ಬೆಂಗಳೂರು(ಆ.27): ಅತ್ಯಾಚಾರ ಪ್ರಕರಣದ ವಿಷಯದಲ್ಲಿ ಎಚ್ಚರಿಕೆಯಿಂದ ಮಾತನಾಡಿ ಎಂದು ಸಂಪುಟ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ. ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಅತ್ಯಂತ ಸೂಕ್ಷ್ಮ ವಿಚಾರ. ಹೀಗಾಗಿ ಈ ಪ್ರಕರಣದ ಬಗ್ಗೆ ಮಾತಾಡುವಾಗ ಎಚ್ಚರವಿರಲಿ. ಕಾಂಗ್ರೆಸ್ ನಾಯಕರ ಆರೋಪಕ್ಕೆ ಮಾತಾಡಿ ಗೊಂದಲ ಮಾಡ್ಕೊಬೇಡಿ. ಈ ರೀತಿ ಘಟನೆ ಆದಾಗ ವಿಪಕ್ಷದವರು ಟೀಕೆ ಮಾಡೋದು ಸಹಜ. ಹಾಗಂತ ಏನೋ ಮಾತಾಡಿ, ಗೊಂದಲ ಮಾಡ್ಕೊಳ್ಳೋದು ಬೇಡ. ಅತ್ಯಾಚಾರ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ ಎಂದು ಹೇಳಿದ್ದಾರೆ.
ಮುಂದುವರೆದ ಅವರು, ನಿಮ್ಮ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿದ್ದು, ಪ್ರಕರಣದ ವಿವರ ಪಡೆಯಿರಿ. ಅನಾವಶ್ಯಕವಾಗಿ ಮಾತಾಡಿ ಗೊಂದಲಕ್ಕೀಡಾಗಬೇಡಿ. ಈಗಾಗಲೇ ಗೃಹ ಸಚಿವರು ಸ್ಥಳಕ್ಕೆ ಹೋಗಿದ್ದಾರೆ. ನೀವು ಕೂಡ ಹೋಗಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ಗೆ ಸಿಎಂ ಸೂಚನೆ ನೀಡಿದರು. ಸಿಎಂ ಸೂಚನೆ ಹಿನ್ನೆಲೆ ಇದೀಗ ಹಾಲಪ್ಪ ಆಚಾರ್ ಮೈಸೂರಿಗೆ ತೆರಳಿದರು.
ಪೊಲೀಸ್ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಅವರು ಎಲ್ಲಾ ಮಾಹಿತಿಯೊಂದಿಗೆ ಮುಂದುವರೆಯುತ್ತಿದ್ದಾರೆ. ಯಾವ ಹಂತದಲ್ಲಿ ಇದೆ ಅಂತಾ ಅವರು ಇನ್ನೂ ಹೇಳಿಲ್ಲ. ಆದರೆ ತನಿಖೆ ಕುರಿತ ವರದಿಯನ್ನು ಖುದ್ದು ನನಗೆ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಪ್ರಕರಣ ಭೇದಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಡಿಜಿಪಿ ಪ್ರವೀಣ್ ಸೂದ್ ಕೂಡ ಇಂದು ಮೈಸೂರಿಗೆ ಹೋಗ್ತಿದ್ದಾರೆ ಎಂದರು.
ಇದನ್ನೂ ಓದಿ:Viral Video: ಇದು ಎಲೆಯೋ.. ಕೀಟವೋ..? ಈ ವಿಡಿಯೋ ನೋಡಿ ನೀವೇ ಹೇಳಿ...!
ಇನ್ನು ಘಟನೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಿಸಿಟಿವಿ, ಟವರ್ ಲೊಕೇಷನ್ ಮೂಲಕ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ. ಇವತ್ತು ಅಥವಾ ನಾಳೆಯೊಳಗೆ ಆರೋಪಿಗಳ ಪತ್ತೆ ಬಗ್ಗೆ ತನಿಖಾ ತಂಡದಿಂದ ಗೃಹ ಸಚಿವರಿಗೆ ಮಾಹಿತಿ ನೀಡಲಾಗುತ್ತದೆ. ಒಟ್ಟು ಆರು ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.
ಆರೋಪಿಗಳು ಕೃತ್ಯ ಎಸಗಿ ಬೈಕ್ಗಳಲ್ಲಿ ಎಸ್ಕೇಪ್ ಆಗಿರೋ ಮಾಹಿತಿ ಲಭ್ಯವಾಗಿದೆ. ಪೊಲೀಸರು ಲಲಿತಾದ್ರಿ ಬೆಟ್ಟದ ಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿರುವ ಬಾರ್ ಹಾಗೂ ಹೋಟೆಲ್ನಲ್ಲಿರುವ ಸಿಸಿಟಿವಿ ಡಿವಿಆರ್ ಪಡೆದಿದ್ದಾರೆ. ಎರಡು ಟೀಂ ನಿಂದ ಟೆಕ್ನಿಕಲ್ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆ ನಡೆದ ಮೂರು ಗಂಟೆಗಳ ಅವಧಿಯಲ್ಲಿ ಸ್ಥಳದ ಟವರ್ ಲೊಕೇಷನ್ನ್ನು ಪೊಲೀಸರು ಡಂಪ್ ಮಾಡಿದ್ದಾರೆ.
ಸದ್ಯ ಯುವತಿ ಹಾಗೂ ಸ್ನೇಹಿತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ಥೆಯ ಸ್ನೇಹಿತನಿಗೆ ದುಷ್ಕರ್ಮಿಗಳು ಗಂಭೀರ ಹಲ್ಲೆ ಮಾಡಿದ್ದಾರೆ. ಹೀಗಾಗಿ ಇಬ್ಬರೂ ಶಾಕ್ ಗೊಳಗಾಗಿ ತನಿಖೆ ವೇಳೆ ಅಸ್ಪಷ್ಟ ಹೇಳಿಕೆ ನೀಡಿದ್ದಾರೆ.
ಕತ್ತಲಿನ ವಾತಾವರಣದಲ್ಲಿ ಯಾರೂ ಗುರುತು ಸಿಗಲಿಲ್ಲ. ಮಾಸ್ಕ್ ಹಾಕಿದ್ದರು. ಅತ್ಯಾಚಾರದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ ಎಂದು ಸಂತ್ರಸ್ಥೆಯ ಜೊತೆಗಿದ್ದ ಯುವಕ ಹೇಳಿದ್ದಾನೆ.. ಸ್ನೇಹಿತನ ಜೊತೆಗಿದ್ದ ವಿಡಿಯೋ ಜೊತೆಗೆ ಅವರ ಕೃತ್ಯದ ವಿಡಿಯೋ ಸಹ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ರಾಷ್ಟ್ರೀಯ ಮಹಿಳಾ ಆಯೋಗವು ಪ್ರಕರಣ ಸಂಬಂಧ ಬೇಗನೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಎಂದು ಕರ್ನಾಟಕ ಡಿಜಿಪಿಗೆ ಸೂಚನೆ ನೀಡಿದ್ದರು. ಈ ಸೂಚನೆ ಬೆನ್ನಲ್ಲೇ ಪೊಲೀಸರ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಆರೋಪಿಗಳನ್ನು ಹಿಡಿಯಲು ಪೊಲೀಸರು ಎಲ್ಲಾ ಆಯಾಮಾಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ