ಬೆಂಗಳೂರು: ಮತ್ತೆ ಕರ್ನಾಟಕ ಬಂದ್ (Karnataka bandh) ಆಗುತ್ತಾ? ಇದೇ ಮಾರ್ಚ್ 9, ಗುರುವಾರದಂದು ಇಡೀ ರಾಜ್ಯವೇ ಸ್ತಬ್ಧವಾಗುತ್ತಾ? ಆ ದಿನ ಏನೇನು ಇರುತ್ತೆ? ಏನೇನು ಇರೋದಿಲ್ಲ? ಬಸ್, ರೈಲು, ಆಟೋ, ಕ್ಯಾಬ್ ಓಡಾಡುತ್ತಾ? ಮೆಟ್ರೋ ಓಡುತ್ತಾ? ಹೋಟೆಲ್, ಮಾಲ್, ಥಿಯೇಟರ್ ಓಪನ್ ಇರುತ್ತಾ? ಹಾಲು, ದಿನಸಿ ಸಾಮಗ್ರಿ, ತರಕಾರಿ, ಪೇಪರ್, ಮೆಡಿಸಿನ್ ಸಿಗುತ್ತಾ? ಸಿಗೋದಿಲ್ವಾ? ಇಂಥದ್ದೊಂದು ಚರ್ಚೆ ಮತ್ತೆ ಶುರುವಾಗಿದೆ. ಇದಕ್ಕೆ ಕಾರಣ ಮಾರ್ಚ್ 9ರಂದು ಕರ್ನಾಟಕ ಬಂದ್ ಎಂಬ ವಿಚಾರ! ಹೌದು, ಇದೇ ಮಾರ್ಚ್ 9, ಗುರುವಾರದಂದು ಕರ್ನಾಟಕ ಬಂದ್ಗೆ ರಾಜ್ಯ ಕಾಂಗ್ರೆಸ್ (Karnataka Congress) ಕರೆಕೊಟ್ಟಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ (State BJP Government) ಭ್ರಷ್ಟಾಚಾರದಲ್ಲಿ ಮುಳುಗಿದೆ, ಅಸಮರ್ಪಕ ಆಡಳಿತ ನೀಡುತ್ತಿದೆ ಅಂತ ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPPCC President DK Shivakumar) ಇದೇ ಮಾರ್ಚ್ 9ರಂದು ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದಾರೆ.
ಮಾರ್ಚ್ 9ರಂದು ಕರ್ನಾಟಕ ಬಂದ್ಗೆ ಕಾಂಗ್ರೆಸ್ ಕರೆ
ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಸಮರ ಸಾರಿರುವ ರಾಜ್ಯ ಕಾಂಗ್ರೆಸ್, ಇದೇ ಮಾರ್ಚ್ 9, ಗುರುವಾರದಂದು ಕರ್ನಾಟಕ ಬಂದ್ಗೆ ಕರೆ ಕೊಟ್ಟಿದೆ. ಈ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಚಾರ, ಹಗರಣಗಳಲ್ಲೇ ಮುಳುಗಿದೆ ಅಂತ ಆರೋಪಿಸಿರುವ ಅವರು, ಸರ್ಕಾರದ ವಿರುದ್ಧ ಕರ್ನಾಟಕ ಬಂದ್ಗೆ ಕರೆ ನೀಡಿದ್ದಾಗಿ ತಿಳಿಸಿದ್ದಾರೆ.
ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಹೋರಾಟ
ಕೋಟಿ ಕೋಟಿ ಲಂಚದ ಹಣದೊಂದಿಗೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪನ ಪುತ್ರ ಮಾಡಾಳು ಪ್ರಶಾಂತ್ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಹಗರಣದಲ್ಲಿ ಎ1 ಆರೋಪಿಯಾದ ಮಾಡಾಳು ವಿರೂಪಾಕ್ಷಪ್ಪ ಎಸ್ಕೇಪ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಬಂದ್ ಮಾಡುವುದಾಗಿ ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ: Madal Virupakshappa: ಎಫ್ಐಆರ್ ದಾಖಲಾಗಿ 3 ದಿನವಾದ್ರೂ ಬಿಜೆಪಿ ಶಾಸಕ ನಾಪತ್ತೆ; 350 ಕೋಟಿ ಡೀಲ್ ಆರೋಪ
ಹೇಗಿರಲಿದೆ ಕರ್ನಾಟಕ ಬಂದ್?
ಮಾರ್ಚ್ 9 ರಂದು ಗುರುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 11 ಗಂಟೆವರೆಗೆ ಕರ್ನಾಟಕ ಬಂದ್ ಆಚರಿಸಲು ಕಾಂಗ್ರೆಸ್ ಕರೆ ನೀಡಿದೆ. ಅಂದು ರಾಜ್ಯದ ಎಲ್ಲಾ ವ್ಯಾಪರಿಗಳು ಬಂದ್ಗೆ ಬೆಂಬಲ ನೀಡುವಂತೆ ಡಿಕೆ ಶಿವಕುಮಾರ್ ಕೋರಿದ್ದಾರೆ. ಆದರೆ 'ಬಂದ್ ವೇಳೆ ಯಾರಿಗೂ ತೊಂದರೆ ಆಗಬಾರದು ಅಂತ ಡಿಕೆಶಿ ಹೇಳಿದ್ದಾರೆ. ಯಾವುದೇ ಶಾಲೆ, ಕಾಲೇಜು ಆಸ್ಪತ್ರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಮಾಡಬಾರದು. ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತಮಾಡಲು ನಿಮ್ಮ ಸಹಕಾರ ಬೇಕು. ಅದಕ್ಕಾಗಿ ಎಲ್ಲ ಸಂಘ, ಸಂಸ್ಥೆಗಳು ಸಹಕಾರ ಕೊಡಬೇಕು ಅಂತ ಡಿಕೆಶಿ ತುಮಕೂರಿನಲ್ಲಿ ಇಂದು ಮನವಿ ಮಾಡಿದ್ರು.
ಕಾಂಗ್ರೆಸ್ನಿಂದ ಪ್ರಕಟಣೆ
ಕರ್ನಾಟಕ ಬಂದ್ ಕುರಿತಂತೆ ರಾಜ್ಯ ಕಾಂಗ್ರೆಸ್ ಘಟಕ ಪ್ರಕಟಣೆ ಹೊರಡಿಸಿದೆ. ಕಾಂಗ್ರೆಸ್ ಪಕ್ಷ ರಾಜ್ಯದ ಪ್ರತಿ ನಗರದಲ್ಲಿ ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ ನಡೆಸಲಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕನ್ನಡಿಗರು ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಪಣ ತೊಟ್ಟಿದ್ದಾರೆ. ನಮ್ಮ ಬೇಡಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ