ಧಾರವಾಡ (ನವೆಂಬರ್ 21); ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಆರಂಭಿಕ ಹಂತದಲ್ಲೇ ಕೌನ್ಸಿಲಿಂಗ್ ಮಾಡುವಂತಾದರೆ ಬೇಗನೆ ಗುಣಮುಖರಾಗುತ್ತಾರೆ. ಈ ಬಗ್ಗೆ ವೈದ್ಯರು ಜನರಲ್ಲಿ ಅರಿವು ಮೂಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಬೇಂದ್ರೆ ಕಟ್ಟಡ ಉದ್ಘಾಟನೆ, ಸಿಟಿ ಸ್ಕ್ಯಾನ್ ಯಂತ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ಸು ಸರಿ ಇದ್ದರೆ ಆರೋಗ್ಯ ಉತ್ತಮವಾಗಿರುತ್ತದೆ. ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಬೇಕು. ಮಾನಸಿಕ ರೋಗ ಇರುವವರು ಆರಂಭಿಕ ಹಂತದಲ್ಲೇ ಕೌನ್ಸಿಲಿಂಗ್ ಗೆ ಬಂದರೆ ಬೇಗನೆ ಗುಣಮುಖರಾಗುತ್ತಾರೆ. ಈ ಬಗ್ಗೆ ಡಿಮ್ಹಾನ್ಸ್ ಸಿಬ್ಬಂದಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ದಕ್ಷಿಣ ಕರ್ನಾಟಕಕ್ಕೆ ನಿಮ್ಹಾನ್ಸ್ ನಂತೆ ಉತ್ತರ ಕರ್ನಾಟಕಕ್ಕೆ ಡಿಮ್ಹಾನ್ಸ್ ಸಂಸ್ಥೆ ಇದೆ. ನಿಮ್ಹಾನ್ಸ್ ಮತ್ತು ಡಿಮ್ಹಾನ್ಸ್ ಎರಡೂ ಸಹಭಾಗಿತ್ವದಲ್ಲಿ ನಡೆಯುವಂತಾದರೆ ಅನುಕೂಲವಾಗುತ್ತದೆ ಎಂದರು.
ಕೋವಿಡ್ ಬಂದವರಿಗೆ ಭಯದಿಂದ ಮಾನಸಿಕ ಸಮಸ್ಯೆ ಉಂಟಾಗುತ್ತದೆ. ಅಂತಹವರಿಗೆ ಕೌನ್ಸಿಲಿಂಗ್ ಮಾಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಜಗತ್ತಿನಲ್ಲಿ ಯಾವುದೇ ದೇಶದ ಸರ್ಕಾರ ನೀಡದಷ್ಟು ಒತ್ತನ್ನು ಕೇಂದ್ರ ಸರ್ಕಾರ ನೀಡಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಜನರು ಸೌಲಭ್ಯ ಪಡೆದಿದ್ದಾರೆ. ಈ ಯೋಜನೆಯಡಿ, ಕ್ಲೇಮುಗಳ ಸಂಖ್ಯೆಯನ್ನು ಹೆಚ್ಚಿಸಲು ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇದನ್ನು ಓದಿ: ಜನವರಿಯಿಂದ ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲ ಪರೀಕ್ಷೆ ಉಚಿತ; ಆರೋಗ್ಯ ಸಚಿವ ಕೆ.ಸುಧಾಕರ್
ಉತ್ತರ ಕರ್ನಾಟಕ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಹಳ ಕಡಿಮೆ ಸಂಖ್ಯೆಯಲ್ಲಿವೆ. ಜನಸಂಖ್ಯೆಗೆ ತಕ್ಕಂತೆ ಹೊಸ ಕೇಂದ್ರಗಳನ್ನು ನಿರ್ಮಿಸಲಾಗುವುದು. ವೈದ್ಯರು ಹಳ್ಳಿಗಳಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ನಿಯಮಗಳಲ್ಲಿ ಬದಲಾವಣೆ ತರಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಮೂರೇ ವರ್ಷಕ್ಕೆ ಬಡ್ತಿ ಸಿಗುವಂತೆ ಹಾಗೂ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ