ಉತ್ತರ ಕರ್ನಾಟಕದ ಗಟ್ಟಿ ಧ್ವನಿ, ಸಚಿವ ಉಮೇಶ್ ಕತ್ತಿ (Minister Umesh Katti) ಮಂಗಳವಾರ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ವಿಷಯ ತಿಳಿಯುತ್ತಲೇ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ (MS Ramaiah Hospital) ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಉಮೇಶ್ ಕತ್ತಿ (Umesh Katti Death) ಅವರ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಭಾವುಕರಾಗಿಯೇ ತಮ್ಮ ಮಾತುಗಳನ್ನು ಆರಂಭಿಸಿದರು. ಇನ್ನು ಉಮೇಶ್ ಕತ್ತಿ ಅವರ ಜೊತೆಗಿನ ಒಡನಾಟ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಕಣ್ಣೀರು ಹಾಕಿದರು. ಉಮೇಶ್ ಕತ್ತಿ ಅವರ ನಿಧನಕ್ಕೆ ಕಣ್ಣೀರಿನ ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು, ಬೆಳಗ್ಗೆ ಏಳು ಗಂಟೆಗೆ ಪಾರ್ಥಿವ ಶರೀರವನ್ನು ಬೆಳಗಾವಿಗೆ (Belagavi) ತೆಗೆದುಕೊಂಡು ಹೋಗಲಾಗುತ್ತದೆ. ಸಂಜೆ ಐದು ಗಂಟೆಗೆ ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಯ ತೋಟದಲ್ಲಿ ಉಮೇಶ್ ಕತ್ತಿಯವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು. ಸಾರ್ವಜನಿಕರ ದರ್ಶನಕ್ಕಾಗಿ ಮಧ್ಯಾಹ್ನ ಎರಡು ಗಂಟೆವರೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು. ಇದೇ ವೇಳೆ ಬೆಳಗಾವಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರು.
ಆತ್ಮೀಯರು, ಸೋದರರು ಆದ ಉಮೇಶ್ ಕತ್ತಿ ಅವರ ತಂದೆ ಮತ್ತು ನಮ್ಮ ತಂದೆ ಅವರ ಜೊತೆ ಅತ್ಯಂತ ಆತ್ಮೀಯರು. ಸುಮಾರು ನಾಲ್ಕು ದಶಕಗಳಿಂದ ಉಮೇಶ್ ಕತ್ತಿ ಕುಟುಂಬದ ಜೊತೆ ಒಡನಾಟ ಇದೆ. ತಂದೆಯವರ ಅಕಾಲಿಕ ನಿಧನದಿಂದಾಗಿ 25ನೇ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಎಂಟು ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ ಅವರು ರಾಜ್ಯದ ಪ್ರಮುಖ ರಾಜಕೀಯ ನಾಯಕರಾಗಿದ್ದರು ಎಂದು ಸಿಎಂ ಭಾವುಕರಾದರು.
ಹಿಡಕಲ್ ಡ್ಯಾಂ ಬಗ್ಗೆ ಘೋಷಣೆ ಮಾಡಿದ್ದಾಗ ಖುಷಿಯಾಗಿದ್ರು
ಈ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಾರಿ ಶಾಸಕಾರದವರು ಉಮೇಶ್ ಕತ್ತಿ. ಹಿಡಕಲ್ಲು ಡ್ಯಾಂ ಅನ್ನು ಆಲಮಟ್ಟಿ ರೀತಿ ಮಾಡಬೇಕು ಅಂತಾ ಯೋಜನೆ ಹೊಂದಿದ್ದರು. ಈ ಬಗ್ಗೆ ಬಜೆಟ್ನಲ್ಲಿ ಅನೌನ್ಸ್ ಮಾಡಿದಾಗ ತುಂಬಾನೇ ಖುಷಿಯಾಗಿದ್ದರು. ಅಂದು ನನ್ನನ್ನು ಬೇಟಿ ಮಾಡಿ ಬಹಳ ದಿನಗಳ ಕನಸು ನನಸು ಮಾಡಿದ್ರಿ ಅಂತಾ ಸಂತಸ ವ್ಯಕ್ತಪಡಿಸಿದ್ದರು. ವ್ಯಕ್ತಿಗತವಾಗಿ ಅಜಾತ ಶತ್ರು ನಾಯಕರು. ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಕಳಕಳಿ ಇರುವಂತಹ ವ್ಯಕ್ತಿ ಎಂದು ಮುಖ್ಯಮಂತ್ರಿಗಳು ಹೇಳಿದರು.
ಹಳೆಯ ನೆನಪು ನೆನೆದು ಬೊಮ್ಮಾಯಿ ಕಣ್ಣೀರು
ಉಮೇಶ್ ಕತ್ತಿ ಅವರ ಜೊತೆ ನಾನು ಮೂರು ದಶಕಗಳಿಂದ ಒಡನಾಟ ಹೊಂದಿದ್ದೇನೆ. ಇಬ್ಬರು ರಾಜಕೀಯದಲ್ಲಿ ಏಕಕಾಲದಲ್ಲಿ ಏರಿಳಿತ ಕಂಡಿದ್ದೇವೆ. ಜೊತೆಯಾಗಿ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ನಮ್ಮ ಜೊತೆ ಸಹೋದರರ ಸಂಬಂಧ ಇತ್ತು ಎಂದು ಹೇಳುತ್ತಲೇ ಸಿಎಂ ಬೊಮ್ಮಾಯಿ ಕಣ್ಣೀರು ಹಾಕಿದರು.
ಇದನ್ನೂ ಓದಿ: Umesh Katti: ನೇರ ನುಡಿಯ ಗಟ್ಟಿ ರಾಜಕಾರಣಿ ಉಮೇಶ್ ಕತ್ತಿ, ಹಿರಿಯ ನಾಯಕನ ಹೆಜ್ಜೆ ಗುರುತು ಇಲ್ಲಿದೆ
ರಾಜ್ಯ ಒಬ್ಬ ಧೀಮಂತ ನಾಯಕನನ್ನ ಕಳೆದುಕೊಂಡಿದೆ. ಬೆಳಗಾವಿ ಹಿರಿಯ ನಾಯಕನನ್ನ ಕಳೆದುಕೊಂಡಿದೆ. ಉತ್ತರ ಕರ್ನಾಟಕದ ಧ್ವನಿ ಇಲ್ಲದಂತಾಗಿದೆ. ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ ಆಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹ
ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಅಂತ ಹೇಳುತ್ತಲೇ ಬಂದಿದ್ದರು. ಈ ಬಗ್ಗೆ ಹೈಕಮಾಂಡ್ ಸೂಚನೆ ನೀಡಿದ್ದರೂ ಕೂಡ ಈ ವಿಚಾರದಲ್ಲಿ ಅವರ ನಿಲುವು ಅಚಲವಾಗಿತ್ತು. ನಾನು ಸಿಎಂ ಆಗುತ್ತೇನೆ ಅದು ಉತ್ತರ ಕರ್ನಾಟಕ್ಕೆ ಅಂತ ಹೇಳುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ