ಮೈಸೂರು (ನ. 27): ರೋಹಿಣಿ ಸಿಂಧೂರಿ ಐಎಎಸ್ ಪಾಸ್ ಮಾಡಿದ್ದಾರಾ? ಇಲ್ಲವಾ? ಎಂಬುದೇ ಅನುಮಾನ. ಅವರು ನಿಜವಾಗಿಯೂ ಸ್ವಂತ ಪರಿಶ್ರಮದಿಂದ ಪಾಸ್ ಆಗಿದ್ದಾರಾ? ಅಥವಾ ಪ್ರಭಾವ ಬಳಸಿ ಪಾಸ್ ಆಗಿದ್ದಾರಾ? ಎಂಬುದು ಖಚಿತವಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾಂಗ್ರೆಸ್ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಜಂಟಿ ಸುದ್ದಿಗೋಷ್ಠಿಯ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೋಹಿಣಿ ಸಿಂಧೂರಿ ಪ್ರಭಾವ ಬಳಸಿ ಪಾಸ್ ಆಗಿದ್ದಾರಾ? ಎಂಬ ಅನುಮಾನವಿದೆ. ಅವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುವುದು ಬಿಟ್ಟು ಜಿಲ್ಲಾಧಿಕಾರಿಯಂತೆ ನಡೆದುಕೊಳ್ಳಲಿ. ಇದನ್ನು ವಿಧಾನ ಪರಿಷತ್ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಇದನ್ನು ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಶಾಸಕ ಹೆಚ್ಪಿ ಮಂಜುನಾಥ್ ಅವರ ವಿರುದ್ಧ ವೈಯಕ್ತಿಕವಾಗಿ ದಾಳಿ ನಡೆಸುತ್ತಿರುವುದಕ್ಕೆ ಇನ್ನು ಎರಡು ದಿನದಲ್ಲಿ ಅವರು ಕ್ಷಮೆ ಕೇಳಬೇಕು. ಅಥವಾ ಅವರು ಶಾಸಕ ಮಂಜುನಾಥ್ ಅವರಿಗೆ ಬರೆದ ಪತ್ರ ಹೇಗೆ ಹೊರಗೆ ಬಂತು? ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ರಘು ಆಚಾರ್ ಸವಾಲು ಹಾಕಿದ್ದಾರೆ.
ಡಿ. 7ರಂದು ನಾನು ಹಕ್ಕು ಚ್ಯುತಿ ಮಂಡಿಸುತ್ತೇನೆ. ಅವರು ಬಂದು ಉತ್ತರ ಕೊಡಲಿ. ಸುಮ್ಮನೆ ಶೋ ಮಾಡಿಕೊಂಡು ರಥ ಎಳೆದುಕೊಂಡು ಓಡಾಡುವುದಲ್ಲ. ಕೋವಿಡ್ ಬಿಕ್ಕಟ್ಟನ್ನು ನೀವು ಒಬ್ಬರೇ ನಿರ್ವಹಣೆ ಮಾಡುತ್ತಿಲ್ಲ. ನೀವು ಅದರ ಒಂದು ಭಾಗ ಅಷ್ಟೇ. ಈ ತರದವರು ಡಿಸಿ ಆದರೆ ದೇವರೇ ಕಾಪಾಡಬೇಕು ಎಂದು ಡಿಸಿ ವಿರುದ್ದ ಪರಿಷತ್ ಸದಸ್ಯ ರಘು ಆಚಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿಎಂ ಬೆಂಬಲವಿದೆಯೆಂಬ ದುರಹಂಕಾರ ಬೇಡ, ನೀವು ಸರ್ವಾಧಿಕಾರಿಯಲ್ಲ; ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಮಂಜುನಾಥ್ ಕಿಡಿ
ರಘು ಆಚಾರ್ ಜೊತೆಗೆ ಸುದ್ದಿಗೋಷ್ಠಿ ನಡೆಸಿರುವ ಹುಣಸೂರು ಕಾಂಗ್ರೆಸ್ ಶಾಸಕ ಹೆಚ್ಪಿ ಮಂಜುನಾಥ್, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಹಿಟ್ಲರಿಸಂ ನೀತಿಯನ್ನು ನಾವು ಖಂಡಿಸುತ್ತೇವೆ. ಡಿಸಿಯೊಬ್ಬರು ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ, ಕಾನೂನು ಮೀರಿ ವರ್ತಿಸಿದ್ದಾರೆ. ಒಬ್ಬ ಅಧಿಕಾರಿಯಾಗಿ ಜನಪ್ರತಿನಿಧಿಗಳ ಜೊತೆ ಹೀಗೆ ನಡೆದುಕೊಳ್ಳುತ್ತಾರಾ? ಎಂದು ಕಿಡಿಕಾರಿದ್ದಾರೆ.
ರೋಹಿಣಿ ಸಿಂಧೂರಿ ನನಗೆ ಬ್ಲಾಕ್ಮೇಲ್ ಮಾಡುವ ರೀತಿಯಲ್ಲಿ ಪತ್ರ ಬರೆದಿದ್ದಾರೆ. ರೋಹಿಣಿ ಸಿಂಧೂರಿಯ ನನಗೆ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಫೈಲ್ಗಳು ನನ್ನ ಬಳಿ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ. ಎರಡು ರಾಜ್ಯದ ಸಿಎಂಗಳು ನಿಮ್ಮ ಮೇಲಿದ್ದಾರಾ? ಅಥವಾ ನಿಮ್ಮ ಕಾಲಿನ ಕೆಳಗಿದ್ದಾರಾ ಗೊತ್ತಿಲ್ಲ. ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸ್ಪಂದನೆ ಹೆಸರಲ್ಲಿ ಡಿಸಿ ಮೆರವಣಿಗೆ ಮಾಡಬಹುದು. ಆದರೆ ಜನರ ಕೆಲಸ ಮಾಡುವುದು ಜನಪ್ರತಿನಿಧಿಗಳೇ. ಸಿಎಂಗಳು ಬೆನ್ನಿಗಿದ್ದಾರೆ ಅಂತ ದುರಂಹಕಾರ ಬೇಡ ಎಂದು ಶಾಸಕ ಹೆಚ್ಪಿ ಮಂಜುನಾಥ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ