ಬೆಂಗಳೂರು(ಸೆ.02): ಕೇಂದ್ರ ಸರ್ಕಾರ ಒಂದು ದೇಶ, ಒಂದು ತೆರಿಗೆ ಮೂಲಕ ರಾಜ್ಯಗಳ ಜಿಎಸ್ಟಿ ಪಾಲನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಿತ್ತುಕೊಂಡಿದೆ ಎಂದು ಅನೇಕ ರಾಜ್ಯಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಕರ್ನಾಟಕದಲ್ಲಿಯೂ ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಈ ನಡುವೆಯೇ ಜಿಎಸ್ಟಿ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎರಡು ಆಯ್ಕೆಗಳನ್ನು ನೀಡಿತ್ತು. ಮೌಲ್ಯಮಾಪನದ ನಂತರ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಆಯ್ಕೆ ಒಂದನ್ನು ಆರಿಸಿಕೊಂಡಿದೆ.
ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರ ನೀಡಿರುವ ಆಯ್ಕೆಗಳ ಪ್ರಕಾರ, ಆಯ್ಕೆ 1ರ ಅಡಿಯಲ್ಲಿ ಒಟ್ಟು 18,289 ಕೋಟಿ ರೂ.ಪರಿಹಾರ ಪಡೆಯಬಹುದಾಗಿದೆ. ಈ ಆಯ್ಕೆಯನ್ನು ಕರ್ನಾಟಕ ಸರ್ಕಾರ ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ರಾಜ್ಯಗಳಿಂದ ತೆರಿಗೆ ಹಕ್ಕನ್ನು ಕಿತ್ತುಕೊಂಡು, ಈಗ ತೆರಿಗೆ ಪಾಲು ಕೊಡಲು ಆಗುವುದಿಲ್ಲ. ನಿಮ್ಮ ಖರ್ಚು- ವೆಚ್ಚಗಳಿಗೆ ಬೇಕಿದ್ದರೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುತ್ತೇವೆ ಎಂದು ಪ್ರಧಾನಿ ಮೋದಿ ಸರ್ಕಾರ ಹೇಳಿತ್ತು. ಕೇಂದ್ರ ಸರ್ಕಾರದ ಈ ಮಾತಿಗೆ ಬಿಜೆಪಿ ಆಡಳಿತದ ರಾಜ್ಯಗಳೂ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಹೆಚ್ಚಾದ ಗಾಂಜಾ ದಂಧೆ; ಕಠಿಣ ಕ್ರಮಕ್ಕಾಗಿ ಜನರ ಆಗ್ರಹ
ಮೊದಲಿಗೆ ಕೇರಳ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ತೆಲಂಗಾಣ, ಪಶ್ಚಿಮ ಬಂಗಾಳ, ದೆಹಲಿ, ಛತ್ತೀಸ್ಗಢ ರಾಜ್ಯಗಳೂ ಧ್ವನಿ ಎತ್ತಿವೆ.
ಇನ್ನು, ಈ ಬಾರಿ ದೇಶಾದ್ಯಂತ ಕೊರೋನಾ ವೈರಸ್ ಮತ್ತು ಲಾಕ್ಡೌನ್ನಿಂದಾಗಿ ಬಹುತೇಕ ಉದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಜಿಎಸ್ಟಿ ಆದಾಯದಲ್ಲಿ ಇಳಿಕೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ 86,449 ಕೋಟಿ ರೂ. ಸಂಗ್ರಹವಾಗಿದೆ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ