ಬೆಂಗಳೂರು (ನವೆಂಬರ್ 06); ಕೊರೋನಾ ಮಹಾಮಾರಿಗೆ ತುತ್ತಾದ ಹಲವರು ಉಸಿರಾಟದ ತೊಂದರೆಯಿಂದಲೇ ಮೃತಪಟ್ಟಿದ್ದಾರೆ. ಕೊರೋನಾ ಬಾದಿತರು ಶ್ವಾಸಕೋಶ ಸಂಬಂಧಿ ಖಾಯಿಲೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ. ಈ ನಡುವೆ ದೀಪಾವಳಿ ಹಬ್ಬವೂ ಹತ್ತಿರವಾಗುತ್ತಿದೆ. ಪಟಾಕಿ ಪ್ರಿಯರು ಹಾಗೂ ಮಾರಾಟಗಾರರು ಹಬ್ಬಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಅಧಿಕವಾಗಿ ಕೊರೋನಾ ಸೋಂಕಿತರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂಬ ಕಾರಣಕ್ಕೆ ಮಹತ್ವದ ನಿರ್ಧಾರಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನರಲ್ಲಿ ಮನವಿ ಮಾಡಿದ್ದು ಈ ವರ್ಷ ಪಟಾಕಿ ಸಿಡಿಸದೆ ಭಕ್ತಿಪೂರ್ವಕವಾಗಿ ಹಬ್ಬವನ್ನು ಆಚರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧ ಸಂಬಂಧ ವಿವರಣೆ ಕೋರಿ ಎನ್ಜಿಟಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೆ ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವುದನ್ನು ಸರ್ಕಾರ ನಿಷೇಧಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗದ ಸರ್ಕಾರ, ಪಟಾಕಿ ಸಿಡಿಸದಂತೆ ಜನರಲ್ಲಿ ಮನವಿ ಮಾಡುವ ಮೂಲಕ ಅಥವಾ ಹಸಿರು ಪಟಾಕಿಸಿ ಎಂದು ಸಲಹೆ ನೀಡುವ ಮೂಲಕ ಸಾಂಪ್ರದಾಯಿಕ ಆಚರಣೆಯ ಬಗ್ಗೆ ಮೃಧುತ್ವ ಧೋರಣೆಯನ್ನು ತಳೆಯಲು ಮುಂದಾಗಿದೆ.
ದೀಪಾವಳಿ ಹತ್ತಿರವಾಗುತ್ತಿರುವ ವಾಯುಮಾಲಿನ್ಯ ಹೆಚ್ಚಾಗುವ ಹಿನ್ನೆಲೆ ಪಟಾಕಿ ನಿಷೇದಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ), ವಾಯುಮಾಲಿನ್ಯ ಹೆಚ್ಚಾಗಿರುವ, ಕರ್ನಾಟಕವೂ ಸೇರಿದಂತೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿತ್ತು.
ದೀಪಾವಳಿ ಹೊಸ್ತಿಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವ ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಸರ್ಕಾರ ಆಘಾತ ನೀಡಿದೆ. ಆದರೆ ಕಳೆದ ಕೆಲ ದಿನಗಳಿಂದಲೂ ಈ ಕುರಿತು ಚರ್ಚೆ ನಡೆಸಲಾಗುತ್ತಿತ್ತು. ಆರೋಗ್ಯ ಸಚಿವ ಡಾ.ಸುಧಾಕರ್ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸುವ ಕುರಿತು ತಜ್ಞರ ಸಮಿತಿ ನೇಮಿಸಿರುವುದಾಗಿ ತಿಳಿಸಿದ್ದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಿರುವುದಾಗಿ ತಿಳಿಸಿದ್ದರು. ಆದರೆ, ಅದರ ಬೆನ್ನಿಗೆ ತದ್ವಿರುದ್ದವಾದ ಆದೇಶವನ್ನು ಹೊರಡಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಜೊತೆಗೆ ದೀಪಾವಳಿ ಹಬ್ಬವೂ ಇರುವ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸುವಂತೆ ಕೋರಿ ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್ವರ್ಕ್ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.
ಇದನ್ನೂ ಓದಿ : ರಾಜಿ ರಾಜಕೀಯದಿಂದ ಹಾನಿಯಾಗಿರುವ ಬಂಗಾಳದ ಧಾರ್ಮಿಕ ಸಂಪ್ರದಾಯವನ್ನು ಮರುಸ್ಥಾಪಿಸಬೇಕಿದೆ; ಅಮಿತ್ ಶಾ
ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ನವೆಂಬರ್ 7 ರಿಂದ 30 ರವರೆಗೆ ಪಟಾಕಿ ಬಳಕೆಯನ್ನು ನಿಷೇಧಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನವೆಂಬರ್ 2 ರಂದು ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ (ಎಂಒಇಎಫ್) ನೋಟಿಸ್ ನೀಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ