ಹುಬ್ಬಳ್ಳಿ: ವಿದೇಶಿ ಹಣ (Foreign Currency) ಪಡೆಯಲು ಹೋಗಿ ನಿವೃತ್ತ ಪ್ರಾಧ್ಯಾಪಕರೊಬ್ಬರು (Retired Professor) ಕೋಟ್ಯಂತರ ರೂಪಾಯಿ ಹಣವನ್ನು ಕಳೆದುಕೊಂಡು ವಂಚನೆಗೊಳಗಾದ ಘಟನೆ ನಡೆದಿದೆ. ಅಂತರಾಷ್ಟ್ರೀಯ ತೆರಿಗೆ, ಭದ್ರತಾ ಶುಲ್ಕದ ನೆಪದಲ್ಲಿ ಸೈಬರ್ ವಂಚಕರು (Cyber Crime) ಕೋಟ್ಯಂತರ ರೂಪಾಯಿ ವಂಚಿಸಿದ್ದು, ಇದೀಗ ಕೈಯಲ್ಲಿದ್ದ ದುಡ್ಡೂ ಹೋಯ್ತು, ಆಸೆ ಪಟ್ಟ ದುಡ್ಡೂ ಹೋಯ್ತು ಅನ್ನೋ ಸ್ಥಿತಿಗೆ ಪ್ರಾಧ್ಯಾಪಕ ತಲುಪಿದ್ದಾರೆ.
ಅಂದ ಹಾಗೆ ನಿವೃತ್ತ ಪ್ರಾಧ್ಯಾಪಕ ಶಿವನಾಗಪ್ಪ ಕೋರಿಶೆಟ್ಟರ್ ಅವರು 30 ವರ್ಷಗಳ ಹಿಂದೆ ಕೆನಡಾದ ಒಟ್ಟಾವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದ್ದರು. ಆಗ ಅವರ ಸಹೋದ್ಯೋಗಿ ಆಗಿದ್ದ ಜಾನ್ ಕ್ಲರ್ಕ್ ಅಪಘಾತದಿಂದ ಸಾವನ್ನಪ್ಪಿದ್ದರು. ಉತ್ತಮ ಸ್ನೇಹಿತರಾಗಿದ್ದ ಶಿವನಾಗಪ್ಪ ಕೋರಿಶೆಟ್ಟರ್ ಮತ್ತು ಜಾನ್ ಕ್ಲರ್ಕ್ ಅವರು ಒಂದೇ ಕಾಲೇಜಿನಲ್ಲಿ ವೃತ್ತಿ ಮಾಡುತ್ತಿದ್ದರಿಂದ ಅವರಿಬ್ಬರ ಸ್ನೇಹದ ಬಗ್ಗೆ ತಿಳಿದವರೇ ಶಿವನಾಗಪ್ಪ ಕೋರಿಶೆಟ್ಟರ್ ಅವರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ವಂಚಕರ ಜಾಲಕ್ಕೆ ಸುಲಭವಾಗಿ ಬಿದ್ದ ನಿವೃತ್ತ ಪ್ರಾಧ್ಯಾಪಕ
ಜಾನ್ ಕ್ಲರ್ಕ್ ಹಾಗೂ ಶಿವನಾಗಪ್ಪ ಅವರ ಪರಿಚಯದ ಮಾಹಿತಿ ಪಡೆದ ವಂಚಕರು ಕೃತ್ಯ ಎಸಗಿದ್ದು, ಶಿವನಾಗಪ್ಪ ಅವರನ್ನು ಸಂಪರ್ಕಿಸಿದ ವಂಚಕರು, ಜಾನ್ ಕ್ಲರ್ಕ್ ಅವರ ಪತ್ನಿ ದೋಬೆರಾ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಯುನೈಟೆಡ್ ಕಿಂಗ್ಡಮ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹೀಗಾಗಿ ತಮ್ಮ ಗಳಿಕೆಯ ಹಣವನ್ನು ಚಾರಿಟಿ ಟ್ರಸ್ಟ್ ಮೂಲಕ ಭಾರತದಲ್ಲಿರುವ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ನಿಮ್ಮ ಹೆಸರಿಗೆ ಉಯಿಲು ಬರೆದಿದ್ದಾರೆ. ಈ ಹಣವನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದಾಗ ಅದು 45 ಕೋಟಿಗೂ ಹೆಚ್ಚು ಮೊತ್ತದ್ದಾಗಿದೆ ಎಂದು ನಂಬಿಸಿದ್ದಾರೆ.
1.19 ಕೋಟಿ ವರ್ಗಾಯಿಸಿಕೊಂಡ ಖದೀಮರು
ಅಲ್ಲದೇ ಅಷ್ಟೂ ಹಣವನ್ನು ಆರ್ಬಿಐ ಬ್ಯಾಂಕ್ಗೆ ವರ್ಗಾಯಿಸಲಾಗಿದ್ದು, ನಿಮ್ಮ ಖಾತೆಗೆ ಹಣ ಜಮಾ ಮಾಡಲು ನೋಂದಣಿ, ತೆರಿಗೆ ಹಾಗೂ ಭದ್ರತಾ ಶುಲ್ಕ ಪಾವತಿಸಬೇಕಿದೆ ಎಂದು ಹೇಳಿ ಆರ್ಬಿಐ ಹೆಸರಿನ ಲೆಟರ್ಹೆಡ್ನಲ್ಲಿ ಮೇಲ್ ಕಳುಹಿಸಿದ್ದಾರೆ. ಇದನ್ನು ನಂಬಿದ ನಿವೃತ್ತ ಪ್ರಾಧ್ಯಾಪಕ ಶಿವನಾಗಪ್ಪ ಕೋರಿಶೆಟ್ಟರ್ ಅವರು ಒಪ್ಪಿದ್ದಾರೆ. ಆಗ ಹಂತ ಹಂತವಾಗಿ ಸುಮಾರು 1.19 ಕೋಟಿ ರೂಪಾಯಿ ಹಣವನ್ನು ವಂಚಕರು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಬಳಿಕ ಅವರ ಪ್ರತಿಕ್ರಿಯೆ ಇಲ್ಲದೇ ಇದ್ದಾಗ ಶಿವನಾಗಪ್ಪ ಕೋರಿಶೆಟ್ಟರ್ ಅವರಿಗೆ ತಾನು ಮೋಸ ಹೋದ ಬಗ್ಗೆ ಅರಿವಿಗೆ ಬಂದಿದ್ದು, ಈ ಬಗ್ಗೆ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದು, ಪೊಲೀಸರ ಮಾಹಿತಿ ಪ್ರಕಾರ ವಂಚಕರು ಕೋರಿಶೆಟ್ಟರ್ ಅವರನ್ನು ವಂಚಿಸಲು ಪಬ್ಲಿಕ್ ಡೊಮೈನ್ ಅನ್ನು ಬಳಸಿದ್ದಾರೆ. ಜೀಮೇಲ್ ಮತ್ತು ಮೊಬೈಲ್ ಮೂಲಕ ವಂಚಕರನ್ನು ಸಂಪರ್ಕಸಿದಾಗ ಅವರು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ನಾವು ತನಿಖೆಯನ್ನು ತೀವ್ರಗತಿಯಲ್ಲಿ ಮುಂದುವರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ