news18-kannada Updated:January 13, 2021, 7:51 AM IST
ಅಪ್ಪನನ್ನು ಕೊಲೆ ಮಾಡಿದ ಸತೀಶ
ಚಿಕ್ಕಮಗಳೂರು (ಜ. 13): ಮೈತುಂಬ ಸಾಲ ಮಾಡಿಕೊಂಡಿದ್ದ ಮಗನಿಗೆ ಬುದ್ದಿ ಹೇಳಿದ್ದಕ್ಕೆ ತಂದೆಯನ್ನೇ ಕತ್ತಿಯಿಂದ ಕೊಚ್ಚಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಾಚಗೊಂಡನಹಳ್ಳಿಯಲ್ಲಿ ನಡೆದಿದೆ. ತಮ್ಮೇಗೌಡ ಎಂಬಾತನನ್ನು ಮಗ ಸತೀಶನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಜನ್ಮ ಕೊಟ್ಟ ತಂದೆಯನ್ನೇ ಕತ್ತಿಯಿಂದ ಕೊಚ್ಚಿ, ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ. ಸತೀಶ್ 2 ವರ್ಷದ ಹಿಂದೆ ಖಾಸಗಿ ಫೈನಾನ್ಸ್ನಿಂದ ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿಸಿದ್ದ. ಇದಕ್ಕೆ ಅಪ್ಪನ ಪಹಣಿಯನ್ನೇ ನೀಡಿ, ಸಾಲದ ಕಂತು ನೇರವಾಗಿ ಅಪ್ಪನ ಖಾತೆಯಿಂದಲೇ ಕಟ್ ಆಗುವಂತೆ ಮಾಡಿದ್ದ.
2 ವರ್ಷದಿಂದ ಒಂದೂವರೆ ಲಕ್ಷಕ್ಕೂ ಅಧಿಕ ಹಣ ತಮ್ಮೇಗೌಡರಿಗೆ ಗೊತ್ತಾಗದಂತೆ ಅವರ ಖಾತೆಯಿಂದಲೇ ಕಟ್ ಆಗಿತ್ತು. ಖಾತೆಯಲ್ಲಿ ಬ್ಯಾಲೆನ್ಸ್ ಮುಗಿದ ಮೇಲೆ ಬ್ಯಾಂಕಿನವರು ಸತೀಶನನ್ನು ಹುಡುಕಿಕೊಂಡು ಬಂದಿದ್ದರು. ಇದರಿಂದ ನೊಂದ ತಂದೆ ಸಾಲ ತೀರಿಸದ ಮಗನನ್ನು ಪ್ರಶ್ನೆ ಮಾಡಿದ್ದಾರೆ. ಇಷ್ಟಕ್ಕೆ ನೀಚ ಮಗ ಸತೀಶ ಅಪ್ಪನನ್ನು ಊರಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ಕೊಲೆಯಾದ ಈ ಪುಣ್ಯಾತ್ಮನನ್ನು ಪಾಪಿ ಸತೀಶನ ಅಪ್ಪ ಅನ್ನೋದಕ್ಕಿಂತ ಅನ್ನದಾತ ಅಂದರೆ ತಪ್ಪಿಲ್ಲ. ಯಾಕೆಂದರೆ ಕಾಫಿನಾಡಿನ ಕಡೂರು ತಾಲೂಕು ಹೇಳಿ-ಕೇಳಿ ಶಾಶ್ವತ ಬರಗಾಲಕ್ಕೆ ತುತ್ತಾದ ಊರು. ಈ ತಾಲೂಕಿನ ಗಡಿ ಗ್ರಾಮವೇ ಈ ಮಾಚಗೊಂಡನಹಳ್ಳಿ. ಇಲ್ಲಿ ಹನಿ ಹಾಹಾಕಾರ ಅನುಭವಿಸುತ್ತಾ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂಥದರಲ್ಲಿ ನಳನಳಿಸುತ್ತಿರುವ ತೆಂಗಿನ ತೋಟದಲ್ಲಿ ನಾಲ್ಕು ಬೋರ್ ಕೊರೆಸಿ, ತೋಟದಲ್ಲಿ ಸದಾ ನೀರು ಇರುವಂತೆ ಮಾಡಿ 70ರ ಹರೆಯದಲ್ಲೂ ಕೃಷಿ ಮಾಡಿಕೊಂಡು ಬರುತ್ತಿದ್ದ ಈ ಪುಣ್ಯಾತ್ಮ ತಮ್ಮೇಗೌಡ. ತಾನಾಯ್ತು, ತನ್ನ ಕೆಲಸವಾಯ್ತು ಅಂತ ದಿನದ ಬಹುತೇಕ ಸಮಯವನ್ನು ತನ್ನ ತೋಟದಲ್ಲೇ ಕೆಲಸ ಅಂತ ಬದುಕು ಕಟ್ಟಿಕೊಂಡಿದ್ದ. ತಂದೆ ಈ ರೀತಿ ಕಷ್ಟಪಟ್ಟು ಹಗಲಿರುಳುನ್ನೆದೆ ದುಡಿಯುತ್ತಿದ್ದರೆ ಮಗ ಸತೀಶ ಮಾತ್ರ ಶೋಕಿ ಮಾಡಿಕೊಂಡು, ಪೋಲಿ ಬಿದ್ದು ಉಂಡಾಡಿ ಗುಂಡನಂತೆ ಊರೂರು ಅಲೆಯುತ್ತಿದ್ದ.
ಒಟ್ಟಾರೆ, ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದ ತಮ್ಮೇಗೌಡರಿಗೆ ಫೈನಾನ್ಸಿನವರು ಮನೆ ಬಾಗಿಲಿಗೆ ಬಂದದ್ದು ತಡೆಯಲಾಗಲಿಲ್ಲ. ದಾರಿ ತಪ್ಪಿದ ಮಗನಿಗೆ ಬುದ್ಧಿ ಹೇಳಿದ್ದೇ ತಪ್ಪಾಗಿದೆ. ಮನೆಯಲ್ಲಿ ಗಲಾಟೆ ಮಾಡಿದ್ದಲ್ದದೇ ತೋಟದ ಕಡೆ ಹೊರಟಿದ್ದ ಅಪ್ಪನನ್ನ ಊರಲ್ಲಿ ಅಟ್ಟಾಡಿಸಿ ಕೊಲೆಗೈದಿದ್ದಾನೆ. ಅಪ್ಪ ಮಗನಿಂದ ಜೀವ ಉಳಿಸಿಕೊಳ್ಳಲು ಏನೆಲ್ಲಾ ಹೋರಾಡಿದರೂ ಅಂತಿಮವಾಗಿ ಶಾಲೆ ಹಿಂಭಾಗ ಮಗನ ಕೈಯಿಂದಲೇ ಉಸಿರು ಚೆಲ್ಲಿದ್ದಾರೆ. ವಿಷಯ ತಿಳಿದು ಸಖರಾಯಪಟ್ಟಣ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆ
ಆದರೆ, ಮಕ್ಕಳು ಚೆನ್ನಾಗಿರಲಿ ಎಂದು ಏಳೆಂಟು ಎಕರೆ ತೋಟ ಮಾಡಿದ್ದ ಅಪ್ಪನನ್ನು ಮಗನೇ ಕೊಂದದ್ದು ಮಾತ್ರ ದುರಂತ.
Published by:
Sushma Chakre
First published:
January 13, 2021, 7:51 AM IST