ಕಲಬುರಗಿ : 2023ರ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಬಿಜೆಪಿಗೆ (BJP) ಸೋಲುವ ಭೀತಿ ಶುರುವಾಗಿದೆ. ಭ್ರಷ್ಟಾಚಾರ, ದುರಾಡಳಿತ, ಜನ ವಿರೋಧಿ ಕೆಲಸ ಮಾಡಿರುವ ಬಿಜೆಪಿ ನಾಯಕರಿಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕಾಗಿ ರಾಜ್ಯಕ್ಕೆ ಪದೇ ಪದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, (Narendra Modi) ಗೃಹ ಸಚಿವ ಅಮೀತ್ ಶಾ (Amit Shah), ಜೆಪಿ ನಡ್ಡಾ (JP Nadda) ಅವರನ್ನು ರಾಜ್ಯಕ್ಕೆ ಕರೆಸಿ ಹಲವು ಕಾರ್ಯಕ್ರಮಗಳನ್ನು, ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ.
ಶನಿವಾರ ಯಾದಗಿರಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ತೆರಳಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಭಯ ಶುರುವಾಗಿದೆ ಎಂದು ಮುಖ್ಯಮಂತ್ರಿ ಸೇರಿ ಇತರ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಭಯ ನಮಗಲ್ಲ ಅವರಿಗೆ ಕಾಡುತ್ತಿದೆ. ಭ್ರಷ್ಟಾಚಾರ, ದುರಾಡಳಿತ ಜನ ವಿರೋಧಿ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. 40 % ಕಮಿಷನ್ ಜಗಜ್ಜಾಹೀರಾಗಿದೆ. ಹಣ ಕೊಡದಿದ್ದರೆ ಸರ್ಕಾರದಲ್ಲಿ ಏನು ಆಗುವುದಿಲ್ಲ ಎಂಬುದನ್ನು ಸಾಮಾನ್ಯ ಜನರೇ ಮಾತನಾಡುತ್ತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸುವುದಕ್ಕೆ ರಾಜ್ಯದ ಜನತೆ ಕಾಯುತ್ತಿದ್ದಾರೆ ಎಂದು ಹೇಳಿದರು.
ಪದೇ ಪದೇ ಮೋದಿ ರಾಜ್ಯಕ್ಕೆ ಬರುತ್ತಿರುವುದೇಕೆ?
ನಮಗೆ ಭಯ ಶುರುವಾಗಿದೆ ಅಂತಾ ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ನಿಜವಾಗಿಯೂ ಹೇಳುವುದಾದರೆ ಕಾಂಗ್ರೆಸ್ ಬಗ್ಗೆ ಅವರಿಗೆ ಭಯ ಕಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆಗೆ ಹೋದಲ್ಲೆಲ್ಲಾ ಜನ ಸ್ವಯಂಪ್ರೇರಿತವಾಗಿ ಸೇರುತ್ತಿದ್ದಾರೆ. ನಾವೆಲ್ಲರೂ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಟ್ಟಾಗಿ ಸೇರಿ ಯಾತ್ರೆಯನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಇದರಿಂದ ಭಯಕ್ಕೆ ಒಳಗಾಗಿರುವ ರಾಜ್ಯ ಬಿಜೆಪಿ ಮುಖಂಡರು ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಪದೇ ಪದೆ ರಾಜ್ಯಕ್ಕೆ ಕರೆಯಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಎಚ್ಡಿಕೆಗೆ ತಿರುಗೇಟು
ಒಂದು ಚಡ್ಡಿ ಕೊಂಡರೆ ಮತ್ತೊಂದು ಚಡ್ಡಿ ಫ್ರೀ ಎನ್ನುವಂತಹ ಭಾಗ್ಯಗಳನ್ನು ಕಾಂಗ್ರೆಸ್ ಘೋಷಿಸುತ್ತಾ ಹೊರಟಿದೆ ಎಂದು ಕಾಂಗ್ರೆಸ್ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ವಿಪಕ್ಷ ನಾಯಕ, ನಾನು ಕುಮಾರಸ್ವಾಮಿ ಬಗ್ಗೆ ಮಾತಾಡಲ್ಲ. ಅವರೇನಿದ್ದರೂ ಬರೀ ಸುಳ್ಳುಗಳನ್ನು ಹೇಳುತ್ತಾರೆ. ಉತ್ತರ ಕರ್ನಾಟಕದಲ್ಲಿ ಅವರಿಗೆ ನೆಲೆ ಇದಿಯೇ? ಗೆದ್ದೆತ್ತಿನ ಬಾಲ ಹಿಡಿಕೊಂಡು ಹೋಗುವವರು ಎಂದು ಕಿಡಿ ಕಾರಿದರು.
ಫೆಬ್ರವರಿ 3ರಿಂದ ಎರಡನೇ ಹಂತದ ಪ್ರಜಾಧ್ವನಿ
ಬಸವಣ್ಣನ ನಾಡಿನಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ನಡೆಸಲಾಗುತ್ತದೆ. ಈ ವೇಳೆ ಬಿಜೆಪಿ ಸರಕಾರದ ಪಾಪದ ಪುರಾಣ ಜನರ ಮುಂದೆ ಇಡಲಾಗುತ್ತದೆ. ಸಮಯದ ಅಭಾವದಿಂದಾಗಿ ಪ್ರತ್ಯೇಕ ಗುಂಪುಗಳ ರಚನೆ ಮಾಡಲಾಗುತ್ತದೆ. ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ, ಜನ ಒಳ್ಳೆ ಉತ್ಸಾಹ ತೋರುತ್ತಿದ್ದಾರೆ. ಆದರೆ ಸಮಯದ ಅಭಾವದಿಂದಾಗಿ ಪ್ರತ್ಯೇಕ ಗುಂಪುಗಳನ್ನು ರಚನೆ ಮಾಡಿಕೊಂಡು ಪ್ರಜಾಧ್ವನಿ ಯಾತ್ರೆಗೆ ಹೋಗುತ್ತಿರುವದಾಗಿ ತಿಳಿಸಿದರು.
ಮೋದಿ ವಿರುದ್ಧ ವಾಗ್ದಾಳಿ
ಯಾದಗಿರಿಯ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರಕಾರ ಜಾರಿಗೆ ತಂದ ಯೋಜನೆ ಉದ್ಘಾಟನೆ ಮಾಡಲು ಮೋದಿ ಅವರನ್ನು ಬಿಜೆಪಿ ಕರೆದುಕೊಂಡು ಬರುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2013 ರಲ್ಲಿ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ತೀರ್ಮಾನ ಮಾಡಿದ್ದೆವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನರಸಿಂಹಯ್ಯ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು,
ವಾಸಿಸುವನೇ ಮನೆ ಒಡೆಯ ಎಂಬ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿತ್ತು. ಬಿಜೆಪಿಯವರು ನಾವೇ ಮಾಡಿರುವುದೆಂದು ಹೇಳಿಕೊಳ್ಳುತ್ತಿದ್ದಾರೆ, ನಾವು ಮಾಡಿದ ಅಡುಗೆಯನ್ನುಅವರು ಊಟ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಬಿಜೆಪಿಗೆ ಮೋದಿನೆ ಬಂಡವಾಳ
ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಅಲಿ‘ಬಾಬಾ ಮತ್ತು 40 ಕಳ್ಳರು ಇದ್ದಾರೆ. ಕಾಂಗ್ರೆಸ್ ಸರಕಾರ ಮಾಡಿದ ಕೆಲಸವನ್ನು ಮೋದಿ, ಅಮೀತ್ ಷಾ ಮೂಲಕ ಉದ್ಘಾಟನೆ ಮಾಡಿಸುತ್ತಿದ್ದಾರೆ. ರಾಜ್ಯದ ಜನ ಬೊಮ್ಮಾಯಿ ಸರಕಾರದ ನಾಯಕರ ಮುಖ ನೋಡಲು ಜನ ಬಯಸುವುದಿಲ್ಲ, ರಾಜ್ಯದಲ್ಲಿ ಬಿಜೆಪಿ ಸರಕಾರ ತೊಲಗಿಸಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತರಲು ಜನ ಮುಂದಾಗಿದ್ದಾರೆ. ಬಿಜೆಪಿ ಅಧಿಕಾರದಿಂದ ಬೇಸತ್ತಿರುವ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ