ಹುಬ್ಬಳ್ಳಿ: ಅದು ವಾಣಿಜ್ಯ ಚಟುವಟಿಕೆಗಳಿಂದ (Commercial Activities) ಹೆಸರುವಾಸಿಯಾಗಿದ್ದ ನಗರ. ವ್ಯಾಪಾರ ವಹಿವಾಟು ಮೂಲಕ ಸಾಕಷ್ಟು ಹೆಸರು ಮಾಡಿದ್ದ ಉತ್ತರ ಕರ್ನಾಟಕದ (North Karnataka) ಹೆಬ್ಬಾಗಿಲು. ಆದರೆ ಈ ನಗರಕ್ಕೆ ಅದ್ಯಾರ ವಕ್ರದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಎಲ್ಲೆಂದರಲ್ಲಿ ಹರಿಯುತ್ತಿದೆ ನೆತ್ತರು. ಲೆಕ್ಕವಿಲ್ಲದಷ್ಟು ಅಪರಾಧ ಪ್ರಕರಣಗಳು (Crime Cases) ನಡೆಯುತ್ತಿವೆ. ದಿನಕ್ಕೆ ಒಂದಲ್ಲ ಒಂದು ಕಡೆ ಚೂರಿ, ಚಾಕು ಇರಿತ ಕಾಮನ್ ಆಗಿದೆ. ಇದರಿಂದ ಎಚ್ಚೆತ್ತ ಪೊಲೀಸ್ ಕಮೀಷನರೇಟ್ ರೌಡಿ ಪರೇಡ್ ಗೆ ಮುಂದಾಗಿದ್ದು, ಅಲ್ಲದೇ ರೌಡಿಗಳ ಗಡಿಪಾರಿಗೂ ಇಲಾಖೆ ಚಿಂತನೆ ನಡೆಸಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿ (Hubblli-Dharwad City) ಸಾಕಷ್ಟು ವ್ಯಾಪಾರ ವಹಿವಾಟುಗಳಿಂದ ಅಂತರ್ ರಾಜ್ಯ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಸರು ಮಾಡಿದೆ. ಆದರೆ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
2 ವರ್ಷದಲ್ಲಿ 20 ಕೊಲೆ
ಅವಳಿ ನಗರದಲ್ಲಿ ಇತ್ತೀಚಿನ ದಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. 2 ವರ್ಷದಲ್ಲಿ ಅಂದಾಜು 20 ಕೊಲೆ, 80 ಕೊಲೆಗೆ ಯತ್ನ ಪ್ರಕರಣ ನಡೆದಿವೆ. ನೀರಿನ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ನೆತ್ತರು ಹರಿಯುತ್ತಿದ್ದು, ಜನರು ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ.
ಸಾಮಾನ್ಯ ಜನರು ಕೊಲೆ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ನಿಜಕ್ಕೂ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಆಸ್ತಿ ವಿಚಾರ, ವೈಯಕ್ತಿಕ ದ್ವೇಷ, ಕುಟುಂಬ ಕಲಹ, ಪ್ರೀತಿ, ಪ್ರೇಮ ಸೇರಿದಂತೆ ಕುಲ್ಲಕ ಕಾರಣಕ್ಕೆ ಕೊಲೆ, ಕೊಲೆ ಯತ್ನ ಪ್ರಕರಣಗಳು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚುತ್ತಲೇ ಇವೆ.
ರೌಡಿ ಪರೇಡ್, ಪೊಲೀಸರಿಂದ ಎಚ್ಚರಿಕೆ
ಈ ನಿಟ್ಟಿನಲ್ಲಿ ಈಗ ಪೊಲೀಸ್ ಕಮೀಷನರೇಟ್ ರೌಡಿ ಪರೇಡ್ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ಮುಂದಾಗಿದೆ. ಕಸಬಾ ಪೇಟೆ ಪೊಲೀಸ್ ಠಾಣೆ ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ರೌಡಿಶೀಟರ್ಗಳಿಗೆ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಗಿದೆ.
ಇನ್ನು ರೌಡಿ ಎಲಿಮೆಂಟ್ಸ್ನಲ್ಲಿ ಭಾಗಿಯಾಗಿರೋ ಕೆಲವರನ್ನು ಗಡಿಪಾರು ಮಾಡೋಕು ಇಲಾಖೆ ಚಿಂತನೆ ನಡೆಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಸಾಹಿಲ್ ಬಾಗ್ಲಾ ಮಾಹಿತಿ ನೀಡಿದ್ದಾರೆ.
ಹಾಡಹಗಲೇ ಹರಿದಿತ್ತು ನೆತ್ತರು
ಇನ್ನು ಕಸಬಾ ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಪುಡಿ ರೌಡಿಗಳ ಅಟ್ಟಹಾಸ ಜಾಸ್ತಿಯಾಗಿದೆ. ಕಳೆದ ವಾರ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಯಲ್ಲಿ ಹಗಲಲ್ಲೆ ನೆತ್ತರು ಹರಿದಿತ್ತು. ಮುಖಕ್ಕೆ ಖಾರದ ಪುಡಿ ಎರಚಿ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.
ಹೆಚ್ಚುತ್ತಿರುವ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಿಂದ ವಾಣಿಜ್ಯ ನಗರಿಯಲ್ಲಿ ಸಾರ್ವಜನಿಕ ಅಭದ್ರತೆ ಕಾಡುತ್ತಿದೆ. ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಯುವಕರೇ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಹುಬ್ಬಳ್ಳಿ ಜನರ ನಿದ್ದೆಗೆಡಿಸಿದೆ.
ಸಣ್ಣ ಸಣ್ಣ ಕಾರಣಗಳಿಗೆ ಕೊಲೆಗಳು
ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಬೇಕಾದ ಪೋಷಕರೇ ಮಕ್ಕಳು ದಾರಿ ತಪ್ಪಿದರೂ ಸುಮ್ಮನಿರುವುದು ಮೂಲ ಕಾರಣವಾಗಿದೆ. ಮದ್ಯ ವ್ಯಸನ, ಸಿಗರೇಟ್ ಹಾಗೂ ಗುಟ್ಕಾ ಕೊಡಿಸುವ ವಿಚಾರವಾಗಿ ಕಳೆದ ಆರು ತಿಂಗಳಲ್ಲಿ 8 ಕೊಲೆಗಳಾಗಿವೆ.
ಇದನ್ನೂ ಓದಿ: Bengaluru Mysuru Expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣಿಕರಿಗೆ ಟ್ರಾಫಿಕ್ ಸಮಸ್ಯೆ!
ಇನ್ನೂ ಕುಟುಂಬ ಕಲಹ, ಪ್ರೀತಿ-ಪ್ರೇಮ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಐದು ಕೊಲೆ ಪ್ರಕರಣಗಳು ದಾಖಲಾಗಿವೆ. ಇದೀಗ ಪೊಲೀಸ್ ಇಲಾಖೆ ಎಚ್ಚಿತ್ತುಕೊಂಡಿರೋ ಸ್ವಾಗತಾರ್ಹ. ಆದ್ರೆ ರೌಡಿ ಪರೇಡ್ ಮಾಡಿದ್ರೆ ಮಾತ್ರ ಸಾಲಲ್ಲ, ಪುಡಿ ರೌಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಒಟ್ಟಾರೆ ಛೋಟಾ ಮುಂಬೈನಲ್ಲಿ ಕೊಲೆ ಸುಲಿಗೆ ಅನ್ನೋದ ಕಾಮನ್ ಆಗಿದೆ. ಇದೀಗ ಪೊಲೀಸ್ ಇಲಾಖೆ ರೌಡಿ ಪರೇಡ್ ಮಾಡೋಕೆ ಮುಂದಾಗಿದ್ದು, ಎಷ್ಟರ ಮಟ್ಟಿಗೆ ಕ್ರೈಮ್ ಕಂಟ್ರೋಲ್ ಆಗತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ