news18-kannada Updated:January 19, 2021, 5:23 PM IST
ಎಂಪಿ ರೇಣುಕಾಚಾರ್ಯ
ನವದೆಹಲಿ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಜೊತೆಗೆ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದೇನೆ. ಸದ್ಯದ ರಾಜಕೀಯ ಬೆಳವಣೆಗೆ ಬಗ್ಗೆ ಚರ್ಚೆ ಮಾಡಿದ್ದೇನೆ. ಇದರ ನಡುವೆ ಸಿಎಂ ಯಡಿಯೂರಪ್ಪ ಕೂಡ ಕರೆ ಮಾಡಿದ್ದರು. ಯಡಿಯೂರಪ್ಪನವರ ಬಗ್ಗೆ ಅಪಾರ ಗೌರವ ಇದೆ. ಯಡಿಯೂರಪ್ಪನವರ ವಿರುದ್ಧ ಮಾತನಾಡುವುದು ಸರಿಯಲ್ಲ. ಮತದಾನದಿಂದ ತಿರಸ್ಕರಿಸಿದವರನ್ನು ಮಂತ್ರಿ ಮಾಡಿದ್ದಾರೆ. ನನಗಿಂತ ಹಿರಿಯರು ಇದ್ದಾರೆ ಅವರನ್ನು ಮಂತ್ರಿ ಮಾಡಲಿ. ಬೆಂಗಳೂರಿಗೆ ತೆರಳಿ ಯಡಿಯೂರಪ್ಪ ಭೇಟಿ ಮಾಡ್ತಿನಿ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಅವರು ಅಸಮಾಧಾನ ಹೊರಹಾಕಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿಯಾದ ಬಳಿಕ ನವದೆಹಲಿಯಲ್ಲಿ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದರು. ಪ್ರತಾಪ್ ಗೌಡ ಪಾಟೀಲ್ ಪರ ರಮೇಶ್ ಜಾರಕಿಹೋಳಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರಿಗೆ ಟಿಕೆಟ್ ಕೊಡಬೇಕೆಂದು ವರಿಷ್ಠರು ನಿರ್ಧಾರ ಮಾಡುತ್ತಾರೆ. ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತರು. ಬಿಜೆಪಿ ಆಲದ ಮರ ಇದ್ದಂತೆ, ಬಹಳಷ್ಟು ಪ್ರಬಲವಾಗಿದೆ. ಅಂದುಕೊಂಡ ಖಾತೆ ಸಿಕ್ಕಿದೆ ಅದನ್ನು ನಿಭಾಯಿಸಲಿ. ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಆಗುವಂತೆ ಹೇಳಿಕೆ ಕೊಡಬೇಡಿ ಎಂದು ಜಾರಕಿಹೊಳಿ ಹೇಳಿಕೆಗೆ ನಯವಾಗಿ ರೇಣುಕಾಚಾರ್ಯ ತಿರುಗೇಟು ನೀಡಿದರು.
ಇದನ್ನು ಓದಿ: ಸಚಿವ ಸಂಪುಟ ಪುನಾರಚಿಸಿ, 6 ಬಾರಿ ಶಾಸಕನಾಗಿರುವ ನನಗೆ ಅವಕಾಶ ನೀಡಿ; ಚಿತ್ರದುರ್ಗ ಎಂಎಲ್ಎ ತಿಪ್ಪಾರೆಡ್ಡಿ
ಬೇರೆ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಪರ ವಿರೋಧ ಹೇಳಿಕೆಗಳು ವ್ಯಕ್ತಿತ್ವಕ್ಕೆ ದಕ್ಕೆ ಮಾಡಲಿದೆ. ಗೋವಿಂದ ಕಾರಜೋಳ ಮತ್ತು ಬೊಮ್ಮಾಯಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಕಾರಣ ಅಸಮಾಧಾನಗೊಂಡಿರುವ ರೇಣುಕಾಚಾರ್ಯ ಅವರು ಇದೀಗ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿಗೆ ಮುಂದಾಗಿದ್ದಾರೆ. ಇಂದು ಪ್ರಲ್ಹಾದ್ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಇಂದು ಬೆಂಗಳೂರಿನಲ್ಲಿ ಬಿಜೆಪಿ ಅತೃಪ್ತ ಶಾಸಕರ ಸಭೆ ಕರೆದಿದ್ದರು. ಆದರೆ, ಈ ಸಭೆಗೆ ಅತೃಪ್ತರು ಬರುವುದಿಲ್ಲ ಎಂದು ಹೇಳಿದ ಬಳಿಕ ಇಂದು ಬೆಳಗ್ಗೆ ರೇಣುಕಾಚಾರ್ಯ ದೆಹಲಿಗೆ ಆಗಮಿಸಿದ್ದಾರೆ.
Published by:
HR Ramesh
First published:
January 19, 2021, 5:22 PM IST