ಬೆಂಗಳೂರು (ಡಿ. 10): ಕರ್ನಾಟಕ ವಿಧಾನಸಭಾ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಸದನವನ್ನು ಬಹಿಷ್ಕರಿಸಿ, ಕಾಂಗ್ರೆಸ್ ಶಾಸಕರು ಹೊರ ನಡೆದಿದ್ದಾರೆ. ಬುಧವಾರ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆತುರಾತುರವಾಗಿ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಲಾಗಿದೆ. ಈ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆಯೇ ನಡೆದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ವಿಧಾನಸಭಾ ಅಧಿವೇಶನದ ಕೊನೆಯ ದಿನವಾದ ಇಂದು ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸಿ ಇಂದು ಕಾಂಗ್ರೆಸ್ ಸದನಕ್ಕೆ ಬಹಿಷ್ಕಾರ ಹಾಕಿದೆ. ಈ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಲಾಯಿತು.
ಗೋಹತ್ಯೆ ನಿಷೇಧದ ಬಗ್ಗೆ ಕಾಂಗ್ರೆಸ್ ಶಾಸಕರು ಚರ್ಚೆಗೆ ಬರಬೇಕು. ಹೀಗಾಗಿ ಸದನಕ್ಕೆ ಅವರನ್ನು ಕರೆತರಲು ನಾನು ಪ್ರಯತ್ನ ಮಾಡುತ್ತೇನೆ. ಅವರು ಬಂದ ನಂತರ ಸದನ ನಡೆಸೋಣ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮುಂದೂಡಿದರು. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಇರದ ಹಿನ್ನೆಲೆಯಲ್ಲಿ ಸದನವನ್ನು ಸಂಪ್ರದಾಯ ಬಿಟ್ಟು ನಡೆಸಲು ಸಾಧ್ಯವಿಲ್ಲ ಎಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನ ಮುಂದೂಡಿಕೆ ಮಾಡಲು ನಿರ್ಧರಿಸಿದರು.
ಇದನ್ನೂ ಓದಿ: ಏಕಾಏಕಿ ಸದನದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ; ಇದು ಲಜ್ಜೆಗೆಟ್ಟ ಸರ್ಕಾರ ಎಂದ ಸಿದ್ದರಾಮಯ್ಯ
ಈ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ತರಾತುರಿಯಲ್ಲಿ ಬಿಲ್ ಮಂಡಿಸಬೇಕಾದ ಅನಿವಾರ್ಯತೆ ಇತ್ತು. ಸದನಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡುತ್ತೇನೆ. ವಿಧಾನ ಪರಿಷತ್ ಮುಕ್ತಾಯ ಆಗುವ ಕಾರಣಕ್ಕೆ ಬಿಲ್ ಮಂಡಿಸಿದ್ದೇವೆ. ಬಿಲ್ ಅಂಗೀಕಾರ ಆಗಬೇಕು ಎಂಬ ಕಾರಣಕ್ಕೆ ಮಂಡನೆ ಮಾಡಿದ್ದೇವೆ. ಕದ್ದುಮುಚ್ಚಿ ನಾವು ಮಸೂದೆಯನ್ನು ಮಂಡನೆ ಮಾಡಿಲ್ಲ. ಸರ್ಕಾರಕ್ಕೆ ಬಹುಮತ ಇರುವುದರಿಂದ ಕದ್ದುಮುಚ್ಚಿ ಬಿಲ್ ಮಂಡನೆ ಮಾಡೋ ಅಗತ್ಯವಿಲ್ಲ ಎನ್ನುವ ಮೂಲಕ ಸದನದಲ್ಲಿ ಗೋಹತ್ಯೆ ವಿಧೇಯಕವನ್ನು ಅಂತಿಮ ಕ್ಷಣದಲ್ಲಿ ಮಂಡನೆ ಮಾಡಿದ್ದನ್ನು ಸಚಿವ ಮಾಧುಸ್ವಾಮಿ ಒಪ್ಪಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ