ಬೆಂಗಳೂರು: ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ (Bengaluru-Mysuru Expressway) ಟೋಲ್ ಸಂಗ್ರಹ (Toll Fee) ಆರಂಭವಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ (Ramanagara) ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ (Sheshagirihalli Plaza) ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಆದ್ರೆ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್, ಕನ್ನಡಪರ ಸಂಘಟನೆಗಳು(Pro Kannada Organizations) ಪ್ರತಿಭಟನೆ ನಡೆಸುತ್ತಿದ್ದು ಟೋಲ್ ಗೇಟ್ ಮುರಿದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ಸ್ಥಳದಲ್ಲಿ ರಾಮನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಕಾರ್ ಗ್ಲಾಸ್ ಮೇಲೆ ಬಿದ್ದ ಬ್ಲೂಪರ್
ಕಣ್ಮಿಣಕಿ ಟೋಲ್ ಅವ್ಯವಸ್ಥೆಗೆ ಸಾಕ್ಷಿಯಾಯ್ತು. ಕಾರ್ ಗ್ಲಾಸ್ ಮೇಲೆ ಬ್ಲೂಪರ್ ಬಿದ್ದಿತ್ತು. ಇದರಿಂದ ಕೆರಳಿದ ಕಾರ್ ಮಾಲೀಕ ಕಾರ್ ಗ್ಲಾಸ್ ಹಾಕಿಸಿಕೊಡುವಂತೆ ಆಗ್ರಹಿಸಿದರು. ಸವಾರನ ಮನವೊಲಿಸಲು ಪೊಲೀಸರು ಹರಸಾಹಸಪಟ್ರು.
ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಮೈಸೂರು ರಸ್ತೆಯಲ್ಲಿ ಟೋಲ್ ಸಂಗ್ರಹ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ರಸ್ತೆಯ ಕಾಮಗಾರಿ ಮುಗಿಯುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಹೆದ್ದಾರಿಯನ್ನು ಉದ್ಘಾಟನೆ ಮಾಡಿದ್ದೆ ತಪ್ಪು ಎಂದರು.
ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡಿಲ್ಲ, ಸರ್ವಿಸ್ ರಸ್ತೆಗಳು ಆಗಿಲ್ಲ. ಇದು ಜನರಿಗೆ ತೊಂದರೆ ಆಗ್ತಾ ಇದೆ, ಈವರೆಗೆ 80 ಜನ ಸತ್ತಿದ್ದಾರೆ. ಚುನಾವಣೆಗೋಸ್ಕರ ರಸ್ತೆ ಉದ್ಘಾಟನೆ ಮಾಡಿದ್ದು ಸರಿಯಲ್ಲ. ನಾನೇ ನಿನ್ನೆ ಆ ರಸ್ತೆಯಲ್ಲಿ ಹೋಗಿದ್ದೆ, ಟಾಯ್ಲೆಟ್ ಮಾಡಲು ಒಂದು ಜಾಗವಿಲ್ಲ ಎಂದು ಕಿಡಿಕಾರಿದರು.
ಟೋಲ್ ಸಂಗ್ರಹದಲ್ಲೂ ಶುರುವಾಯ್ತು ಪಾಲಿಟಿಕ್ಸ್
ಜನಸಾಮಾನ್ಯರಿಗೊಂದು ನ್ಯಾಯ, ರಾಜಕೀಯ ಪಕ್ಷದ ಮುಖಂಡರಿಗೆ ಒಂದು ನ್ಯಾಯ ಎಂಬ ನೀತಿ ಟೋಲ್ ಸಂಗ್ರಹದಲ್ಲಿಯೂ ನಡೆಯುತ್ತಿದೆ. ಜನಸಾಮಾನ್ಯರು ದುಡ್ಡಿಲ್ಲ ಇಂದ್ರೂ ಟೋಲ್ ಪಾವತಿಸೋವರೆಗೂ ವಾಹನಗಳನ್ನು ಬಿಡುತ್ತಿರಲಿಲ್ಲ.ಆದ್ರೆ ರಾಜಕೀಯ ಪಕ್ಷದ ಮುಖಂಡನೊಬ್ಬ ಕಾರಿನಲ್ಲಿ ಬರುತ್ತಿದ್ದಂತೆ ಸೆಲ್ಯೂಟ್ ಹೊಡೆದು ಕಳುಹಿಸಲಾಗಿದೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ, ಟೋಲ್ ಕಟ್ ಆಗಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಇದನ್ನೂ ಓದಿ: Bengaluru Mysuru Expressway: ದಶಪಥ ಹೆದ್ದಾರಿಯಲ್ಲಿ ವನ್ಯಜೀವಿಗಳಿಗೆ ವಿಶೇಷ ಸೌಲಭ್ಯ
ಸಂಚಾರ ಅವಧಿ ಕಡಿತ
ಈ ಹೆದ್ದಾರಿ ಸರಾಸರಿ ಮೂರು ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಕಡಿಮೆ ಮಾಡಲಿದೆ. ಸದ್ಯ ಈ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಕೆಎಸ್ಆರ್ಟಿಸಿ ಬಸ್ಗಳು ಸೇರಿದಂತೆ ವಾಹನಗಳು ಎರಡು ಗಂಟೆಗಳ ಕಾಲ ತೆಗೆದುಕೊಳ್ಳುತ್ತಿವೆ.ಇನ್ನು ನೂತನ ದಶಪಥ ಹೈವೇ ಬಗ್ಗೆ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದು, ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತದೆ ಎಂದು ಮೋದಿ ಬಣ್ಣಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ