ನವದೆಹಲಿ: ಕೊರೋನಾ ಸೋಂಕಿನಿಂದಾಗಿ ಸಚಿವ ಸುರೇಶ್ ಅಂಗಡಿ ಸಾವನ್ನಪ್ಪಿದ್ದಾರೆ. ಸೋಂಕಿಗೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾದೆ ದೆಹಲಿಯ ಏಮ್ಸ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂರು ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದೆಹಲಿಯಲ್ಲಿ ಮೃತರಾಗಿರುವ ಸಚಿವರ ದೇಹವನ್ನು ಬೆಳಗಾವಿಗೆ ತರಲು ಈಗ ಕೊರೋನಾ ನಿಯಮಗಳು ಅಡ್ಡಿಯಾಗಿದೆ. ಸೋಂಕಿತರು ಎಲ್ಲಿ ಸಾವನ್ನಪ್ಪುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ನಿಯಮವಿರುವ ಹಿನ್ನಲೆ ಅವರ ಶರೀರವನ್ನು ಹುಟ್ಟೂರಿಗೆ ಸಾಗಿಸಲು ಅಡ್ಡಿಯಾಗಿದೆ. ಇದರಿಂದ ಕುಟುಂಬಸ್ಥರಿಗೆ ದಿಕ್ಕು ತೋಚದಂತೆ ಆಗಿದೆ. ಬೆಳಗಾವಿಗೆ ಪಾರ್ಥೀವ ಶರೀರ ಕೊಂಡೊಯ್ಯಲು ಕುಟುಂಬ ವರ್ಗ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಕೋರಿ ಕೊಂಡಿದೆ. ಆದರೆ, ಕೊರೋನಾ ಸೋಂಕಿನ ಕುರಿತು ನಿಬಂಧನೆಗಳು ಇದಕ್ಕೆ ಅವಕಾಶ ನೀಡಿಲ್ಲ.
ಕೊರೋನಾ ಸೋಂಕಿಗೆ ಒಳಗಾದವರು ಹೊರ ರಾಜ್ಯಗಳಲ್ಲಿ ಮೃತರಾದರೆ, ಅವರ ಶರೀರವನ್ನು ರಾಜ್ಯಕ್ಕೆ ತರುವಂತೆ ಇಲ್ಲ. ಎಲ್ಲಿ ಮೃತರಾಗುತ್ತಾರೋ ಅಲ್ಲಿಯೇ ಅಂತಿಮ ಸಂಸ್ಕಾರ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಕೂಡ ಎಲ್ಲಿ ತೀರಿಕೊಂಡಿರುತ್ತಾರೋ ಅದೇ ಸ್ಥಳದಲ್ಲೆ ಮೃತರ ಅಂತ್ಯಕ್ರಿಯೆ ನಡೆಸಬೇಕು.
ಈ ಹಿನ್ನಲೆ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯವುದಕ್ಕೆ ಏಮ್ಸ್ ವೈದ್ಯರು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಈ ಕುರಿತು ಪಿಯೂಷ್ ಗೋಯೆಲ್ ಕೂಡ ನಿಬಂಧನೆ ಸಡಿಸಲು ಸಾಧ್ಯವಾಗುವುತ್ತಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಈ ಕುರಿತು ಕುಟುಂಬ ವರ್ಗ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಇದು ಫಲಪ್ರದವಾಗದ ಹಿನ್ನಲೆ ಅವರ ಅಂತ್ಯಸಂಸ್ಕಾರ ದೆಹಲಿಯಲ್ಲೇ ನಡೆಯಲಿದೆ. ದೆಹಲಿ ಲೋಧಿ ಎಸ್ಟೇಟ್ನಲ್ಲಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಸಂಬಂಧಿಕರಿಗೆ ದೆಹಲಿಗೆ ಬರಲು ಸೂಚಿಸಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ ಕೂಡ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು. ರಾಜ್ಯದ ಇಬ್ಬರು ಬಿಜೆಪಿ ನಾಯಕರು ಸೋಂಕಿನಿಂದ ಅಸುನೀಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ