2023ರ ವಿಧಾನಸಭೆ ಚುನಾವಣೆಗೆ (Assembly Elections) ಪ್ರಕ್ರಿಯೆಗಳನ್ನು ಕೇಂದ್ರ ಸರ್ಕಾರ ಆರಂಭ ಮಾಡಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಕುರಿತಂತೆ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಕೇಂದ್ರ ಚುನಾವಣಾ ಆಯೋಗ (Election Commission), ಅಧಿಕಾರಿಗಳ ವರ್ಗಾವಣೆ (Officers Transfer) ಮತ್ತು ನಿಯೋಜನೆಗೆ ಸ್ಪಷ್ಟ ನಿಯಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚನೆ ರವಾನಿಸಿದೆ. ವಿಶೇಷವಾಗಿ ಯಾವುದೇ ಒಬ್ಬ ಅಧಿಕಾರಿಯನ್ನು ಅವರ ಸ್ವಂತ ಜಿಲ್ಲೆಗೆ ನಿಯೋಜನೆ ಮಾಡಬಾರದು. ಕಳೆದ ಮೂರು ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರೆ, ಇಲ್ಲವೇ ನಾಲ್ಕು ವರ್ಷ ಪೂರೈಸಿದ್ದರೆ, ಅಂತಹ ಅಧಿಕಾರಿಗಳನ್ನು 2026ರ ಮೇ 31ಕ್ಕೆ ಕೊನೆಗೊಳ್ಳುವಂತೆ ಬೇರೊಂದು ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಅಧಿಕಾರಿಗಳನ್ನು ಸ್ವಂತ ಜಿಲ್ಲೆಗೆ ನಿಯೋಜಿಸಬಾರದು
ಜಿಲ್ಲಾ ಹಂತದ ಅಧಿಕಾರಿಗಳಾದ ಡಿಇಒ, ಡೆಪ್ಯುಟಿ ಡಿಇಒ, ಆರ್ಒ/ಎಆರ್ಒ, ಇಆರ್ಒ, ಎಇಆರ್ಒ, ನೋಡಲ್ ಅಧಿಕಾರಿಗಳು ಜೊತೆಗೆ ಎಡಿಎಂ, ಎಸ್ಡಿಎಂ, ಎಸಿ, ಜಂಟಿ ಆಯುಕ್ತರು, ತಹಶೀಲ್ದಾರ್, ಬಿಡಿಒ ಸೇರಿದಂತೆ ಮತ್ತಿತರ ಅಧಿಕಾರಿಗಳನ್ನು ಕೂಡ ಅವರವರ ಜಿಲ್ಲೆಗೆ ನಿಯೋಜನೆ ಮಾಡಬಾರದು ಎಂದು ತಿಳಿಸಿದೆ.
ಐಜಿ, ಡಿಐಜಿ, ಎಸ್ಎಸ್ಪಿ, ಎಸ್ಪಿ, ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್ಐ, ಎಚ್ಸಿ, ಪಿಸಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕೂಡ ಈ ನಿಯಮ ಜಾರಿಯಾಗಲಿದೆ. ಪೊಲೀಸ್ ಸಬ್ಇನ್ಸ್ಪೆಕ್ಟರ್ ಗಳನ್ನು, ಯಾವುದೇ ಕಾರಣಕ್ಕೂ ಅವರ ತವರು ಜಿಲ್ಲೆಗೆ ನಿಯೋಜನೆ ಮಾಡಬಾರದು.
ಸ್ವಂತ ಜಿಲ್ಲೆಗಳಲ್ಲಿ ಕೆಲಸ ಮಾಡ್ತಿದ್ದರೆ ತಕ್ಷಣವೇ ವರ್ಗಾವಣೆಗೆ ಸೂಚನೆ
ಒಂದು ವೇಳೆ ಅದೇ ಜಿಲ್ಲೆಯಲ್ಲಿ ಮೂರು ವರ್ಷ ಪೂರ್ಣಗೊಂಡಿದ್ದರೆ, ಇಲ್ಲವೇ 4ನೇ ವರ್ಷ ಚಾಲ್ತಿಯಲ್ಲಿದ್ದರೆ ತಕ್ಷಣವೇ ಅವರನ್ನು ಬೇರೊಂದು ಜಿಲ್ಲೆಗೆ ವರ್ಗಾವಣೆ ಮಾಡಬೇಕು. ಒಂದು ವೇಳೆ ಚಿಕ್ಕ ಜಿಲ್ಲೆಗಳಿದ್ದರೆ ಅಂತಹ ಅಧಿಕಾರಿಯನ್ನು ಪಕ್ಕದ ಜಿಲ್ಲೆಗೂ ವರ್ಗಾವಣೆ ಮಾಡುವಂತೆ ಆಯೋಗ ಸೂಚನೆ ನೀಡಲಾಗಿದೆ.
ಆಯಾ ಇಲಾಖೆಯ ಮುಖ್ಯಸ್ಥರು ತಮ್ಮ ತಮ್ಮ ಇಲಾಖೆಯ ಅಧಿಕಾರಿಗಳು ಎಲ್ಲೆಲ್ಲಿ ನಿಯೋಜನೆಗೊಂಡಿದ್ದಾರೆ ಮತ್ತು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು.
ಮೂರು ವರ್ಷ ತವರು ಜಿಲ್ಲೆಯಲ್ಲೇ ಇದ್ದರೆ, ಇಲ್ಲವೇ 4ನೇ ವರ್ಷಕ್ಕೆ ಕಾಲಿಟ್ಟಿದ್ದರೆ ಕೇಂದ್ರ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಅಧಿಕಾರಿಗೆ ಮಾಹಿತಿ ಒದಗಿಸಬೇಕು. ಚುನಾವಣಾ ವೀಕ್ಷಕರು, ಸಿಇಒ, ಡಿಇಒ, ಆರ್ಒ ಗಳು ವಿಭಾಗವಾರು ಅಧಿಕಾರಿಗಳ ನಿಯೋಜನೆ ಕುರಿತಂತೆ ಪರಿಶೀಲನೆ ನಡೆಸಬೇಕು.
ಸ್ವಂತ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದರೆ, ಗಮನಕ್ಕೆ ಬಂದರೆ ಶಿಸ್ತು ಕ್ರಮ
ಒಂದು ವೇಳೆ ಆಯೋಗದ ನಿರ್ದೇಶನದ ಹೊರತಾಗಿಯೂ ಯಾವುದೇ ಅಧಿಕಾರಿಗಳು ತವರು ಜಿಲ್ಲೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದು ಆಯೋಗದ ಗಮನಕ್ಕೆ ಬಂದರೆ ಅಂಥವರ ಮೇಲೆ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.
ಯಾವುದೇ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದರೆ ಅಂಥವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ತಾಕೀತು ಮಾಡಲಾಗಿದೆ. ಸೇವಾವಧಿ ಮುಗಿದು 6 ತಿಂಗಳಾಗಿದ್ದರೆ ಅಂಥವರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಬಹುದಾಗಿದೆ. ಚುನಾವಣಾ ಆಯೋಗದ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ