ಹಾಸನ (ಜೂನ್ 26): 'ಹೆತ್ತವರಿಗೆ ಹೆಗ್ಗಣವೂ ಮುದ್ದು' ಎಂಬ ಮಾತೊಂದಿದೆ. ತಂದೆ-ತಾಯಿ ತಮ್ಮ ಮಕ್ಕಳ ಖುಷಿಗಾಗಿ ಎಂತಹ ತ್ಯಾಗಕ್ಕೆ ಬೇಕಾದರೂ ಸಿದ್ಧರಿರುತ್ತಾರೆ. ಆದರೆ, ಅಪ್ಪ-ಅಮ್ಮನೇ ತಮ್ಮ ಮಗುವನ್ನು ಕೊಲೆ ಮಾಡಿ ಹೂತುಹಾಕಿರುವ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಇನ್ನೆಲ್ಲೋ ಅಲ್ಲ, ನಮ್ಮದೇ ರಾಜ್ಯದ ಹಾಸನದಲ್ಲಿ ಎಂಬುದು ಇನ್ನೊಂದು ಶಾಕಿಂಗ್ ಸಂಗತಿ!
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾಡ್ಲೂರುಕೊಪ್ಪಲು ಗ್ರಾಮದಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂನಿಂದ ಕೆಲಸಕ್ಕೆಂದು ಹಾಸನಕ್ಕೆ ಬಂದಿದ್ದ ಕುಟುಂಬವೊಂದು ಇಲ್ಲೇ ಸಂಸಾರ ಸಮೇತವಾಗಿ ವಾಸವಾಗಿತ್ತು. ಆದರೆ, ತಾವು ಕೆಲಸ ಮಾಡುವ ಕಾಫಿ ತೋಟದಲ್ಲೇ ತಮ್ಮ ಒಂದೂವರೆ ವರ್ಷದ ಮಗುವನ್ನು ಕೊಂದು, ಹೂತು ಹಾಕಿದ್ದಾರೆ ಎಂಬ ಆರೋಪ ಆ ದಂಪತಿಯ ವಿರುದ್ಧ ಕೇಳಿಬಂದಿದೆ.
ಒಂದೂವರೆ ವರ್ಷದ ಮಗು ಸಫೀಕ್ ಉಲ್ಲಾ ಇಸ್ಲಾಂನನ್ನು ಕೊಂದಿರುವ ಪೋಷಕರು ಬಳಿಕ ಕಾಫಿ ತೋಟದಲ್ಲಿ ಹೂತಿದ್ದಾರೆ ಎನ್ನಲಾಗಿದೆ. ರಫೀಕ್ ಉಲ್ಲಾ ಇಸ್ಲಾಂ ಹಾಗೂ ಆತನ ಎರಡನೇ ಪತ್ನಿಯಿಂದ ಈ ಕೃತ್ಯ ನಡೆದಿದೆ. ಅವರು ಕೆಲಸ ಮಾಡುತ್ತಿದ್ದ ಕಾಫಿ ತೋಟದಲ್ಲೇ ಮಗುವಿನ ಶವ ಕೂಡ ಪತ್ತೆಯಾಗಿದೆ.
ಘಟನೆ ನಡೆದ ಸ್ಥಳಕ್ಕೆ ತಹಸೀಲ್ದಾರ್ ಶಿರೀನ್ ತಾಜ್, ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ಹಾಸನಕ್ಕೆ ಬಂದಿರುವ ಕುಟುಂಬ ಇಲ್ಲೇ ವಾಸವಾಗಿತ್ತು. ಕೆಲವು ದಿನಗಳ ಹಿಂದೆ ಗಂಡ- ಹೆಂಡತಿಯ ನಡುವೆ ಜಗಳ ನಡೆದಿತ್ತು. ಈ ವೇಳೆ ಅಳುತ್ತಿದ್ದ ಮಗುವನ್ನು ಹೊಡೆದು ಸಾಯಿಸಿ, ನಂತರ ಶವವನ್ನು ಹೂತು ಹಾಕಿದ್ದಾರೆ ಎಂದು ಸ್ಥಳೀಯರು ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಶವವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ತನಿಖೆಯ ಬಳಿಕ ಸತ್ಯಾಂಶ ಹೊರಬೀಳಬೇಕಿದೆ. ಸದ್ಯಕ್ಕೆ ಆರೋಪಿಗಳಾದ ಅಸ್ಸಾಂನ ಗಂಡ-ಹೆಂಡತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ