ಮಂಗಳೂರು: ರಾಜ್ಯ ಬಿಜೆಪಿ ಸರ್ಕಾರ (BJP Govt) ಕೊನೆಯ ಉಸಿರೆಳೆಯುತ್ತಿದೆ. ಈಗ ಇವರ ಆಕ್ಸಿಜನ್ ಟಿಪ್ಪು ಸುಲ್ತಾನ್, (Tipu Sultan) ಪಾಕಿಸ್ತಾನ, ಭಯೋತ್ಪಾದನೆ ಮತ್ತು ಎಸ್ಡಿಪಿಐ ವಿಚಾರ ಮಾತ್ರ ಆಗಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ ಖಾದರ್ (UT Khader) ವ್ಯಂಗ್ಯ ಮಾಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಳ್ಳಾಲ ಶಾಸಕ ಯು.ಟಿ ಖಾದರ್, ಇಂತಹ ವಿಚಾರಗಳಿಂದಲೇ ಬಿಜೆಪಿ ಬದುಕುತ್ತಿದೆ. ಟಿಪ್ಪು ಸುಲ್ತಾನ್ ಮತ್ತು ಪಾಕಿಸ್ತಾನ ವಿಚಾರಗಳಿಂದ ಲಾಭ ಪಡೆಯೋದು ಬಿಜೆಪಿ ಎಂದು ಹೇಳಿದರು.
ಕೇಂದ್ರ ಸರ್ಕಾರ ಮೊನ್ನೆಯ ಬಜೆಟ್ನಲ್ಲಿ ನಮ್ಮ ತೆರಿಗೆ ಹಣದಿಂದ ತಾಲಿಬಾನ್ ರಾಷ್ಟ್ರಕ್ಕೆ ಸಾವಿರಾರು ಕೋಟಿ ರೂಪಾಯಿ ನೀಡಿದೆ ಎಂದು ಹೇಳಿದ ಯುಟಿ ಖಾದರ್, ನಮ್ಮ ಸರ್ಕಾರ ಇರುವಾಗ ಭಾರತ ಮತ್ತು ಪಾಕ್ ಮಧ್ಯೆ ಕ್ರಿಕೆಟ್ ಪಂದ್ಯಾಟ ಬೇಡ ಎಂದು ಇವರು ಹೇಳಿದ್ದರು. ಈಗ ಎರಡೂ ತಂಡವನ್ನು ದುಬೈಗೆ ಕರೆದುಕೊಂಡು ಹೋಗಿ ಆಟ ಆಡಿಸುತ್ತಿದ್ದಾರೆ ಎಂದೂ ಕೇಂದ್ರ ಸರ್ಕಾರದ ಇಬ್ಬಗೆಯ ನೀತಿಯ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: BK Hariprasad: ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಭರವಸೆಗಳಲ್ಲಿ ಶೇಕಡ 90ರಷ್ಟು ಅನುಷ್ಠಾನಕ್ಕೆ ಬಂದಿಲ್ಲ: ಬಿಕೆ ಹರಿಪ್ರಸಾದ್
ಕರಾವಳಿ ಜಿಲ್ಲೆಗಳಲ್ಲಿ 12 ಬಿಜೆಪಿ ಶಾಸಕರಿದ್ದರೂ ಅನುದಾನವಿಲ್ಲ
ಇನ್ನು ಕರಾವಳಿ ಜಿಲ್ಲೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ನಲ್ಲಿ ಅನುದಾನ ನೀಡದಿರುವ ಬಗ್ಗೆಯೂ ಮಾತನಾಡಿದ ಶಾಸಕ ಯುಟಿ ಖಾದರ್, ಮೂರು ಬಿಜೆಪಿ ಶಾಸಕರು ಇರುವ ಕೊಡಗು ಭಾಗಕ್ಕೆ ನೂರು ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಆದರೆ ಕರಾವಳಿ ಜಿಲ್ಲೆಗಳಲ್ಲಿ 12 ಬಿಜೆಪಿ ಶಾಸಕರಿದ್ದರೂ ಯಾವುದೇ ವಿಶೇಷ ಅನುದಾನ ತರಲಿಲ್ಲ. ಇತ್ತೀಚೆಗೆ ಕರಾವಳಿಗೆ ಲವ್ ಜಿಹಾದ್ ಸಾಕು, ಅಭಿವೃದ್ಧಿ ಬೇಡ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿರುವ ವಿಷಯ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಿವಿಗೆ ಬಿದ್ದಿರಬೇಕು. ಅದಕ್ಕೆ ಅವರು ಅನುದಾನ ನೀಡಿಲ್ಲ ಎಂದು ವ್ಯಂಗ್ಯವಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮೋಸ ಮಾಡಲಾಗಿದೆ
ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿದ ಯುಟಿ ಖಾದರ್, ಇವರು ಮೀನುಗಾರರನ್ನೂ ಮೋಸ ಮಾಡುತ್ತಿದ್ದಾರೆ. ರಸ್ತೆ, ಶೈಕ್ಷಣಿಕ, ಪಶು ಸಂಗೋಪನೆ ವಿಚಾರದಲ್ಲಿ ಜಿಲ್ಲೆಗೆ ಮೋಸ ಮಾಡಲಾಗಿದೆ. ಪಶು ಸಂಗೋಪನೆಯ ಆಂಬುಲೆನ್ಸ್ ಡ್ರೈವರ್ಗಳನ್ನು ಇನ್ನೂ ನೇಮಕ ಮಾಡಿಲ್ಲ. ರಾಜ್ಯದ ಜನರಿಗೆ ಪ್ರಯೋಜನ ಇಲ್ಲದ ಜನರನ್ನು ಮೂರ್ಖರನ್ನಾಗಿ ಮಾಡುವ ಬಜೆಟ್ ಮಂಡನೆ ಮಾಡಲಾಗಿದೆ. ಕೇಂದ್ರದ ಆರ್ಥಿಕ ಪಾಲು ರಾಜ್ಯಕ್ಕೆ ಬರುತ್ತಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: BK Hariprasad: ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕಂತ ಹೇಳಲಿ: ಬಿ.ಸಿ ಪಾಟೀಲ್ಗೆ ಹರಿಪ್ರಸಾದ್ ಟಾಂಗ್
ವಿದಾಯ ಭಾಷಣದ ಬಜೆಟ್
ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಅನುಷ್ಠಾನ ಯೋಗ್ಯವಲ್ಲದ, ಕಣ್ಕಟ್ಟಿನ ಘೋಷಣೆಗಳ ಪಟ್ಟಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಟೀಕಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು, ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬಸವರಾಜ ಬೊಮ್ಮಾಯಿ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಕಾಟಾಚಾರದ ಘೋಷಣೆಗಳೊಂದಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಎಲ್ಲಿಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ದೂರದೃಷ್ಟಿಯ ಯೋಜನೆಗಳು ಕಾಣಿಸುವುದಿಲ್ಲ. ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವೂ ಬಜೆಟ್ ನಲ್ಲಿ ಇಲ್ಲ. ಸಂಪ್ರದಾಯದಂತೆ ಬಸವರಾಜ ಬೊಮ್ಮಾಯಿ ಅವರು ವಿದಾಯ ಭಾಷಣವನ್ನು ಬಜೆಟ್ ರೂಪದಲ್ಲಿ ಮಂಡಿಸಿದ್ದಾರೆ. ಜನರನ್ನು ವಂಚಿಸುವ ಈ ಪ್ರಯತ್ನದಲ್ಲಿ ಬೊಮ್ಮಾಯಿ ಸರ್ಕಾರ ಮತ್ತು ಬಿಜೆಪಿಗೆ ಯಶಸ್ಸು ದೊರೆಯದು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ