ಚಿಕ್ಕಮಗಳೂರು(ಮಾ. 10): ಸುತ್ತಲೂ ಹಚ್ಚ ಹಸಿರು, ತಂಪಾದ ವಾತಾವರಣ ಹೊಂದಿರುವ ಕಾಫಿನಾಡಿನ ಜೀವಾಳ ಪ್ರವಾಸೋದ್ಯಮ. ಇದೇ ಉದ್ಯಮವನ್ನು ನೆಚ್ಚಿಕೊಂಡು ಇಲ್ಲಿನ ಸಾವಿರಾರು ಜನರು ಬದುಕುತ್ತಿದ್ದಾರೆ. ಅದರಲ್ಲಿಯೂ ಬೇಸಿಗೆ ಸಮಯದಲ್ಲಿ ಇಲ್ಲಿನ ಗಿರಿ-ಶಿಖರಗಳನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚು. ಆದರೆ, ಈ ಬಾರಿ ಕೊರೋನಾ ಕರಿಛಾಯೆ ಇಲ್ಲಿನ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಇದರ ಜೊತೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕೂಡ ಉಲ್ಬಣಗೊಂಡಿದ್ದು, ಜನರು ಭೀತಿಗೆ ಒಳಗಾಗಿದ್ದಾರೆ.
ಕೊರೋನಾಗಿಂತ ಹೆಚ್ಚು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭಯ ಮೂಡಿದೆ. ಈಗಾಗಲೇ ಹಲವಾರು ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ. ಈ ಎರಡು ಕಾಯಿಲೆ ಭಯದ ಹಿನ್ನೆಲೆ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ವ್ಯವಹಾರ ಸಂಪೂರ್ಣ ನೆಲಕಚ್ಚಿದೆ ಇದರಿಂದ ರೆಸಾರ್ಟ್, ಹೊಟೇಲ್, ಹೋಂ ಸ್ಟೇ ಮಾಲೀಕರು ಕಂಗಲಾಗಿದ್ದಾರೆ.
ಜಿಲ್ಲೆಯ ಜನರಲ್ಲಿ ಕೊರೋನಾಗಿಂತ ಹೆಚ್ಚಾಗಿ ಮಂಗನ ಕಾಯಿಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ನಾಲ್ಕೈದು ಜನರಿಗೆ ಈ ಕಾಯಿಲೆ ದೃಢಪಟ್ಟಿದ್ದು, ಇದಕ್ಕೆ ಹೆದರಿ ಕೆಲಸಕ್ಕೆ ಬಂದ ಕೆಲವರು ವಾಪಸ್ಸಾಗಿದ್ದಾರೆ.
ಇದನ್ನು ಓದಿ: ಕಾಫಿನಾಡಿನಲ್ಲಿ ಆತಂಕ ಮೂಡಿಸುತ್ತಿರುವ ಮಂಗನ ಕಾಯಿಲೆ; ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮ
ಇಲ್ಲಿನ ಕೂಲಿ ಕಾರ್ಮಿಕರಲ್ಲಿ ಮಂಗನ ಕಾಯಿಲೆ ಕಂಡು ಬಂದ ಹಿನ್ನೆಲೆ ಸದ್ಯ, ಕಾಫಿ ಕೂಯ್ಯಲು ಜನ ಸಿಗದೇ ಮಾಲೀಕರು ಪರದಾಡುವಂತೆ ಆಗಿದೆ. ಒಂದು ಕಡೆ ಪ್ರವಾಸೋದ್ಯಮಕ್ಕೆ ಹೊಡೆದ ಮತ್ತೊಂದು ಕಡೆ ಕೂಲಿ ಕಾರ್ಮಿಕರು ಸಿಗದೇ, ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದು, ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗುವಂತೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ