ಕಲಬುರ್ಗಿ(ಡಿಸೆಂಬರ್. 31): ಕಳ್ಳತನಕ್ಕೆಂದು ಬಂದ ಕಳ್ಳರ ಕೈಗೆ ಹಣವೇ ಸಿಗದಿದ್ದಾಗ ಅಂಗಡಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಕಲಬುರ್ಗಿ ನಗರದಲ್ಲಿ ನಡೆದಿದೆ. ಕಲಬುರ್ಗಿಯ ಎ.ಪಿ.ಎಂ.ಸಿ. ಆವರಣದಲ್ಲಿರುವ ಕೃಷ್ಣಾ ಟ್ರೇಡಿಂಗ್ ಹೋಲ್ ಸೇಲ್ ಅಂಗಡಿಯಲ್ಲಿ ಘಟನೆ ನಡೆದಿದೆ. ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಕಿರಾಣಿ ಸಾಮಾನು ಸುಟ್ಟು ಕರಕಲಾಗಿದೆ. ಹೊಸ ವರ್ಷಾಚರಣೆ ಸಂಭ್ರಮದ ಸಿದ್ಧತೆಯಲ್ಲಿದ್ದ ಕಲಬುರ್ಗಿ ಜನತೆಯನ್ನು ಘಟನೆ ಬೆಚ್ಚಿ ಬೀಳುವಂತೆ ಮಾಡಿದೆ. ಯಾರಾದರೂ ಕಳ್ಳತನಕ್ಕೆ ಬಂದ್ರೆ ಸಿಕ್ಕದ್ದನ್ನು ಕದ್ದು ಅಲ್ಲಿಂದ ಪರಾರಿ ಆಗುವುದು ಸಹಜ. ಆದರೆ ಕಲಬುರ್ಗಿ ನಗರದಲ್ಲಿ ಈ ಚಾಲಾಕಿ ಕಳ್ಳರು ಮಾಡಿದ್ದೇ ಬೇರೆ. ಲಕ್ಷಾಂತರ ರೂಪಾಯಿ ನಗದು ಸಿಗಬಹುದೆಂದು ಟಿನ್ ಶೆಡ್ ಮುರಿದು ಹೋಲ್ ಸೇಲ್ ಅಂಗಡಿಗೆ ನುಗ್ಗಿದ ಕಳ್ಳರಿಗೆ ಯಾವುದೇ ಹಣ ಸಿಗದೇ ಶಾಕ್ ಆಗಿದ್ದಾರೆ. ಹಣ ಸಿಗದೇ ಇದ್ದಾಗ ತೀವ್ರ ನಿರಾಸೆಗೆ ಒಳಗಾದ ಕಳ್ಳರು, ಅಂಗಡಿಗೇ ಬೆಂಕಿ ಹಚ್ಚಿ ಅಲ್ಲಿಂದ ಪರಾರಿ ಆಗಿದ್ದಾರೆ.
ಎಪಿಎಂಸಿ ಆವರಣದಲ್ಲಿರುವ ಹೋಲ್ ಸೇಲ್ ಅಂಗಡಿಯಲ್ಲಿ. ಕಳೆದ ರಾತ್ರಿ ಮೇಲ್ಛಾವಣಿಯ ಶೀಟ್ ಗಳನ್ನು ಸರಿಸಿ ಕೃಷ್ಣಾ ಟ್ರೇಡಿಂಗ್ಸ್ ಎಂಬ ಹೋಲ್ ಸೇಲ್ ಅಂಗಡಿಗೆ ನುಗ್ಗಿದ ಕಳ್ಳರು, ಕಳ್ಳತನಕ್ಕೆ ಯತ್ನಿಸಿದ್ದಾರೆ. ಕ್ಯಾಷ್ ಕೌಂಟರ್ ಬಳಿ ಹೋಗಿ ನಗದು ಹಣ ಎಷ್ಟಿದೆ ಎಂದು ಹುಡುಕಾಡಿದ್ದಾರೆ. ಯಾವುದೇ ನಗದು ಸಿಗದೇ ಇದ್ದಾಗ ತೀವ್ರ ನಿರಾಸೆಗೊಂಡಿದ್ದಾರೆ. ಹಣ ಸಿಗದೇ ಕುಪಿತಗೊಂಡ ದುಷ್ಕರ್ಮಿಗಳು, ಅಂಗಡಿಗೇ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಅಂಗಡಿ ಎಪಿಎಂಸಿ ಆವರಣದಲ್ಲಿರುವುದರಿಂದ ತಕ್ಷಣಕ್ಕೆ ಬೆಂಕಿ ಬಿದ್ದ ಮಾಹಿತಿ ಮಾಲೀಕನಿಗೆ ಗೊತ್ತಾಗಿಲ್ಲ. ಅಂಗಡಿಗೆ ಬೆಂಕಿ ಬಿದ್ದಿರುವ ಸುದ್ದಿ ಗೊತ್ತಾಗುವುದುರೊಳಗಾಗಿ ಅದರಲ್ಲಿದ್ದ ಬಹುತೇಕ ಸಾಮಾನುಗಳು ಸುಟ್ಟು ಕರಕಲಾಗಿವೆ.
ಅಕ್ಕಿ, ಬೇಳೆ ಚೀಲಗಳು, ಸೋಪು, ಎಣ್ಣೆ, ರವಾ ಸೇರಿ ವಿವಿಧ ಕಿರಾಣಿ ಸಾಮಾನುಗಳು ಬೆಂಕಿಗೆ ಆಹುತಿಯಾಗಿವೆ. ಸುಮಾರು 1 ಕೋಟಿ ರೂಪಾಯಿಯಷ್ಟು ಮೌಲ್ಯದ ಸಾಮಾನುಗಳು ಅಂಗಡಿಯಲ್ಲಿದ್ದವು. ಎಲ್ಲವೂ ಸುಟ್ಟು ಕರಕಲಾಗಿವೆ. ಕಳ್ಳತನಕ್ಕೆಂದು ಬಂದವರು ಏನೂ ಸಿಕ್ಕಿಲ್ಲವೆಂದು ಹೀಗೆ ಮಾಡಿ ಹೋಗಿದ್ದಾರೆ. ಸಾಮಾನುಗಳ ಜೊತೆಗೆ ಅಂಗಡಿಯ ದಾಖಲೆಗಳೂ ಸುಟ್ಟು ಕರಕಲಾಗಿವೆ.
ಇದನ್ನೂ ಓದಿ : ಮಕ್ಕಳ ಸುರಕ್ಷತೆ ನಮ್ಮದು, ಶಾಲೆಗೆ ಧೈರ್ಯವಾಗಿ ಕಳುಹಿಸಿ: ಸಚಿವ ಸುರೇಶ್ ಕುಮಾರ್ ಮನವಿ
ಕಳ್ಳರ ಕೃತ್ಯದಿಂದ ಭಾರೀ ನಷ್ಟವಾಗಿದೆ ಎಂದು ಅಂಗಡಿಯ ಮಾಲೀಕ ಕೃಷ್ಣಾ ಅಲವತ್ತುಕೊಂಡಿದ್ದಾನೆ.ಸುದ್ದಿ ತಿಳಿಯುತ್ತಿದ್ದಂತೆಯೇ ದೌಡಾಯಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ