ಬೆಂಗಳೂರು; ಲಿಂಗಾಯತ ಸಮಾಜದ ಮುಖಂಡ, ಸರ್ವಜನಾಂಗದ ಏಳಿಗೆ ಬಯಸುವಂತಹ, ಬಡವರ ಬಗ್ಗೆ ಕಾಳಜಿ ಉಳ್ಳಂತಹ ವಿನಯ್ ಕುಲಕರ್ಣಿ ಅವರನ್ನು ಏಕಾಏಕಿ ಸಿಬಿಐ ಪೊಲೀಸರು ಬಂಧಿಸಿ ಕರೆದೊಯ್ದಿರೋದು ನಮಗೆ ನೋವಾಗಿದೆ ಎಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ವಿನಯ್ ಕುಲಕರ್ಣಿ ಅವರ ಬಂಧನದ ವಿಷಯವಾಗಿ ಮಾತನಾಡಿದ ಸ್ವಾಮೀಜಿ, ಕುಲಕರ್ಣಿ ಅವರ ಮನೆತನ ಉತ್ತಮ ಹೆಸರುಳ್ಳ ಮನೆತನ. ಯಾವುದೇ ನೋಟಿಸ್ ನೀಡದೆ, ಏಕಾಏಕಿ ಬಂಧಿಸಿ ಕರೆದೊಯ್ದಿರೋದು ಇಡೀ ಸಮಾಜಕ್ಕೆ ನೋವುಂಟು ಮಾಡಿದೆ. ಇಡೀ ಅಖಂಡ ಲಿಂಗಾಯತ ಸಮಾಜ ಇದನ್ನು ಖಂಡಿಸುತ್ತದೆ, ಪಂಚಮ ಸಾಲಿ ಸಮಾಜ ಖಂಡಿಸುತ್ತದೆ ಎಂದರು.
ವಿನಯ್ ಕುಲಕರ್ಣಿ ಮೇಲೆ ಹಲವು ಆರೋಪಗಳಿರಬಹುದು. ಆದರೆ ಅವರು ಅಪರಾಧಿಯಲ್ಲ. ರಾಜಕೀಯ ಕಾರಣಕ್ಕೆ ಈ ರೀತಿ ಮಾಡಿರೋದು ಸರಿಯಲ್ಲ. ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡೋದು ಸರಿಯಲ್ಲ. ಚುನಾವಣಾ ಎದುರಾಳಿ ಅನ್ನೋ ಕಾರಣಕ್ಕೆ ಈ ರೀತಿ ಮಾಡಬಾರದು. ಉತ್ತರ ಕರ್ನಾಟಕ ರಾಜಕಾರಣ ದ್ವೇಷ ರಾಜಕೀಯ ಸಹಿಸೋದಿಲ್ಲ. ನೋಟಿಸ್ ನೀಡದೆ ವಿಚಾರಣೆಗೆ ಒಳಪಡಿಸೋದು ಎಷ್ಟು ಸರಿ ಅಂತ ನಾನು ಮುಖ್ಯಮಂತ್ರಿಗಳನ್ನು ಕೇಳಲು ಇಷ್ಟಪಡುತ್ತೇನೆ. ಕೂಡಲೇ ಮುಖ್ಯಮಂತ್ರಿಗಳು ಇದನ್ನ ಸರಿಪಡಿಸಲೇಬೇಕು ಎಂದು ಆಗ್ರಹಿಸಿದರು.
ವಿನಯ್ ಕುಲಕರ್ಣಿ ತೇಜೋವಧೆ ಮಾಡ್ತಿರೋದು ಯಾರು ಅಂತಾ ಗೊತ್ತಿದೆ. ಈ ಪ್ರಕರಣದಲ್ಲಿ ಸುಮಾರು 600 ಜನರನ್ನು ವಿಚಾರಣೆ ಮಾಡಲಾಗಿದೆ. ಆದರೆ ಇವರನ್ನು ಯಾವುದೇ ನೋಟಿಸ್ ನೀಡದೇ ಕರೆದುಕೊಂಡು ಹೋಗಿದ್ದಾರೆ. ಅವರನ್ನು ನಡೆಸಿಕೊಂಡ ರೀತಿ ನೋವಾಗಿದೆ. ಯಾರೋ ಕೆಲವರು ಮಾಡಿರುವ ತಪ್ಪಿಗೆ ಸರ್ಕಾರದ ತಪ್ಪು ಅಂತಾ ಹೇಳಲ್ಲ. ಆದರೆ ಯಾರೋ ಒಬ್ಬರ ದ್ವೇಷದ ರಾಜಕಾರಣ ಮಾಡುವ ಮೂಲಕ ಸರ್ಕಾರಕ್ಕೆ, ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡಲಾಗುತ್ತಿದೆ. ವಿನಯ್ ಕುಲಕರ್ಣಿ ಬೇರೆಯಲ್ಲ, ಯಡಿಯೂರಪ್ಪ ಬೇರೆಯಲ್ಲ. ಪಕ್ಷ ಬೇರೆಯಲ್ಲ, ಇಬ್ಬರೂ ಒಂದೇ ಸಮುದಾಯದ ನಾಯಕರು. ನಿಮ್ಮ ಅವಧಿಯಲ್ಲಿ ಸಮುದಾಯದ ಮತ್ತೊಬ್ಬ ನಾಯಕನಿಗೆ ಅನ್ಯಾಯ ಆಗೋದು ಸರಿಯಲ್ಲ ಎಂದು ಹೇಳಿದರು.
ಇದನ್ನು ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ
ಯಡಿಯೂರಪ್ಪನವರಿಗೆ ಎಲ್ಲಾ ಮಾಹಿತಿ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಯಡಿಯೂರಪ್ಪರಿಗೆ ಯಾರೋ ತಪ್ಪು ಮಾಹಿತಿ ಕೊಟ್ಟಿರಬಹುದು. ಆದರೆ, ಯಡಿಯೂರಪ್ಪನವರಿಗೆ ಪರಮಾಧಿಕಾರ ಇದೆ. ಅವರು ಗೃಹ ಇಲಾಖೆ ಮೂಲಕ ಎಲ್ಲಾ ಮಾಹಿತಿ ಪಡೆಯಬಹುದು. ವಿನಯ್ ಕುಲಕರ್ಣಿ ಕುಟುಂಬಸ್ಥರ ಮೂಲಕ ಸಿಎಂಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ