ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru Accident) ಇತ್ತೀಚಿಗೆ ನಡೆಯುತ್ತಿರುವ ಭಯಾನಕ ಅಪಘಾತಗಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಹೀಗಿರುವಾಗಲೇ ಇಲ್ಲೊಂದೆಡೆ ಮತ್ತೊಂದು ಭಯಾನಕ ಅಪಘಾತ ನಡೆದಿದ್ದು, ಕಾರ್ ಚಾಲಕನ ಅತಿವೇಗದ (Speed Driving) ಚಾಲನೆಯಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರನ (Bike Rider) ಪ್ರಾಣಪಕ್ಷಿ ಹಾರಿಹೋಗಿದೆ. ಅಷ್ಟೇ ಅಲ್ಲದೆ ರಸ್ತೆ ಬದಿ ಮಲಗಿದ್ದ ವ್ಯಾಪಾರಿಯ ಮೇಲೆಯೂ ಕಾರ್ ಹರಿದಿದ್ದು, ಭೀಕರ ಅಪಘಾತವನ್ನ ಕಂಡ ಜನ ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರು- ಹೊಸೂರು ಮುಖ್ಯರಸ್ತೆಯ (Bengaluru-Hosaru Road) ಗೆಸ್ಟ್ ಲೈನ್ ಸರ್ಕಲ್ ಬಳಿ ಭೀಕರ ಅಪಘಾತ ಸಂಭವಿಸಿದೆ.
ಶನಿವಾರ ರಾತ್ರಿ 12 ಗಂಟೆ 40 ನಿಮಿಷದ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ತಿಬೆಲೆ ಕಡೆಯಿಂದ ಚಂದಾಪುರ ಮಾರ್ಗವಾಗಿ ಅತಿಯಾದ ವೇಗದಲ್ಲಿ ಬಂದ KA 50 N 1719 ನಂಬರಿನ ವೋಲ್ಸ್ಲೋಗನ್ ಕಾರು ಸರ್ವಿಸ್ ರಸ್ತೆಯ ಗೆಸ್ಟ್ ಲೈನ್ ಬಳಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಬೈಕ್ಗೆ ಡಿಕ್ಕಿ ಹೊಡೆದ ಕಾರ್
ಕಾರಿನ ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮಹಾರಾಷ್ಟ್ರ ಮೂಲದ ಅಶೋಕ್ ಕುಮಾರ್ ಸೂರಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ ಚಾಲಕನ ನಿಯಂತ್ರಣಕ್ಕೆ ಸಿಗದೇ ರಸ್ತೆಯ ಬದಿಯಲ್ಲಿ ಕಲ್ಲಂಗಡಿ ಹಣ್ಣು ವ್ಯಾಪಾರ ಮಾಡಿಕೊಂಡು ಅಲ್ಲಿಯೇ ಮಲಗಿದ್ದ ವ್ಯಾಪಾರಿ ಶ್ರೀನಿವಾಸ್ ಎಂಬವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಶ್ರೀನಿವಾಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ ಚಾಲಕನಿಗೂ ಗಂಭೀರ ಗಾಯ
ಇನ್ನೂ ಕಾರ್ ಚಾಲನೆ ಮಾಡಿ ಅಪಘಾತ ನಡೆಸಿದವರು ಬೊಮ್ಮಸಂದ್ರದ ಖಾಸಗಿ ಆಸ್ಪತ್ರೆಯಲ್ಲಿನ ವೈದ್ಯರು ಎನ್ನಲಾಗಿದ್ದು, ಅತ್ತಿಬೆಲೆ ಸಮೀಪದ ಹೋಟೆಲ್ ಒಂದಕ್ಕೆ ಊಟ ಮಾಡಲು ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅತಿ ವೇಗವಾಗಿ ಸರ್ವಿಸ್ ರಸ್ತೆಯಲ್ಲಿ ಕಾರ್ ಚಲಾಯಿಸಿರುವುದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಅಪಘಾತದಲ್ಲಿ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯರು ಕೂಡಲೇ ಕಾರಿನಿಂದ ಹೊರ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರ್ ಅತಿವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವ ದೃಶ್ಯ ಅಲ್ಲಿನ ತರಕಾರಿ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಮೃತಪಟ್ಟ ಅಶೋಕ್ ಕುಮಾರ್ ಸೂರಜ್ ಸಂಬಂಧಿಕರ ಮದುವೆಗಾಗಿ ಮಹಾರಾಷ್ಟ್ರದಿಂದ ಕುಟುಂಬ ಸಮೇತರಾಗಿ ಆಗಮಿಸಿ ಸ್ನೇಹಿತರನ್ನ ಬೈಕ್ ನಲ್ಲಿ ಡ್ರಾಪ್ ಮಾಡಿ ವಾಪಸ್ ಬರುವಾಗ ಕಾರು ಚಾಲಕನ ಅತಿವೇಗದ ಚಾಲನೆಯಿಂದಾಗಿ ಮಾಡದ ತಪ್ಪಿಗೆ ಜೀವ ತೆತ್ತಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಇನ್ನೂ ಅಪಘಾತ ಸಂಬಂಧ ಅತ್ತಿಬೆಲೆ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: BS Yediyurappa: 'ಬದುಕಿನ ಕೊನೆಯುಸಿರು ಇರುವವರೆಗೂ'; ನನ್ನ ಕೊನೆಯ ಸದನ ಎಂದು ಭಾವುಕರಾದ ಮಾಜಿ ಸಿಎಂ ಬಿಎಸ್ವೈ
ಹಾವೇರಿ: ಫಸಲಿನ ರಾಶಿಗಳು ಧಗಧಗ
ವಿದ್ಯುತ್ ತಂತಿ ಕತ್ತರಿಸಿ ಬಿದ್ದು ಮೆಕ್ಕೆಜೋಳ, ಭತ್ತದ ರಾಶಿ ಸುಟ್ಟು ಭಸ್ಮವಾಗಿರುವ ಘಟನೆ ಹಾವೇರಿಯ ಶಿಗ್ಗಾಂವಿ (Shiggaon, Haveri) ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ತಂತಿ ತುಂಡಾಗಿ ಬಿದ್ದು, ಫಸಲಿನ ರಾಶಿಗಳು ಧಗಧಗನೆ ಹೊತ್ತಿ ಉರಿದಿದೆ. 400 ಕ್ವಿಂಟಾಲ್ ಮೆಕ್ಕೆಜೋಳ, 20 ಕ್ವಿಂಟಾಲ್ ಸಾವಿ ರಾಶಿ, 10 ಕ್ವಿಂಟಾಲ್ ಭತ್ತದ ರಾಶಿ ಸುಟ್ಟ ಭಸ್ಮವಾಗಿದೆ.
ರಮೇಶ್ ಧರ್ಮಣ್ಣನವರ್, ಪವಿತ್ರಾ, ಮಂಜುನಾಥ್ ಎಂಬವರಿಗೆ ಸೇರಿದ ರಾಶಿಗಳು ಸುಟ್ಟು ಕರಕಲಾಗಿದೆ. ದುರಂತದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಮೌಲ್ಯದ ಫಸಲು ಬೆಂಕಿಗಾಹುತಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ