ಕೊಪ್ಪಳ: ಕೌಟುಂಬಿಕ ಸಮಸ್ಯೆಯಿಂದ (Family Problem) ಮುಂದಿನ ದಿನಗಳಲ್ಲಿ ನಾವು ಒಂದಾಗಿರಲು ಸಾಧ್ಯವೇ ಇಲ್ಲ ಅಂತ ಕಾನೂನು ಬದ್ಧವಾಗಿ ವಿಚ್ಛೇದನ (Divorce) ಪಡೆಯಲು ಮುಂದಾಗಿದ್ದ ದಂಪತಿಗಳನ್ನು (Couple) ಲೋಕ ಅದಾಲತ್ (Lok Adalat) ಒಂದು ಮಾಡಿದೆ. ನ್ಯಾಯಾಧೀಶರು ಗಂಡ-ಹೆಂಡತಿ (Wife and Husband) ನಡುವೆ ಮಾತುಕತೆ ನಡೆಸಿ ಒಂದಾಗುವಂತೆ ಮಾಡಿದ್ದಾರೆ. ಕೊಪ್ಪಳದಲ್ಲಿ (Koppal) ನಡೆದ ಲೋಕ ಅದಾಲತ್ನಲ್ಲಿ ಒಟ್ಟು ನಾಲ್ಕು ಜೋಡಿಗಳು ಮತ್ತೆ ಒಂದಾಗಿದ್ದು, ದಾಂಪತ್ಯ ಜೀವನನ್ನು ಮುಂದುವರಿಸಲು ನಿರ್ಧರಿಸಿ ಸಿಹಿ ಹಂಚಿಕೆ ಮಾಡಿದ್ದಾರೆ.
ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬ ಮಾತಿದೆ. ಗಾದೆಯ ಸಾರದಂತೆ ಸಣ್ಣ ಪುಟ್ಟ ಮನಃಸ್ತಾಪಗಳನ್ನ ಮನೆಯಲ್ಲೇ ಮುಗಿಸಿಕೊಳ್ಳುವ ಬದಲಿಗೆ ಈ ನಾಲ್ಕು ಜೋಡಿ, ಕೋರ್ಟ್ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಚೇದನ ಕೇಳಿದ್ದ ನಾಲ್ಕು ಜೋಡಿ ಕೋರ್ಟ್ ಆವರಣದಲ್ಲೇ ಮತ್ತೆ ಒಂದಾಗಿದ್ದಾರೆ.
ಇದನ್ನೂ ಓದಿ: Crime News: ಒಬ್ಬರಿಗೊಬ್ಬರು ಚಾಕು ಹಾಕಿಕೊಂಡ ಸ್ನೇಹಿತರು; ಓರ್ವ ಸಾವು, ಮಧ್ಯರಾತ್ರಿ ಬಿತ್ತು ಹೆಣ!
ನಾಲ್ಕು ಜೋಡಿಯ ವಿವಾಹ ವಿಚ್ಚೇದನ ಅರ್ಜಿ ಏಕಕಾಲಕ್ಕೆ ಸುಖಾಂತ್ಯ ಕಂಡಿರುವ ಅಪರೂಪದ ಪ್ರಕರಣ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ. ಸಣ್ಣ-ಪುಟ್ಟ ಜಗಳ ಮತ್ತು ಮನಸ್ತಾಪದ ಕಾರಣ ನೀಡಿ, ಗಂಗಾವತಿ ತಾಲೂಕಿನ ವಿವಿಧ ಗ್ರಾಮದ ದಂಪತಿಗಳಾದ ದ್ಯಾವಣ್ಣ ನಾಯಕ- ಅನಸೂಯ, ವಿರೇಶ- ಜಾನಕಮ್ಮ, ಶ್ರೀನಿವಾಸ - ತುಳಸಿದೇವಿ, ನಿಂಗಪ್ಪ- ಮಮತಾ ಕೋರ್ಟ್ ಗಂಗಾವತಿ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸುಮಾರು ಎರಡು ವರ್ಷಗಳ ವಿಚಾರಣೆ ನಂತರ, ಇಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ನಾಲ್ಕು ಜೋಡಿ ಮತ್ತೆ ಒಂದಾಗಿದ್ದಾರೆ.
ಕೋರ್ಟ್ ಹಾಲ್ನಲ್ಲೇ ಮತ್ತೊಮ್ಮೆ ಹಾರ ಬದಲಾಯಿಸಿಕೊಂಡ ದಂಪತಿ
ಕುಟುಂಬದಲ್ಲಿ ಹಲವು ಸಂದರ್ಭಗಳಲ್ಲಿ ವಿವಿಧ ಕಾರಣಗಳಿಗೆ ಮನಸ್ತಾಪಗಳು ಎದುರಾಗಿರುತ್ತವೆ. ಈ ಜಗಳನ್ನು ಪರಿಹರಿಸಿಕೊಳ್ಳಲಾಗದೆ ದೂರ ಆಗಲು ಹಲವರು ಕೋರ್ಟ್ ಮೆಟ್ಟಿಲೇರುತ್ತಾರೆ. ಇಂತಹ ದಂಪತಿಗಳ ಅರ್ಜಿಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯ ದಂಪತಿಗಳಿಗೆ ಕೌನ್ಸಿಲಿಂಗ್ ನಡೆಸುತ್ತದೆ. ಇಬ್ಬರ ನಡುವೆ ಮಾತುಕತೆ ನಡೆಸಲು ವೇದಿಕೆ ಸಹ ನೀಡುತ್ತದೆ. ಆ ವೇದಿಕೆಯೇ ಲೋಕ ಅದಾಲತ್ ಎಂದು ವಕೀಲರು ಹೇಳಿದ್ದಾರೆ.
ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮತ್ತೆ ಒಂದಾಗುವ ನಿರ್ಧಾರ ಮಾಡಿದ್ದ ಜೋಡಿಗಳು ಕೋರ್ಟ್ ಹಾಲ್ನಲ್ಲೇ ಮತ್ತೊಮ್ಮೆ ಹಾರ ಬದಲಾಯಿಸಿಕೊಂಡು ಹೊಸ ಜೀವನ ಆರಂಭಿಸಿದ್ದಾರೆ. ಸ್ವತಃ ನ್ಯಾಯಾಧೀಶರು ಮತ್ತು ವಕೀಲರು ಮುಂದೆ ನಿಂತು ಮುಂದಿನ ದಿನದಲ್ಲಿ ಯಾವುದೇ ಮನಸ್ತಾಪ ಇಲ್ಲದಂತೆ ಬದುಕಿ ಅಂತ ಹೇಳಿದ್ದಾರೆ. ಅಲ್ಲದೆ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದ್ದಾರೆ.
ದಂಪತಿಗಳಿಗೆ ಬುದ್ದಿ ಮಾತು ಹೇಳಿ ಶುಭ ಹಾರೈಸಿದ್ದಾರೆ
ಒಂದೇ ಬಾರಿಗೆ ನಾಲ್ಕು ಜೋಡಿ ಒಂದಾದ ಅಪರೂಪದ ಘಟನೆಗೆ ಗಂಗಾವತಿಯ ನಾಲ್ವರು ನ್ಯಾಯಾಧೀಶರು ಮತ್ತು ವಕೀಲರು ಸಾಕ್ಷಿಯಾಗಿದ್ದಾರೆ. ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಜಿ.ಶಿವಳ್ಳಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಎಸ್ ಗಾಣಿಗೇರ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶ್ರೀದೇವಿ ಧರಬಾರೆ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗೌರಮ್ಮ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳಿಗೆ ಬುದ್ದಿ ಮಾತು ಹೇಳುವ ಮೂಲಕ ಶುಭ ಹಾರೈಸಿದ್ದಾರೆ.
ಗೆದ್ದವ ಸೋತ, ಸೋತವ ಸತ್ತ
ಕೆಲವು ಸಂದರ್ಭದಲ್ಲಿ ಸಿಟ್ಟಿನ ಭರದಲ್ಲಿ ದೂರವಾಗಬೇಕು ಎಂದು ನಿರ್ಧರಿಸಿದ್ದೆವು. ಆದರೆ ಮುಂದಿನ ಜೀವನ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಗಂಡ ಹೆಂಡತಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಈಗ ನಾವು ಮತ್ತೆ ಒಂದಾಗಿದ್ದೇವೆ. ಮುಂದೆಯೂ ಹೀಗೆ ಇರುತ್ತೇವೆ ಎಂದು ದಂಪತಿಗಳು ತಿಳಿಸಿದ್ದಾರೆ. ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಗೆದ್ದವ ಸೋತ, ಸೋತವ ಸತ್ತ ಎಂಬ ಗಾದೆ ಜನಜನಿತ. ಆದರೆ, ಈ ಲೋಕ್ ಅದಾಲತ್ ನಲ್ಲಿ ಒಂದಾದ ಈ ಜೋಡಿ ಜೀವನದಲ್ಲಿ ಮತ್ತೆ ಗೆದ್ದಿದ್ದಾರೆ ಎಂದರೆ ತಪ್ಪಾಗದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ