ಬೆಂಗಳೂರು: ಡಾ ಸರ್ವಪಲ್ಲಿ ರಾಧಾಕೃಷ್ಣನ್ ದೇಶ ಕಂಡ ಉತ್ತಮ ಆಡಳಿತಗಾರರು. ಶಿಕ್ಷಕರು ಒಬ್ಬರು ಈ ದೇಶದ ರಾಷ್ಟಪತಿ ಆಗಬಹುದು ಅಂತ ತೋರಿಸಿ ಕೊಟ್ಟಿದ್ದಾರೆ. ಅಂತಹವರ ನೆನಪಿಗಾಗಿ ಶಿಕ್ಷಕರ ದಿನಾಚರಣೆ ಮಾಡುತ್ತಾ ಇದ್ದೇವೆ. ಗುರುಗಳು ಇಲ್ಲದೆ ನಾಗರಿಕ ಸಮಾಜದ ಕಟ್ಟಲು ಸಾಧ್ಯವಿಲ್ಲ. ಕಷ್ಟ ಕಾಲದಲ್ಲಿ ಕೈ ಹಿಡಿದು ನಡೆಸುವ ಪ್ರತಿಯೊಬ್ಬರೂ ಗುರುಗಳೇ. ಗುರುಗಳಿಗೆ ಅತ್ಯಂತ ಶ್ರೇಷ್ಠವಾದ ಸ್ಥಾನ ಸಮಾಜದಲ್ಲಿದೆ. ಸರಸ್ವತಿಯ ಪ್ರತಿ ಸ್ವರೂಪ ಗುರುಗಳೇ ಆಗಿದ್ದಾರೆ. ಮಕ್ಕಳನ್ನ ಉತ್ತಮ ಸ್ಥಾನಕ್ಕೆ ಕೊಂಡೊಯ್ಯವ ಶಕ್ತಿ ಗುರುವಿಗೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ (Dr Sarvapalli Radhakrishanan Birthday) ಪ್ರಯುಕ್ತ ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ (Teachers Day) ಸಮಾರಂಭ ನಡೆಸಲಾಯಿತು. ಸಮಾರಂಭದಲ್ಲಿ ರಾಜ್ಯ ಪುರಸ್ಕೃತ ಶಿಕ್ಷಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಜ್ಯೋತಿ ಬೆಳಗುವ ಮೂಲಕ ಸಿಎಂ ಬೊಮ್ಮಾಯಿ ಅವರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 21 ನೇ ಶತಮಾನ, ಜ್ಞಾನದ ಶತಮಾನ. ಜ್ಞಾನ ಸಂಪಾದನೆ ಮಾಡಲು ಹಿಂದೆ ಋಷಿಗಳ ಬಳಿ ಹೋಗ್ತಾಯಿದ್ರೂ. ಈಗ ಜ್ಞಾನ ಸಂಪಾದನೆ ಮಾಡಬೇಕಾದ್ರೆ ಗುರುಗಳ ಬಳಿ ಹೋಗಬೇಕಾಗಿದೆ. ಶಿಕ್ಷಕರು ಸಹ ಉತ್ತಮ ಗುರುಗಳಾಬೇಕು. ಆಗ ಮಕ್ಕಳಿಗೆ ಉತ್ತಮ ಶಿಕ್ಷಕರಾಗಬಹುದು. ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು ಶಿಕ್ಷಕರು ಅವಕಾಶ ಕೊಡಬೇಕು. ಆಗ ಮಾತ್ರ ಪರಿಪೂರ್ಣ ಶಿಕ್ಷಕರು ಆಗುತ್ತಿರಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಹಂಸ ತೂಕವಿರುವ ಪಕ್ಷಿ. ಅತೀ ಎತ್ತರಕ್ಕೆ ಹಾರುವ ಪಕ್ಷಿ ಎಂದರೆ ಹಂಸ. ಈ ಹಂಸ ಪಕ್ಷಿ ವಾಹನದಲ್ಲಿ ಕೂರಿಸಿಕೊಂಡು ಮಕ್ಕಳನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲವರು ನೀವು. 21 ನೇ ಶತಮಾನ ಜ್ಞಾನದ ಕಾಲ. ಜ್ಞಾನ ಹೋಗಿ ವಿಜ್ಞಾನ ಬಂದಿದೆ. ವಿಜ್ಞಾನ ಹೋಗಿ ತಂತ್ರಜ್ಞಾನ, ತಂತ್ರಜ್ಞಾನ ದಿಂದ ತಂತ್ರಾಂಶ ಜ್ಞಾನ ಬಂದಿದೆ. ಜಗತ್ತು ಮತ್ತು ಜ್ಞಾನ ವೇಗವಾಗಿ ಸಾಗ್ತಾ ಇದೆ. ಯಾರು ವೇಗವನ್ನು ಅನುಸರಿಸುತ್ತಾರೆ ಅವರು ಜೀವನದಲ್ಲಿ ಯಶಸ್ವಿಯಾಗ್ತಾರೆ. ಶಿಕ್ಷಕರು ಉತ್ತಮ ವಿದ್ಯಾರ್ಥಿಗಳು ಆದಾಗ ಉತ್ತಮ ಶಿಕ್ಷಕರು ಆಗ್ತಾರೆ. ಯಾರು ಮಕ್ಕಳಿಗೆ ಮುಕ್ತ ಅವಕಾಶ ಕೊಡ್ತಾರೆ ಅವರೇ ನಿಜವಾದ ಶಿಕ್ಷಕರು. ಮಕ್ಕಳಲ್ಲಿ ಮುಗ್ಧತೆ ಇರುತ್ತದೆ. ನಾವೆಲ್ಲಾ ಚಿಕ್ಕವಯಸ್ಸಿನಲ್ಲಿ ಮುಗ್ದರಾಗಿದ್ದೆವು. ಅದೇ ಸಮಯದಲ್ಲಿ ಅವರಿಗೆ ತಿಳಿದುಕೊಳ್ಳುವ ತವಕ ಇರುತ್ತದೆ ಎಂದರು.
ಇದನ್ನು ಓದಿ: Teachers Day: ಶಿಕ್ಷಕರ ದಿನಾಚರಣೆ; ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸಿಎಂ ಸನ್ಮಾನ
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಶಿಕ್ಷಣ ನೀತಿ ಮಾಡಿದ್ದಾರೆ. ಒಬ್ಬ ವಿದ್ಯಾರ್ಥಿಗೆ ಎಲ್ಲ ರೀತಿಯ ಮಾರ್ಗ ಇದರಿಂದ ಸಿಗುತ್ತದೆ. ಇದೊಂದು ಕ್ರಾಂತಿಕಾರಕ ಹೆಜ್ಜೆ. ಇದಕ್ಕೆಲ್ಲಾ ನೀವು ಕೂಡ ಸಿದ್ದರಾಗಬೇಕು. ಒಂದು ಯೋಜನೆಗೆ ಪರ -ವಿರೋಧ ಸಾಮಾನ್ಯ. ಈ ದೇಶದ ಭವಿಷ್ಯ ಬರೆಯುವ ಶಕ್ತಿ ಗುರುಗಳಲ್ಲಿದೆ. ನೀವು ದೇಶ ಕಟ್ಟುವ ಶಿಲ್ಪಿಗಳು. ನ್ಯೂ ಎಜುಕೇಶನ್ ಪಾಲಿಸಿ ಬಗ್ಗೆ ನೀವು ಸಲಹೆ ನೀಡಬಹುದು. ಹಲವಾರು ಚರ್ಚೆ ಮಾಡಲು ನಾಗೇಶ್ ಸಿದ್ದತೆ ಮಾಡ್ತಾ ಇದ್ದಾರೆ. ಕ್ರಾಂತಿಕಾರಿ ಬದಲಾವಣೆಗಳನ್ನು ನಾವು ನೀವು ಸೇರಿ ಮಾಡೋಣ ಎಂದು ಸಿಎಂ ಕರೆ ನೀಡಿದರು.
ಇದೇ ವೇಳೆ, 5000 ಸಾವಿರ ಶಿಕ್ಷಕರ ನೇಮಕಾತಿ ಮಾಡಬೇಕೆಂದು ಕೊಂಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳುವ ಮೂಲಕ ಶಿಕ್ಷಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಚರ್ಚೆ ಇಲ್ಲದೇ ಎನ್ಇಪಿ ಜಾರಿಗೆ ರಿಜ್ವಾನ್ ಆಕ್ಷೇಪ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ರಿಜ್ವಾನ್ ಹರ್ಷದ್ ಅವರು, ಚರ್ಚೆ ಇಲ್ಲದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿರುವ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹೊಸ ಶಿಕ್ಷಣ ನೀತಿಯನ್ನು ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಒತ್ತಾಯ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ