ಬೆಂಗಳೂರು: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಬೆಳಗಾವಿಗೆ (Belagavi) ಆಗಮಿಸುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ಪ್ರಥಮ ಪಿಯು ಪರೀಕ್ಷೆಯನ್ನು ಮುಂದೂಡಿಕೆ (Exam Postponed) ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ (PM Modi Program) ಆಗಮಿಸುವಂತೆ ಸೂಚಿಸಲಾಗಿದೆ. ಪರೀಕ್ಷೆ ಮುಂದೂಡಿಕೆ ಮಾಡಿ ರಾಜಕೀಯ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಕಾಂಗ್ರೆಸ್ (Congress) ಖಂಡಿಸಿದೆ. ಸಾಲು ಸಾಲು ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ವಿರುದ್ಧ ಹರಿಹಾಯ್ದಿದೆ. ವಿದ್ಯಾರ್ಥಿಗಳೇನು ಬಿಜೆಪಿಯ ಕಾಲಾಳುಗಳೇ ಬಸವರಾಜ್ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪರೀಕ್ಷೆಯ ಆತಂಕದಲ್ಲಿರುವ ವಿದ್ಯಾರ್ಥಿಗಳನ್ನ ಖಾಲಿ ಖುರ್ಚಿ ತುಂಬಿಸಲು ಕರೆಸುವುದಕ್ಕೆ ನಾಚಿಕೆ ಎನಿಸುವುದಿಲ್ಲವೇ? ಯಾವುದೇ ಕಾರಣಕ್ಕೂ ಸಮವಸ್ತ್ರ ಹಾಗೂ ಕಪ್ಪು ಬಟ್ಟೆ ಧರಿಸಬಾರದು ಎಂದಿರುವುದೇಕೆ? ವಿದ್ಯಾರ್ಥಿಗಳನ್ನು ಗುರುತು ಸಿಕ್ಕರೆ ಮರ್ಯಾದೆ ಹೋಗುತ್ತದೆ ಎಂಬ ದುರಾಲೋಚನೆಯೇ?
ಪರೀಕ್ಷೆ ಮುಂದೂಡಿಕೆಗೆ ಕಾಂಗ್ರೆಸ್ ಕಿಡಿ
ಗಾಂಪರ ಗುಂಪಾದ ಬಿಜೆಪಿಗೆ ತಿಳಿದಿರುವುದು ಕಮಿಷನ್ ಲೂಟಿಯೇ ಹೊರತು ಶಿಕ್ಷಣದ ಮಹತ್ವವಲ್ಲ. ಶಿವಮೊಗ್ಗದ ಪ್ರಧಾನಿ ಕಾರ್ಯಕ್ರಮದ ಕುರ್ಚಿ ತುಂಬಿಸಲು ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಕರೆಸಲು ಆದೇಶಿಸಿದೆ. ಬೆಳಗಾವಿಯಲ್ಲಿ ಪಿಯುಸಿ ಪರೀಕ್ಷೆಯನ್ನೇ ಮುಂದೂಡಿದೆ. ಪ್ರಧಾನಿಯ ಶೋಕಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿ ಕೊಡುವುದು ನಾಚಿಕೆಗೇಡು ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇದು ಪರೀಕ್ಷಾ ಮೇ ಆಕ್ರಮಣ್ ಎಂದ ಕಾಂಗ್ರೆಸ್
ಪ್ರಧಾನಿ ಹೇಳುವುದು "ಪರೀಕ್ಷಾ ಪೇ ಚರ್ಚಾ" ಮಾಡುವುದು "ಪರೀಕ್ಷಾ ಮೇ ಆಕ್ರಮಣ್"!! ಪ್ರಧಾನಿಯ ರೋಡ್ ಶೋಗಾಗಿ ಪ್ರಥಮ ಪಿಯುಸಿಯ ಪರೀಕ್ಷೆಗಳನ್ನು ಮುಂದೂಡಿದ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಬದುಕಿಗೆ ಕಲ್ಲು ಹಾಕಲು ಹೇಸುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮೋದಿಯ ಪ್ರಚಾರದ ಹಪಹಪಿತನಕ್ಕೆ ವಿದ್ಯಾರ್ಥಿಗಳ ಭವಿಷ್ಯ ಕಿತ್ತುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಅಲ್ಲವೇ?
ಶಿಕ್ಷಣವಿಲ್ಲದವರಿಗೆ ಶಿಕ್ಷಣದ ಮಹತ್ವ ಅರಿಯುವುದುದಾದರೂ ಹೇಗೆ? ವಿದ್ಯಾರ್ಥಿಗಳ ಭವಿಷ್ಯ ಬಲಿಕೊಟ್ಟು ಶೋಕಿ ನಡೆಸಲು ಹೊರಟಿರುವ ಬಸವರಾಜ್ ಬೊಮ್ಮಾಯಿ ಅವರೇ, ತಮಗೆ ಚುನಾವಣಾ ಪ್ರಚಾರ ಮುಖ್ಯವೇ? ವಿದ್ಯಾರ್ಥಿಗಳ ಭವಿಷ್ಯ ಮುಖ್ಯವೇ? ಸ್ಪಷ್ಟಪಡಿಸಿ. ಪ್ರಧಾನಿ ನರೇಂದ್ರ ಮೋದಿ ಅವರು "ನಾ ಪಡುಂಗಾ, ನಾ ಪಡನೆದುಂಗಾ" ಎನ್ನಲು ಹೊರಟಿದ್ದಾರೆಯೇ ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ವಿದ್ಯಾರ್ಥಿಗಳ ನೀಡಿದ ಸೂಚನೆಗಳೇನು?
1.ವಿದ್ಯಾರ್ಥಿಗಳು ಬೆಳಗ್ಗೆ 7.45ಕ್ಕೆ ಕಾಲೇಜಿನ ಆವರಣದಲ್ಲಿ ಹಾಜರಿರಬೇಕು.
2.ಬೆಳಗ್ಗೆ 7.45ಕ್ಕೆ ಕಾಲೇಜಿನ ಆವರಣದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ.
3.ವಿದ್ಯಾರ್ಥಿಗಳು ಕಪ್ಪು ಬಟ್ಟೆ ಹೊರತುಪಡಿಸಿ ಉಳಿದ ಯಾವುದೇ ವರ್ಣದ ಬಟ್ಟೆ ಧರಿಸತಕ್ಕದ್ದು.
4.ಮೊಬೈಲ್ ಫೋನ್ ಹೊರತುಪಡಿಸಿ ಉಳಿದ ಯಾವುದೇ ವಸ್ತುವನ್ನು ತೆಗೆದುಕೊಂಡು ಬರಬಾರದು.
5.ಯಾವುದೇ ಕಾರಣಕ್ಕೂ ಕಾಲೇಜಿನ ಸಮವಸ್ತ್ರ ಧರಿಸತಕ್ಕದ್ದಲ್ಲ.
6.ಬಸ್ ನಂ.1 ಮತ್ತು 02ರಲ್ಲಿ ತಲಾ 75 ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ.
7.ತಡವಾಗಿ ಆಗಮಿಸುವ ವಿದ್ಯಾರ್ಥಿಗಳಿಗೆ ಅವಕಾಶ ಇರಲ್ಲ.
8.ಕಾರ್ಯಕ್ರಮ ಮುಗಿದ ನಂತರ ವಿದ್ಯಾರ್ಥಿಗಳು ತೆರಳಿದ ಬಸ್ನಲ್ಲಿಯೇ ಹಿಂತಿರುಗುವುದು.
9.ಇತರೆ ಷರತ್ತುಗಳನ್ನು ಪಾಲಿಸುವುದು.
ಮೋದಿಗೆ ಜನಸಾಮಾನ್ಯರಿಂದ ಸ್ವಾಗತ
ಇಂದು ಬೆಳಗಾವಿಯಲ್ಲಿ ಪ್ರಧಾನಿಯನ್ನು ಸ್ವಾಗತಿಸಲು ಸಾಮಾನ್ಯ ನಾಗರಿಕರಿಗೆ ಅವಕಾಶ ನೀಡಲಾಗಿದೆ. ನೇಕಾರ, ಪೌರ ಕಾರ್ಮಿಕ ಮಹಿಳೆ, ಕೂಲಿ ಕಾರ್ಮಿಕ ಮಹಿಳೆ, ಆಟೋ ಚಾಲಕರು, ರೈತರಿಗೆ ಅವಕಾಶ ಕೊಡಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಐವರನ್ನು ಆಯ್ಕೆ ಮಾಡಲಾಗಿದ್ದು, ಅವ್ರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ