ಬೆಂಗಳೂರು (ಜ. 6): ಅಪ್ಪ- ಮಕ್ಕಳ ರಾಜಕಾರಣ ಕಾಂಗ್ರೆಸ್ನಲ್ಲಿ ಇಲ್ವ? ಆರ್ಜೆಡಿಯಲ್ಲಿ ಇಲ್ವ? ದೇವೇಗೌಡರು ಒಳ್ಳೆ ತಳಿಯ ಬೀಜ ಇಟ್ಟುಕೊಂಡಿದ್ದಾರೆ. ರೈತರು ಮುಂದಿನ ಬೆಳೆ ಬೆಳೆಯೋಕೆ ಹೇಗೆ ಉತ್ತಮ ಬೀಜ ಇಟ್ಟುಕೊಳ್ಳುತ್ತಾರೋ ಅದೇ ರೀತಿ ದೇವೇಗೌಡರು ಉತ್ತಮ ತಳಿಯ ಬೀಜವನ್ನು ಇಟ್ಟುಕೊಂಡಿದ್ದಾರೆ. JDSಗೆ ಸೇರೋದು, ಕಾಂಗ್ರೆಸ್ಗೆ ರಾಜೀನಾಮೆ ನೀಡಲು ಇನ್ನೂ ಸಮಯಾವಕಾಶವಿದೆ ಎನ್ನುವ ಮೂಲಕ ಕಾಂಗ್ರೆಸ್ MLC CM Ibrahim ಕಾಂಗ್ರೆಸ್ ತೊರೆಯುವ ಕುರಿತು ಮುನ್ಸೂಚನೆ ನೀಡಿದ್ದಾರೆ.
ನಾನು ಇಂದು ದೇವೇಗೌಡರನ್ನು ಭೇಟಿಯಾಗುತ್ತೇನೆ. ಅವರ ಜೊತೆ ಈ ಎಲ್ಲಾ ವಿಚಾರದ ಬಗ್ಗೆ ಮಾತನಾಡುತ್ತೇನೆ. ದೇವೇಗೌಡರು ಕನ್ನಡದ ಮೇರು ವ್ಯಕ್ತಿತ್ವ. ಅವರ ಬಗ್ಗೆ ನಾವು ಹೆಮ್ಮೆ ಪಡಬೇಕು. ನನ್ನನ್ನು ಪ್ರಭಾಕರ್ ಕೋರೆ, ಉಮೇಶ್ ಕತ್ತಿ ಭೇಟಿ ಮಾಡಿದ್ದು ನಿಜ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನನಗೆ ಒಳ್ಳೆಯ ಸ್ನೇಹಿತರು. ಅದೇ ರೀತಿ ಆರ್ಎಸ್ಎಸ್ನವರು ಕೂಡ ನನಗೆ ಸ್ನೇಹಿತರು ಅದಕ್ಕೇ ಅವರು ನನ್ನ ಮನೆಗೆ ಬಂದಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ವಾಸ್ತವವಾಗಿ ಹೇಳುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷವನ್ನು ಬಿಡುತ್ತಿದ್ದೇನೆ, ಬೇರೆ ಪಾರ್ಟಿಗೆ ಹೋಗುತ್ತಿದ್ದೇನೆ ಎಂಬ ಹೆದರಿಕೆ ನನಗಿಲ್ಲ. ನಾನು ಮನಸ್ಸು ಮಾಡಿದ್ದರೆ ಯಾವತ್ತೋ ಮುಸ್ಲಿಂ ಲೀಡರ್ ಆಗುತ್ತಿದ್ದೆ. ನನಗೆ ಈ ಬಗ್ಗೆ ಯಾವುದೇ ಆಸೆಗಳಿಲ್ಲ. ನಾನು ಮಹಿಮಾ ಪಟೀಲ್, ನಾಡಗೌಡರು ಎಲ್ಲರ ಜೊತೆ ಮಾತನಾಡಿದ್ದೇನೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ಗೆ ಲವ್ ಬಗ್ಗೆ ಗೊತ್ತಿದ್ಯಾ?:
ಲವ್ ಜಿಹಾದ್ ಬಗ್ಗೆ ಮಾತನಾಡುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಲವ್ ಅಂದರೆ ಏನು ಅಂತ ಗೊತ್ತಿದ್ಯಾ? ಅವರಿಗೆ ಮದುವೆ ಆಗಿದ್ಯಾ? ಯೋಗಿ ಆದಿತ್ಯನಾಥ್ ಮದುವೆ ಆಗಿದ್ದಾನಾ? ಅವನಿಗೆ ಹೆಂಡತಿ, ಮಕ್ಕಳ ಬಗ್ಗೆ ಅರಿವಿದೆಯಾ? ಪ್ರೀತಿ, ಸಂಸಾರದ ಬಗ್ಗೆ ಏನೂ ಅನುಭವ ಇಲ್ಲದ ಅವರು ಲವ್ ಜಿಹಾದ್ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಎಂಎಲ್ಸಿ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ದೇವರ ಅನುಗ್ರಹದಿಂದ ನಾನು ಯಾವುದೇ ಕಾರ್ಯಕ್ಕೆ ಕೈ ಹಾಕಿದರೂ ಅದರಲ್ಲಿ ಫೇಲ್ ಆಗಿಲ್ಲ. ನಾನು ಇದುವರೆಗೂ ಹೇಳಿರುವುದು ಯಾವುದೂ ಸುಳ್ಳಾಗಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಹೇಳಿದ್ದೆ. ಅದರಂತೆ ನಾವು ಚುನಾವಣೆಯಲ್ಲಿ ಸೋತೆವು. ನಾನು ಕಾಲಜ್ಞಾನ ಹೇಳುತ್ತಿಲ್ಲ, ನನಗೆ ದೇವರು ಒಂದಿಷ್ಟು ಜ್ಞಾನ ಕೊಟ್ಟಿದ್ದಾನೆ. ನಾನು ಕಾಂಗ್ರೆಸ್ ಬಿಟ್ಟರೆ ಎಂಎಲ್ಸಿ ಸ್ಥಾನವೂ ಹೋಗುತ್ತದೆ. ಏನು ಮಾಡೋಕೆ ಆಗುತ್ತದೆ? ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನನ್ನ ಯಾವುದೇ ತಂತ್ರವನ್ನು ಸದ್ಯಕ್ಕೆ ನಾನು ಬಿಟ್ಟುಕೊಡುವುದಿಲ್ಲ. ಇದುವರೆಗೂ ನಡೆಯದಿರುವ ಕೆಲಸವನ್ನು ಮಾಡೋ ಕಮಾಲ್ ಮಾಡೋದೇ ಈ ಸಿ.ಎಂ ಇಬ್ರಾಹಿಂ ಕಲ್ಪನೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರಿಗಾದರೂ ಗೊತ್ತಿತ್ತಾ? ಅವರು ಚಾಮುಂಡಿ ಕ್ಷೇತ್ರದಲ್ಲಿ ಸೋಲುತ್ತಾರೆ ಎಂದೇ ಬಾದಾಮಿಗೆ ಹೋಗಿ ಸ್ಪರ್ಧಿಸಲು ಹೇಳಿದೆ. ಡಿಸೆಂಬರ್ ಬಂದರೆ ರಾಜಕೀಯದಲ್ಲಿ ಬದಲಾವಣೆ ಆಗುತ್ತದೆ ಅಂತ ಹೇಳಿದ್ದೆ, ಆ ಬದಲಾವಣೆ ಆಗಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ. ಯಡಿಯೂರಪ್ಪ ಹಾಗೂ ಮೋದಿ ಟೆಂಟಿಗೆ ಬೆಂಕಿ ಬಿದ್ದಿದೆ. ಎಲ್ಲ ಬದುಕಿದರೆ ಸಾಕು ಅಂತ ಓಡಿ ಹೋಗುತ್ತಾರೆ ಎಂದು ಎಂಎಲ್ಸಿ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.
ನಮ್ಮದು ಕೃಷ್ಣ ದೇವರಾಯ ಆಳಿದ ನಾಡು. ಆದರೆ, ಇಂದು ಎಲ್ಲದಕ್ಕೂ ಕೇಂದ್ರದತ್ತ ಕೈ ಚಾಚುತ್ತಿದ್ದೇವೆ. ನಮ್ಮ ಚೆಲುವಾದಿ ಚೆಲುವೆಯರು, ಗಂಡಭೇರುಂಡಗಳಂತೆ 25 ಸಂಸದರು ಇದ್ದಾರಲ್ಲ ಅವರೆಲ್ಲ ಏನು ಮಾಡುತ್ತಿದ್ದಾರೆ? ಎಂದು ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ