• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • VVS Laxman: ಸ್ವಾಭಿಮಾನಿ ಸೆಲ್ವಮ್ಮನ ಬದುಕಿಗೆ ಬಹುಪರಾಕ್ ಎಂದ ದಿಗ್ಗಜ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್.!!

VVS Laxman: ಸ್ವಾಭಿಮಾನಿ ಸೆಲ್ವಮ್ಮನ ಬದುಕಿಗೆ ಬಹುಪರಾಕ್ ಎಂದ ದಿಗ್ಗಜ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್.!!

ಸೆಲ್ವಮ್ಮ

ಸೆಲ್ವಮ್ಮ

75ರ ಈ ಇಳಿ ಪ್ರಾಯದಲ್ಲೂ ಹೈ ಟೆಕ್ನಾಲಜಿ ಬಳಸಿಕೊಂಡು ವ್ಯಾಪಾರ ಮಾಡುತ್ತಿರುವ ಕಾರಣಕ್ಕೆ ವಿವಿಎಸ್ ಲಕ್ಷ್ಮಣ್ ಕೂಡ ಸೆಲ್ವಮ್ಮರನ್ನು ಮೆಚ್ಚಿ ಹಾಡಿ ಹೊಗಳಿದ್ದಾರೆ.‌

  • Share this:

ಪ್ರತಿ ದಿನ ಲಕ್ಷಾಂತರ ಮಂದಿ ಓಡಾಡುವ ರಸ್ತೆಯದು. ಅಷ್ಟೇ ಯಾಕೆ‌ ಕರುನಾಡ ಹೆಮ್ಮೆ ವಿಧಾನಸೌಧ ನೆಲೆಸಿರುವ ಬೀದಿಯದು. ಹಸಿರ ಹೊತ್ತು ಮಲಗಿರುವ ಕಬ್ಬನ್ ಪಾರ್ಕ್ ಇರುವ ಜಾಗವದು. ಅಲ್ಲೊಬ್ಬಾಕೆ ಯಾರ ಗೋಜಿಗೂ ಇಲ್ಲದೆ ತನ್ನಿಷ್ಟಕ್ಕೆ ತಾನು ದುಡಿದು ಬದುಕು ಸಾಗಿಸುತ್ತಿದ್ದಾರೆ. ಕೆಂಡದಲ್ಲಿಟ್ಟ ಜೋಳದಂತೆ ಉರಿದುರಿದು ಜೀವನಕ್ಕಾಗಿ ಜೀವವನ್ನು ಸುಟ್ಟುಕೊಳ್ಳುತ್ತಿದ್ದಾರೆ. ವಯಸ್ಸು 75. ಆದರೆ ಜೀವನೋತ್ಸಾಹ 25ರದ್ದು. ಮುದುಡಿದ ಚರ್ಮ ಹೊತ್ತು ಬದುಕುತ್ತಿರುವ ಈ ವೃದ್ಧೆಯ ಹೆಸರು ಸೆಲ್ವಮ್ಮ. ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಇರುವ ಲೋಕಾಯುಕ್ತ ಕಚೇರಿಯ ಮುಂಭಾಗದಲ್ಲಿ ಜೋಳ ಮಾರುವ ಸೆಲ್ವಮ್ಮನ ಬದುಕು ಸಾಗುತ್ತಿರುವುದು ಕೆಂಡದ ಮೇಲೆ ತನ್ನನ್ನು ತಾನು ಸುಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಜೋಳದಿಂದ. ಬೆಳಗ್ಗೆ 10ರ ಸುಮಾರಿಗೆ ತಳ್ಳುಗಾಡಿ ಹಿಡಿದು ಬಂದರೆ ಸಂಜೆಗತ್ತಲವರೆಗೆ  ವ್ಯಾಪಾರ ಮಾಡುತ್ತಾರೆ. ಈಗ ಈ ಸೆಲ್ವಮ್ಮನ ಈ ಭಾನಾತ್ಮಕ ಬದುಕು ಎಲ್ಲರಿಗೂ ಪರಿಚಯವಾಗುವಂತೆ ಮಾಡಿದ್ದು‌ ದಿಗ್ಗಜ ಕ್ರಿಕೆಟಿಗರೊಬ್ಬರಿಂದ. ಟೀಂ ಇಂಡಿಯಾದ ಮಾಜಿ ಆಟಗಾರ, ವಿಶ್ವ ಕ್ರಿಕೆಟ್ ನಲ್ಲಿ ಪಳಪಳನೆ ಹೊಳೆದ ದಿಗ್ಗಜರಲ್ಲೊಬ್ಬರಾದ ವಿವಿಎಸ್ ಲಕ್ಷ್ಮಣ್ ತನ್ನ ಟ್ವಿಟರ್ ಖಾತೆಯಲ್ಲಿ ಈ ಸೆಲ್ವಮ್ಮನ ಜೀವನೋತ್ಸಾಹಕ್ಕೆ ಬಹುಪರಾಕ್ ಎಂದಿದ್ದಾರೆ. ಸೆಲ್ವಮ್ಮ ಜೋಳ ಮಾರಾಟ ಮಾಡುತ್ತಿರುವ ಪೋಟೋ ಲಗತ್ತಿಸಿ ಟ್ವೀಟ್ ಮಾಡಿದ ಲಕ್ಷ್ಮಣ್ ಈ ರೀತಿ ಹೇಳಿದ್ದಾರೆ,



ಲಕ್ಷ್ಮಣ್ ಟ್ವೀಟ್ ಬಳಿಕ ಸೆಲ್ವಮ್ಮನ ಹೋಗಿ ನ್ಯೂಸ್ 18 ಕನ್ನಡ ಮಾತನಾಡಿಸಿದೆ. ತನ್ನ ಬದುಕಿನ ಬಗ್ಗೆ ಹೇಳಿಕೊಂಡ ಸೆಲ್ವಮ್ಮ ಸ್ವಾಭಿಮಾನದ ಬದುಕಿನ ಬಗ್ಗೆ ಮಾತನಾಡಿದ್ದಾರೆ. ರಾಜಧಾನಿಯಲ್ಲಿ ರಸ್ತೆ ಬದಿ ಜೋಳ ಮಾರುವವರ ಸಂಖ್ಯೆ ಕಡಿಮೆಯಿಲ್ಲ. ಅದರಲ್ಲಿ ಈ ಸೆಲ್ವಮ್ಮ ಯಾಕೆ ವಿಶೇಷ ಎಂದರೆ, ಇವರು ಜೋಳ ಬೇಯಿಸುವುದು ಬಳಸಿರುವ ಮಾರ್ಗದಿಂದ.  ಸೋಲಾರ್ ಫ್ಯಾನ್ ನಿಂದಾಗಿ ಇವರು ಜೋಳಕ್ಕೆ ಕೆಂಡ ಕಾಯಿಸಿಕೊಳ್ಳುತ್ತಾರೆ. 75ರ ಈ ಇಳಿ ಪ್ರಾಯದಲ್ಲೂ ಹೈ ಟೆಕ್ನಾಲಜಿ ಬಳಸಿಕೊಂಡು ವ್ಯಾಪಾರ ಮಾಡುತ್ತಿರುವ ಕಾರಣಕ್ಕೆ ವಿವಿಎಸ್ ಲಕ್ಷ್ಮಣ್ ಕೂಡ ಸೆಲ್ವಮ್ಮರನ್ನು ಮೆಚ್ಚಿ ಹಾಡಿ ಹೊಗಳಿದ್ದಾರೆ.‌


ಬೆಂಗಳೂರಿನ ಸ್ಲಂವೊಂದರ ನಿವಾಸಿಯಾಗಿರುವ ಸೆಲ್ವಮ್ಮನಿಗೆ ಹಿಂದಿಲ್ಲ.. ಮುಂದಿಲ್ಲ. ಬದುಕು ಕೊಟ್ಟ ಬವಣೆ, ಸಂಕಟಕ್ಕೆ ಹೀಗೆ ಯಾವುದಕ್ಕೂ ಬಗ್ಗದ ಈ ಮುದಿ ಜೀವ ಒಂಟಿಯಾಗಿ ಆಗಲೇ 30 ವರ್ಷಗಳಾದವು.‌ ಹೆತ್ತ ಮಕ್ಕಳು ಜೊತೆಗಿಲ್ಲ, ಕಟ್ಟಿಕೊಂಡ ಸಂಗಾತಿಯಿಲ್ಲ. ಸೆಲ್ವಮ್ಮ ಒಂಟಿ ಜೀವ. ಪರಮಾತ್ಮನೇ ಸೆಲ್ವಮ್ಮನ ಜೊತೆಗಾರ. ವಿವಿಎಸ್ ಲಕ್ಷ್ಮಣ್ ಟ್ವೀಟ್ ಕಾರಣಕ್ಕೆ ಸೆಲ್ವಮ್ಮ ಈಗ ವೈರಲ್ ಆಗಿ ಹೋಗಿದ್ದಾರೆ. ಗ್ರಾಹಕರು ಕೊಡುವ 30-50 ರೂಪಾಯಿ ಮುಷ್ಠಿ ಹಿಡಿದು ಉಟ್ಟ ಸೀರೆಯ ತುದಿಗೆ ಕಟ್ಟುವ ಸೆಲ್ವಮ್ಮ‌ ಸದಾ ಹಸನ್ಮುಖಿ.‌


ಮೂಲತಃ ತಮಿಳುನಾಡಿನವರಾಗಿರುವ ಇವರು ಕಾಯಕ ಅರಸಿ ಸಿಲಿಕಾನ್ ಸಿಟಿಗೆ ಬಂದವರು. ಭಾಷೆ ಗೊತ್ತಿಲ್ಲ, ಲೋಕದ ಅರಿವಿಲ್ಲದೆ ಆರಂಭದಲ್ಲಿ ಮಾನಸಿಕವಾಗಿ ಕುಸಿದು ಬಿದ್ದಿದ್ದರು. ಬದುಕುವ ಛಲ ಹುಟ್ಟಿದವರಿಗೆ ಯಾವುದೂ ಲೆಕ್ಕಕ್ಕಿಲ್ಲ ಎನ್ನುವುದನ್ನ ನಗುನಗುತ್ತಾ ಹೇಳುವ ಸೆಲ್ವಮ್ಮನ ಮುಖದಲ್ಲಿ ಕರ್ಮದ ಮುಂದೆ ಹೋರಾಡಿ ಗೆದ್ದ ಛಲಗಾತಿಯ ರೋಷವಿದೆ. ದಿನವೊಂದಕ್ಕೆ ಎಷ್ಟು ಬೇಕೋ ಅಷ್ಟನ್ನೇ ದುಡಿದು ಕಾಲು ಚಾಚಲು ಸಿಕ್ಕ ಜಾಗದಲ್ಲಿ ಮುದುಡಿ ಮಲಗುವ ಈ ಹಿರಿ ಜೀವ ಸ್ಪರ್ಧಾತ್ಮಕವಾಗಿರುವ ಜನರ ಮಧ್ಯೆ ಮಗುವಿನಂತೆ ಬದುಕು ಕಳೆಯುತ್ತಿದ್ದಾರೆ. ಬೀಸಣಿಗೆ ಬೀಸಿ ಜೋಳಕ್ಕೆ ಕೆಂಡ ಕಾಯಿಸುವ ಇವರಿಗೆ ಅದ್ಯಾವುದೋ ಗಳಿಗೆಯಲ್ಲಿ ಗ್ರಾಹಕರಾಗಿ ಬಂದಿದ್ದ ಓರ್ವ ಮಹಿಳೆ ಈ ಸೋಲಾರ್ ಫ್ಯಾನ್ ಅನ್ನು ಕೊಡಿಸಿ ಹೋಗಿದ್ದಾರೆ. ಆ ಗಳಿಗೆಯನ್ನು ಈಗಲೂ ನೆನೆಯುವ ಸೆಲ್ವಮ್ಮ ಈ ಫ್ಯಾನು ಬಂದಿದ್ದರಿಂದ ಕೈ ನೋವು ಕಡಿಮೆ ಆಗಿದೆ ಅಂತ ಆ ಗ್ರಾಹಕಳನ್ನು ದೇವಧೂತೆ ಎಂಬಂತೆ ನೆನಪಿಸಿಕೊಳ್ಳುತ್ತಾರೆ.


ವರದಿ- ಆಶಿಕ್ ಮುಲ್ಕಿ

First published: