ಧಾರವಾಡ: ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Assembly Election 2023) ಹವಾ ಜೋರಾಗಿದೆ. ಒಂದಷ್ಟು ಜನ ಅಭ್ಯರ್ಥಿಗಳಾಗಿ ಬಲಾಬಲಕ್ಕೆ ಮುಂದಾಗಿದ್ದರೆ, ಇನ್ನೂ ಕೆಲವು ಕಡೆ ಯಾರು ಅಭ್ಯರ್ಥಿ ಎನ್ನುವುದೇ ಫೈನಲ್ ಆಗಿಲ್ಲ. ಆದರೂ ಆಕಾಂಕ್ಷಿಗಳಂತೂ ನಾ ಮುಂದು, ತಾ ಮುಂದು ಎಂದು ಜಿದ್ದಿಗೆ ಬಿದ್ದು ಮತದಾರರನ್ನು (Voters) ಸೆಳೆಯಲು ಉಡುಗೊರೆಗಳ (Gift Politics) ಮಹಾಪೂರವನ್ನೇ ಹರಿಸುತ್ತಿದ್ದಾರೆ. ಧಾರವಾಡದಲ್ಲೀಗ ಬೇರೆಯದ್ದೇ ಸ್ವರೂಪದ ಉಡುಗೊರೆಯ ಹವಾ ಶುರುವಾಗಿದೆ. ಧಾರವಾಡದ ಹುಬ್ಬಳ್ಳಿ-ಧಾರವಾಡ ಪಶ್ಚಿಮ (Hubball-Dharwad West) ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ನೂರಾರು ಜನರನ್ನು ಒಂದು ದಿನದ ಪ್ರವಾಸಕ್ಕೆ (Tour) ಕಳುಹಿಸುವ ಮೂಲಕ ತಮ್ಮ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ತಂತ್ರ ಮಾಡಿದ್ದಾರೆ.
ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿರುವ ದೀಪಕ್ ಚಿಂಚೋರೆ (Deepak Chinchore) ಪ್ರವಾಸ ಭಾಗ್ಯ ಕಲ್ಪಿಸಿದ್ದಾರೆ. ಜನರು ಸಹ ವಿವಿಧ ಮಹಿಳಾ ಮಂಡಳಿಗಳ ಅಡಿಯಲ್ಲಿ ಈ ಒಂದು ದಿನದ ಪ್ರವಾಸಕ್ಕೆ ಹೋಗಿ ಬರುತ್ತಿದ್ದು, ಬಸ್ ವ್ಯವಸ್ಥೆಯ ಜೊತೆಗೆ ಹೋಗಿ ಬರುವರೆಗೂ ಊಟೋಪಚಾರವನ್ನು ಸಹ ನೋಡಿಕೊಳ್ಳುತ್ತಿದ್ದಾರೆ.
ಪುಣ್ಯಕ್ಷೇತ್ರಗಳ ದರ್ಶನ
ದೀಪಕ್ ಚಿಂಚೋರೆ ಈ ರೀತಿ ಪ್ರವಾಸಕ್ಕೆ ಕಳಿಸುತ್ತಿರೋದು ಇದೇ ಮೊದಲೇನೂ ಅಲ್ಲವಂತೆ. ಕಳೆದ ಆರು ತಿಂಗಳಿನಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಪ್ರವಾಸಕ್ಕೆ ಕಳುಹಿಸಿದ್ದಾರೆ. ಬಾದಾಮಿ ಬನಶಂಕರಿ ದೇವಿ ದರ್ಶನ, ಸಿಂಗದೂರು ಚೌಡೇಶ್ವರ ದರ್ಶನ, ಪಂಢರಪುರ ವಿಠ್ಠಲ-ರುಕ್ಮಿಣಿ ದರ್ಶನಕ್ಕೆ ಕಳುಹಿಸಿದ್ದಾರೆ.
ಪ್ರವಾಸ ಭಾಗ್ಯಕ್ಕೆ ದೀಪಕ್ ಚಿಂಚೋರೆ ಸ್ಪಷ್ಟನೆ
ಈ ಪ್ರವಾಸ ಯೋಜನೆಯನ್ನು ಸಮರ್ಥಿಸಿಕೊಂಡಿರೋ ಚಿಂಚೋರೆ, ಹೀಗೆ ಕಳುಹಿಸುತ್ತಿರೋದರ ಹಿಂದೆ ಯಾವುದೇ ರಾಜಕೀಯ ಲಾಭ ಇಲ್ಲ, ತಮ್ಮ ದಿವಗಂತ ಪುತ್ರನ ಹೆಸರಿನಲ್ಲಿ ಸೇವಾ ಟ್ರಸ್ಟ್ ಇದೆ. ಅದರ ಮೂಲಕ ಈಗಾಗಲೇ ನೂರಾರು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿದ್ದೇವೆ. ತರಬೇತಿ ಮುಗಿದ ಮೇಲೆ ಅದೇ ಟ್ರಸ್ಟ್ ಮೂಲಕ ಒಂದು ದಿನದ ಪ್ರವಾಸಕ್ಕೆ ಕಳುಹಿಸಿದ್ದೇನೆ. ಅಲ್ಲದೇ ಎಷ್ಟೋ ಜನರಿಗೆ ಕುಕ್ಕರ್ ಸಹ ನಾನು ಈಗಾಗಲೇ ಹಂಚಿದ್ದೇನೆ. ಆರು ತಿಂಗಳ ಹಿಂದಿನಿಂದಲೇ ಮಾಡುತ್ತಿದ್ದು, ಇದೊಂದು ಸೇವಾ ಕಾರ್ಯ ಎಂದು ಹೇಳುತ್ತಿದ್ದಾರೆ.
ಮತದಾರರನ್ನು ಸೆಳೆಯುವ ಪ್ರಯತ್ನನಾ?
ಸದ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ರಾಜಕೀಯ ಮಯಖಂಡರು ಹೊಸ ಪ್ಲಾನ್ ಮಾಡುತ್ತಿದ್ದಾರೆ. ಅದರಂತೆ ಪ್ರವಾಸಕ್ಕೆ ಹೊರಟಿರುವ ಪ್ರತಿಯೊಂದು ಬಸ್ ಮೇಲೆಯೂ ಹು-ಧಾ ಪಶ್ಚಿಮ ಕ್ಷೇತ್ರದ ಸೇವಾಕಾಂಕ್ಷಿ ಅಂತಾ ದೀಪಕ್ ಚಿಂಚೋರೆ ಇರುವ ಫೋಟೋ ಇರೋ ಪೋಸ್ಟರ್ ಗಳು ಎದ್ದು ಕಾಣುತ್ತಿವೆ.
ಅಲ್ಲದೇ ಈ ಕೇತ್ರವನ್ನೇ ಮುಖ್ಯವಾಗಿಟ್ಟುಕೊಂಡು ಈ ಎಲ್ಲ ಸೇವಾ ಕಾರ್ಯಗಳು ನಡೆಯುತ್ತಿದ್ದು, ಚಿಂಚೋರೆ ಈಗಿನಿಂದಲೇ ತಮ್ಮ ಕ್ಷೇತ್ರದ ಮತದಾರರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.
‘ದಳಪತಿ’ಗಳ ಶಕ್ತಿಪ್ರದರ್ಶನ
ಹಾಸನದ ಅರಸೀಕೆರೆಯಲ್ಲಿ ಜೆಡಿಎಸ್ ಶಕ್ತಿಪ್ರದರ್ಶನ ಮಾಡಿದೆ. ನಿರೀಕ್ಷೆಯಂತೆಯೇ ಹಾಲಿ ಶಾಸಕ ಶಿವಲಿಂಗೇಗೌಡ ಸಮಾವೇಶಕ್ಕೆ ಬರಲಿಲ್ಲ. ಆದ್ರೂ ದಳಪತಿಗಳು ತೆರೆದ ವಾಹನದಲ್ಲಿ ಪಂಚರತ್ನ ಯಾತ್ರೆಯ ಬೃಹತ್ ಮೆರವಣಿಗೆ ನಡೆಸಿದರು.
ಎಚ್ಡಿಕೆ ಎಡಬಲಕ್ಕೆ ಪ್ರಜ್ವಲ್ ಹಾಗೂ ಸೂರಜ್ ನಿಂತು ಸಾಥ್ ಕೊಟ್ರು. ಹೆಚ್.ಡಿ ರೇವಣ್ಣ ಕೂಡಾ ಮೆರವಣಿಗೆಯಲ್ಲಿ ಭಾಗಿಯಾದ್ರು. ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಘೋಷಣೆ ಕೂಗಿದ್ರು. ಜನರು ಕುಮಾರಸ್ವಾಮಿಗೆ ಬೃಹತ್ ಗಾತ್ರದ ತೆಂಗಿನಗರಿ ಹಾರ ಹಾಕಿದ್ರು.
ಇದನ್ನೂ ಓದಿ: Murugesh Nirani: ಇದು ನಮ್ಗ ಬ್ಯಾಡ್ರಿ, ವಾಪಸ್ ತೊಗೊಂಡು ಹೋಗ್ರಿ; ನಿರಾಣಿ ಗಿಫ್ಟ್ ತಿರಸ್ಕರಿಸಿದ ಮಹಿಳೆ
ಯಾರಿಗೆ ಅರಸೀಕೆರೆ ಟಿಕೆಟ್?
ಇದೇ ಸಂದರ್ಭದಲ್ಲಿ ಮಾತಾಡಿದ ಕುಮಾರಸ್ವಾಮಿ, ಇಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರಂತೆ. ಅದನ್ನು ನಮ್ಮ ಶಾಸ್ತ್ರಿ ರೇವಣ್ಣ ನಂಗೆ ಈಗ ಹೇಳಿದ್ದಾರೆ. ಹಾಗೆ ನೋಡುವುದಾದರೆ ಅಶೋಕ್ಗೆ ಲಕ್ ಹೊಡೆಯುವಂತೆ ಕಾಣುತ್ತಿದೆ ಎನ್ನುವ ಮೂಲಕ, ಕುರುಬ ಸಮುದಾಯದ ಅಶೋಕ್ಗೆ ಜೆಡಿಎಸ್ ಟಿಕೆಟ್ ನೀಡುವುದಾಗಿ ಕುಮಾರಸ್ವಾಮಿ ಸುಳಿವು ಕೊಟ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ