೇಶಕ್ಕೆ ತಯಾರಿ ನಡೆಸಲಾಗುತ್ತದೆ. ಈ ಸಮಾವೇಶವನ್ನು ಸರ್ಕಾರದಿಂದ ಆಯೋಜನೆ ಮಾಡಬೇಕಾ ಅಥವಾ ಪಕ್ಷದಿಂದ ಮಾಡಬೇಕಾ ಅನ್ನೋ ಗೊಂದಲದಲ್ಲಿ ಬಿಜೆಪಿ ನಾಯಕರಿದ್ದಾರಂತೆ.
ಒಂದು ವೇಳೆ ಸರ್ಕಾರಿ ಕಾರ್ಯಕ್ರಮವಾದ್ರೆ ಸುಮಲತಾ ಅಂಬರೀಶ್ ಸ್ಥಳೀಯ ಸಂಸದೆಯಾಗಿ ಪ್ರಧಾನಿಗಳ ಜೊತೆ ಕೇವಲ ವೇದಿಕೆ ಹಂಚಿಕೊಳ್ಳಬಹುದು. ಆದರೆ ಈ ವೇದಿಕೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ.
ಇದುವರೆಗೂ ಅಧಿಕೃತ ಹೇಳಿಕೆ ನೀಡದ ಸಂಸದೆ
ಹಾಗಾಗಿ ಸುಮಲತಾ ಅಂಬರೀಶ್ ಅವರ ಪಕ್ಷ ಸೇರ್ಪಡೆಗಾಗಿ ಬಿಜೆಪಿ ಮತ್ತೊಂದು ಕಾರ್ಯಕ್ರಮ ಆಯೋಜಿಸುವ ಸಾಧ್ಯತೆಗಳಿವೆ. ಆದರೆ ಇದುವರೆಗೂ ಬಿಜೆಪಿ ಸೇರುವ ಬಗ್ಗೆ ಸುಮಲತಾ ಅಂಬರೀಶ್ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಸುಮಲತಾಗೆ ಬೆಂಬಲ ಸೂಚಿಸಿತ್ತು ಬಿಜೆಪಿ
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋತಿದ್ದರು. ಇತ್ತ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಿತ್ತು. ಇದರ ಪರಿಣಾಮವಾಗಿ ಸುಮಲತಾ ಚುನಾವಣೆ ಪ್ರಚಾರದಲ್ಲಿ ಕೆಲವು ಕಡೆ ಕಮಲ ಬಾವುಟ ಹಾರಿತ್ತು.
ಬಿಜೆಪಿ ಸೇರ್ಪಡೆಯಾದ ಸುಮಲತಾ ಆಪ್ತ
ನವೆಂಬರ್ 2022ರಲ್ಲಿ ಸುಮಲತಾ ಅಂಬರೀಶ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಂಡವಾಳು ಚಂದ್ರಶೇಖರ್ ಬಿಜೆಪಿ ಸೇರ್ಪಡೆಯಾಗಿದ್ದರು. ಇಂಡವಾಳು ಚಂದ್ರಶೇಖರ್ ಬೆನ್ನಲ್ಲೇ ಸುಮಲತಾ ಅವರ ಹೆಸರು ಬಿಜೆಪಿ ಸೇರುವವರ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.
ಬಿಜೆಪಿ ಸೇರಿರುವ ಇಂಡವಾಳು ಚಂದ್ರಶೇಖರ್ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ತಂದೆ ಶಂಕರೇಗೌಡ ಚಾರಿಟೇಬಲ್ ಟ್ರಸ್ಟ್ ಮೂಲಕ ಚಂದ್ರಶೇಖರ್ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ