news18-kannada Updated:December 21, 2020, 10:23 PM IST
ಡಿಸಿಎಂ ಅಶ್ವತ್ಥನಾರಾಯಣ
ಬೆಂಗಳೂರು(ಡಿಸೆಂಬರ್. 21): ಉನ್ನತ ಶಿಕ್ಷಣವನ್ನು ಮತ್ತಷ್ಟು ಉತ್ತಮಗೊಳಿಸುವ ಹಾಗೂ ವಿಶ್ವವಿದ್ಯಾಲಯಗಳ ಆಡಳಿತಕ್ಕೆ ವೇಗ ಕೊಟ್ಟು ಪಾರದರ್ಶಕಗೊಳಿಸುವ ಇ-ಆಫೀಸ್ ವ್ಯವಸ್ಥೆಯನ್ನು ಇನ್ನೂ ಜಾರಿ ಮಾಡದ ವಿವಿಗಳ ಕುಲಪತಿಗಳ ಕಾರ್ಯವೈಖರಿ ಬಗ್ಗೆ ಉನ್ನತ ಶಿಕ್ಷಣ ಖಾತೆ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಸೋಮವಾರ ಸರಕಾರಿ ಸ್ವಾಮ್ಯದ 22 ವಿವಿಗಳ ಕುಲಪತಿಗಳ ಜತೆ ವರ್ಚುಯಲ್ ಸಂವಾದ ನಡೆಸಿ ಡಿಸಿಎಂ ಅಶ್ವತ್ಥನಾರಾಯಣ ಮಾತನಾಡಿದರು. ವಿವಿಗಳ ಆಡಳಿತದಲ್ಲಿ ಪಾರದರ್ಶಕತೆ ತರುವುದರ ಜತೆಗೆ ಜನರಿಗೆ ಉತ್ತರದಾಯಿತ್ವವಾಗಿರಲು ಇ-ಆಫೀಸ್ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕೆಲ ವಿವಿಗಳು ಮಾತ್ರ ಈ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಮಾತ್ರ ಜಾರಿ ಮಾಡಿದ್ದು, ಕೆಲ ವಿವಿಗಳು ಇನ್ನೂ ಜಾರಿ ಮಾಡಿಲ್ಲ. ಇದು ಖಂಡಿತಾ ಸರಿಯಲ್ಲ ಎಂದರು. ಜನವರಿ 1 ರಿಂದ ಎಲ್ಲ ವಿವಿಗಳಲ್ಲೂ ಇ-ಆಫೀಸ್ ಜಾರಿಯಾಗಲೇಬೇಕು.
ಈಗಾಗಲೇ ನನ್ನ ಕಚೇರಿ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸೇರಿದಂತೆ ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿವ ಎಲ್ಲ ಕಚೇರಿಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬಂದಿದೆ. ಹೀಗಾಗಿ ಹೊಸ ವರ್ಷದ ಮೊದಲ ದಿನದಿಂದಲೇ ಸರಕಾರ ಮತ್ತು ವಿಶ್ವವಿದ್ಯಾಲಯಗಳ ನಡುವಿನ ಎಲ್ಲ ವ್ಯವಹಾರವು ಆನ್ಲೈನ್ ಮೂಲಕವೇ ನಡೆಯಲಿದೆ. ಪತ್ರ ವ್ಯವಹಾರ ಅಥವಾ ಕಡತ ರವಾನೆಗೆ ಅವಕಾಶವೇ ಇರುವುದಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಸ್ಪಷ್ಟವಾಗಿ ಹೇಳಿದರು.
ಇ- ಆಫೀಸ್ ಅನ್ನು ಎಲ್ಲ ವಿವಿಗಳು ಇನ್ನೂ ಮಾಡುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಜನವರಿ ಒಂದರಿಂದಲೇ ಇದೆಲ್ಲ ಸಾಧ್ಯವಾಗಬೇಕು. ಒಂದು ವೇಳೆ ತಪ್ಪಿದರೆ ನಾನೇ ಖುದ್ದು ವಿವಿಗೆ ಬಂದು ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆನ್ಲೈನ್ ಆಪ್ಲಿಕೇಷನ್ : ಮೂರು ದಿನ ಗಡುವು
ಇ-ಆಡಳಿತ ಇಲಾಖೆ ಮತ್ತು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಅತ್ಯಂತ ವೈಜ್ಞಾನಿಕವಾಗಿ ರೂಪಿಸಿರುವ ಏಕೀಕೃತ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು ಎಲ್ಲ ವಿವಿಗಳಲ್ಲೂ ಕಡ್ಡಾಯವಾಗಿ ಜಾರಿಯಾಗಲೇಬೇಕು. ಇದರ ಬಗ್ಗೆ ಅಧ್ಯಯನ ಮಾಡಲು ವಿವಿಧ ಕುಲಪತಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಗಳು ಆಯಾ ಮಾಡ್ಯೂಲ್ಸ್ʼಗೆ ಸಂಬಂಧಿಸಿದಂತೆ ಮೂರು ದಿನಗಳಲ್ಲಿ ವರದಿಗಳನ್ನು ತಪ್ಪದೇ ನೀಡಬೇಕು ಎಂದು ಡಿಸಿಎಂ ಸಂಬಂಧಿತ ಕುಲಪತಿಗಳಿಗೆ ಗಡುವು ವಿಧಿಸಿದರು.
ಇದನ್ನೂ ಓದಿ :
BS Yediyurappa: 21,746 ಕೋಟಿ ರೂ. ಹೂಡಿಕೆಯ ಮೂರು ಯೋಜನೆಗಳಿಗೆ ಸರ್ಕಾರ ಒಪ್ಪಿಗೆ
ಈ ವ್ಯವಸ್ಥೆಯಿಂದ ವಿವಿಗಳ ಆಡಳಿತದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗುತ್ತದೆ. ಈ ನಿಟ್ಟಿನಲ್ಲಿ ಹೊಸ ಕೋರ್ಸ್ ಗಳಿಗೆ ಅನುಮತಿ ನೀಡುವುದು, ಹೊಸ ಕಾಲೇಜುಗಳಿಗೆ ಮಂಜೂರಾತಿ ಸೇರಿದಂತೆ ಎಲ್ಲ ಆಡಳಿತಾತ್ಮಕ ಕೆಲಸಗಳೆಲ್ಲವೂ ಈ ಮೂಲಕವೇ ನಡೆಯಬೇಕು ಎಂದು ಡಿಸಿಎಂ ತಾಕೀತು ಮಾಡಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ ಕುಮಾರನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಅವರು ಡಿಸಿಎಂ ಜತೆ ಭಾಗಿಯಾಗಿದ್ದರು.
Published by:
G Hareeshkumar
First published:
December 21, 2020, 10:18 PM IST