ಉಡುಪಿ (ಜು. 30): ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಮತ್ತೆ ಹೆಚ್ಚುತ್ತಿರುವ ಬೆನ್ನಲ್ಲೇ ಡೆಂಗ್ಯೂ ಪ್ರಕರಣ ಕೂಡ ಸದ್ದಿಲ್ಲದೆ ಹೆಚ್ಚುತ್ತಿವೆ. ಕರಾವಳಿಯಲ್ಲಿ ಮುಂಗಾರು ಮಳೆ ಕಡಿಮೆಯಾಗುತ್ತಿರುವುದರಿಂದ ಸೊಳ್ಳೆ ಉತ್ಪತ್ತಿ ಕೂಡ ಹೆಚ್ಚುತ್ತಿದೆ. ಕೊರೋನಾ ಆತಂಕದ ನಡುವೆ ಡೆಂಗ್ಯೂನಂತಹ ಮಾರಕ ಕಾಯಿಲೆ ಕಡೆ ಜನರು ಗಮನ ಹರಿಸದಿರುವುದು ಪ್ರಕರಣ ಹೆಚ್ಚಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಲು ಸಿದ್ದತೆ ನಡೆಸಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದೆ. ಕಳೆದ ವರ್ಷ 130 ಡೆಂಗ್ಯೂ ಪ್ರಕರಣ ದಾಖಲಾಗಿತ್ತು ಆದರೆ ಈ ವರ್ಷ 276 ಪ್ರಕರಣ ದಾಖಲಾಗಿದ್ದು ಇನ್ನಷ್ಟು ಪ್ರಕರಣ ದಾಖಲಾಗುತ್ತಲೇ ಇದೆ. ಕೊರೋನಾ ಆತಂಕದ ನಡುವೆ ಸೊಳ್ಳೆಯಿಂದ ಹರಡುವ ಮಾರಕ ಕಾಯಿಲೆ ಕಡೆ ಜನರು ಗಮನ ಹರಿಸದಿರುವುದು ಇದೀಗ ಆರೋಗ್ಯ ಇಲಾಖೆಗೆ ತಲೆನೋವಾಗಿದೆ.
ಮನೆ ಸುತ್ತಲೂ ನೀರು ನಿಲ್ಲದಂತೆ ಜಾಗೃತಿ ಮೂಲಕ ನಿಯಂತ್ರಣಕ್ಕೆ ತರಬಹುದು ಆದರೆ, ಎಕ್ರೆಗಟ್ಟಲೆ ಹಬ್ಬಿರುವ ಅಡಿಕೆ ತೋಟಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನಿಯಂತ್ರಣ ಮಾಡುವುದೇ ದೊಡ್ಡ ಸವಾಲು. ಒಂದು ಮನೆ ಸುತ್ತಮುತ್ತ ನಿಂತ ನೀರನ್ನ ಪತ್ತೆ ಹಚ್ಚೋದು ಹಾಗೂ ನೀರು ನಿಲ್ಲದಂತೆ ಜಾಗೃತೆ ವಹಿಸೋದು ಸುಲಭ. ಆದರೆ ಎಕರೆ ಗಟ್ಟಲೆ ವಿಸ್ತೀರ್ಣದ ಅಡಿಕೆ ತೋಟಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಯೋದು ಕಷ್ಟ. ಅಡಿಕೆ, ಬಾಳೆ, ರಬ್ಬರ್ ,ಅನಾನಸು ಹೀಗೆ ವಿಶಾಲವಾದ ತೋಟದಲ್ಲಿ ಸೊಳ್ಳೆ ಉತ್ಪತ್ತಿಯಾಗುವುದು ಹೆಚ್ಚು. ಇದನ್ನ ಆಯಾ ತೋಟದ ಮಾಲೀಕರೇ ನಿಯಂತ್ರಣ ಮಾಡಬೇಕಿದೆ.
ಇದನ್ನು ಓದಿ: ಗಡಿ ಜಿಲ್ಲೆಗಳಲ್ಲಿ ಹೆಚ್ಚಾದ ಸೋಂಕು; ಅಧಿಕಾರಿಗಳೊಂದಿಗೆ ನಾಳೆ ಸಿಎಂ ಸಭೆ
ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಈ ವರ್ಷ ಕೋವಿಡ್ ನಿಯಂತ್ರಣಕ್ಕೆ ರಚಿಸಿದ ಟಾಸ್ಕ್ ಫೋರ್ಸ್ ಹಾಗೂ ನಗರಸಭೆ, ಪಂಚಾಯತ್ ಸಹಾಯವನ್ನೂ ಪಡೆದು ಕೊಂಡಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಂತ ನೀರಲ್ಲಿ ಔಷದಿ ಸಿಂಪಡನೆ, ಮನೆ ಮನೆಗಳಲ್ಲಿ ಜಾಗೃತಿ ಹೀಗೆ ಹತ್ತು ಹಲವು ಕಾರ್ಯಕ್ರಮ ನಡೆಸುವುದರೊಂದಿಗೆ ನಗರಸಭೆ ಸಹಕಾರದೊಂದಿಗೆ ಬೈಲಾ ಹೊರ ತರುವ ಕಠಿಣ ಕಾನೂನು ಕೂಡ ಜಾರಿ ಮಾಡಲು ಸಿದ್ದತೆ ನಡೆಸಿದೆ. ಈ ಬೈಲಾ ಪ್ರಕಾರ ಕಟ್ಟಡ ನಿರ್ಮಾಣ ನಡೆಸುವವರು, ತೋಟದ ಮಾಲೀಕರು, ಅಪಾರ್ಟ್ ಮೆಂಟ್ ಮಾಲೀಕರು ನೀರನ್ನ ನಿಲ್ಲದಂತೆ ನೋಡಿಕೊಳ್ಳಬೇಕು. ಒಂದು ಬೇಳೆ ಸುತ್ತಮುತ್ತ ನೀರು ನಿಂತಲ್ಲಿ ಮೊದಲು ಎಚ್ಚರಿಕೆ ನೀಡುತ್ತಾರೆ ಅಧಿಕಾರಿಗಳು. ಮತ್ತೆ ನೀರು ನಿಲ್ಲಲು ಕಾರಣರಾದ್ರೆ ದೊಡ್ಡ ಮೊತ್ತದ ದಂಡ ವಿಧಿಸುತ್ತಾರೆ.ಇಷ್ಟಾದರೂ ಎಚ್ಚೆತ್ತುಕೊಳ್ಳದಿದ್ದರೆ ಕ್ರಿಮಿನಲ್ ಮೊಕದ್ದಮೆ ಅಥವಾ ಆ ಕಟ್ಟಡದ ಲೈಸೆನ್ಸ್ ರದ್ದು ಮಾಡುವ ಕಾನೂನು ಈ ಬೈಲಾದಲ್ಲಿ ಸೇರ್ಪಡೆ ಮಾಡಲು ಸಿದ್ದತೆ ನಡೆಸಿದೆ ಆರೋಗ್ಯ ಇಲಾಖೆ.
ಡೆಂಗ್ಯೂ ಲಕ್ಷಣ
ಇನ್ನು ಪ್ರಮುಖವಾಗಿ ಡೆಂಗ್ಯೂ ಲಕ್ಷಣ ನೋಡೊದಾದ್ರೆ ಜ್ವರ ಪ್ರಮುಖವಾದರೆ ತುರಿಕೆ, ರ್ಯಾಶಸ್, ತಲೆನೋವು, ವಾಂತಿ, ಮೈಕೈ ನೋವು ಲಕ್ಷಣ ಕಂಡುಬರುತ್ತೆ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಸಾವು ಸಂಭವಿಸುತ್ತೆ. ಕೊರೋನಾ ಹೋಲಿಸಿದರೆ ಡೆಂಗ್ಯೂ ನಲ್ಲಿ ಸಾವು ಸಂಭವಿಸುವುದು ಹೆಚ್ಚು. ಹೀಗಾಗಿ ಜ್ವರ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಗೊಳಪಡಿಸುವುದು ಒಳ್ಳೇದು. ಆರೋಗ್ಯ ಇಲಾಖೆ ಕೂಡ ಡೆಂಗ್ಯೂ ಗಂಭೀರತೆ ಪರಿಗಣಿಸಿದ್ದು ಆರೋಗ್ಯ ಇಲಾಖೆಯ ಟಾಸ್ಕ್ ಫೋರ್ಸ್ ಟೀಂ, ಆರೋಗ್ಯ ಸಹಾಯಕರು ಮನೆ ಮನೆ ಭೇಟಿ ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲೂ ಜ್ವರ ಲಕ್ಷಣ ಪತ್ತೆ ಮಾಡಿ ವರದಿ ಪಡೆದುಕೊಳ್ಳುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ