ಬೆಂಗಳೂರು(ಮಾ. 22): ಇಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣ ಹಾಗೂ ಆರು ಮಂದಿ ಸಚಿವರು ನ್ಯಾಯಾಲಯ ಮೊರೆ ಹೋಗಿರುವ ವಿಚಾರ ಪ್ರಸ್ತಾಪಿಸಿ ಚರ್ಚೆಗೆ ಮುಂದಾಗಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ 6 ಹಾಲಿ ಸಚಿವರು ನ್ಯಾಯಾಲಯದ ಮೊರೆ ಹೋಗಿ ಮಾಧ್ಯಮಗಳು ಹಾಗೂ ಇತರರ ವಿರುದ್ಧ ನಿರ್ಬಂಧಕಾಜ್ಞೆಯನ್ನು ತಂದಿರುವ ವಿಚಾರವಾಗಿ ಚರ್ಚೆಗೆ ಅವಕಾಶ ಕೋರಲು ನಿರ್ಧರಿಸಿದ್ದಾರೆ. ಒಂದೊಮ್ಮೆ ಅವಕಾಶ ಲಭಿಸದಿದ್ದಲ್ಲಿ ಧರಣಿಗೆ ಮುಂದಾಗಲು ತೀರ್ಮಾನಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿಗೆ ಸಜ್ಜಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಗಂಭೀರ ಲೋಪಗಳನ್ನು ಎಸಗುತ್ತಿದೆ ಎಂದು ಟೀಕಾಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ಘನತೆಗೆ ಕುಂದು ತರುತ್ತಿರುವ ಸರ್ಕಾರದ ನಿಲುವುಗಳ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿರುವ ಅವರು, ನಿಲುವಳಿ ಸೂಚನೆಯ ನೋಟೀಸ್ ನಲ್ಲಿ ಪ್ರಕರಣದ ಬಗ್ಗೆ ಸುದೀರ್ಘ ವಿವರಣೆ ನೀಡಿದ್ದಾರೆ.
ನ್ಯಾಯಾಲಯದ ಮೊರೆ: ಇತ್ತೀಚಿಗೆ ಲೈಂಗಿಕ ಸಿ.ಡಿ. ಹಾಗೂ ರಾಜ್ಯದ 6 ಜನ ಹಾಲಿ ಸಚಿವರುಗಳು, ಮಾಧ್ಯಮಗಳ ಮೂಲಕ ತಮ್ಮ ಕುರಿತಾದ ಸಿಡಿ ಬಿಡುಗಡೆ ಮಾಡಬಹುದೆಂದು ಆ ಮೂಲಕ ತಮ್ಮ ತೇಜೋವಧೆಯಾಗಬಹುದೆಂದು ನ್ಯಾಯಾಲಯದ ಮೊರೆ ಹೋಗಿ 67 ಮಾಧ್ಯಮಗಳು ಹಾಗೂ ಇತರರ ವಿರುದ್ಧ ನಿರ್ಬಂಧಕಾಜ್ಞೆಯನ್ನು ತಂದಿದ್ದಾರೆ. ಈ ಕಾರಣದಿಂದ ರಾಜ್ಯದ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿದೆ. ಈ ವಿಚಾರವಾಗಿ ಪ್ರತಿದಿನ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ರೀತಿಯ ವರ್ಣರಂಜಿತ ಸುದ್ದಿಗಳು ಪ್ರಸಾರವಾಗುತ್ತಿವೆ. ಈ ವಿದ್ಯಮಾನಗಳಿಂದ ಮಹಿಳೆಯರು, ಮಕ್ಕಳು, ಯುವಕ, ಯುವತಿಯರ ಮೇಲೆ ದುಷ್ಪರಿಣಾಮವಾಗುತ್ತಿದೆ. ಲೈಂಗಿಕ ಸಿ.ಡಿ.ಯ ವಿಚಾರವಾಗಿ ಎಫ್.ಐ.ಆರ್ . ದಾಖಲಾಗುವ ಮೊದಲೇ ಎಸ್ ಐ.ಟಿ. ರಚಿಸಿ ಲೈಂಗಿಕ ಹಗರಣದ ತನಿಖೆಗೆ ಆದೇಶಿಸಲಾಗಿದೆ. ಎಸ್ ಐ ಟಿ ಯ ಇದುವರೆಗಿನ ತನಿಖೆಯನ್ನು ನೋಡಿದರೆ ಸಿ ಡಿ ಪ್ರಚಾರವಾಗಲು ಕಾರಣಕರ್ತರು ಯಾರು ಎಂಬುದನ್ನು ಹುಡುಕುವ ದಿಕ್ಕಿನ ಕಡೆಗೆ ತನಿಖೆ ಸಾಗುತ್ತಿದೆ ಎಂಬ ಅನುಮಾನ ಬರುತ್ತಿದೆ. ಸರ್ಕಾರ ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಗಂಭೀರ ಲೋಪಗಳನ್ನು ಎಸಗುತ್ತಿದೆ. ಸರ್ಕಾರದ ವರ್ತನೆ ಪಾರದರ್ಶಕವಾಗಿಲ್ಲ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಬಾಂಬೆ ಟೀಂನವರ ಕ್ಷೇತ್ರಗಳೀಗ ಭೂಲೋಕದ ಸ್ವರ್ಗಗಳಾಗಿವೆಯೇ?; ಸಿಎಂಗೆ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ
ಸುದೀರ್ಘ ವಿವರಣೆ ನೀಡಿ ನಿಲುವಳಿ ಸೂಚನೆ ಅಡಿ ಚರ್ಚೆಗೆ ಸಿದ್ದರಾಮಯ್ಯ ಅವಕಾಶ ಕೋರಿದ್ದು, ಇಂದು ಸದನದಲ್ಲಿ ಇದೇ ವಿಚಾರದ ಮೇಲೆ ಚರ್ಚೆಗೆ ಅವಕಾಶ ಕೋರಲಿದ್ದಾರೆ. ಇದನ್ನೇ ಸಭೆಯಲ್ಲಿ ಕೂಡ ನಿರ್ಧರಿಸಲಾಗಿದೆ.
ವರದಿ: ಸಂಜಯ್ ಎಂ ಹುಣಸನಹಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ