news18-kannada Updated:October 16, 2020, 7:21 AM IST
ಕಾವೇರಿ ತಾಯಿ
ಕೊಡಗು (ಅ.16): ಕೊಡವರ ಕುಲದೇವತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಲು ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಕೊರೋನಾ ಹಿನ್ನಲೆ ಈ ತೀರ್ಥೋದ್ಭವ ಜಾತ್ರೆಗೆ ಹೆಚ್ಚಿನ ಜನರು ಸೇರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಅಲ್ಲದೇ ಸರಳವಾಗಿ ಈ ಬಾರಿ ಕಾರ್ಯಕ್ರಮ ಆಚರಣೆ ಮಾಡಲು ಸೂಚನೆ ನೀಡಿದ್ದು, ಕೋವಿಡ್ ಸುರಕ್ಷತೆ ಪಾಲಿಸುವುದು ಕಡ್ಡಾಯವಾಗಿದೆ. ತೀರ್ಥೋದ್ಭವದಲ್ಲಿ ಭಾಗಿಯಾಗುವ ಭಕ್ತರು ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ತೀರ್ಥೋದ್ಭವಕ್ಕೆ ಈಗಾಗಲೇ ಎಲ್ಲಾ ವಿಧಿವಿಧಾನಗಳು ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಸೆಪ್ಟೆಂಬರ್ 26 ರಂದೇ ಪತ್ತಾಯಕ್ಕೆ ಅಕ್ಕಿ ಹಾಕಲಾಗಿದ್ದು, ನಿತ್ಯವೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗುತ್ತಿವೆ.
ಇದು ಬೆಳಿಗ್ಗೆ ಭಾಗಮಂಡಲದಿಂದ ತಲಕಾವೇರಿಗೆ ಕಾವೇರಿ ಮಾತೆಯ ಚಿನ್ನಾಭರಣಗಳನ್ನು ಶಾಸ್ತ್ರೋಕ್ತವಾಗಿ ಕೊಂಡೊಯ್ಯಲಾಗುವುದು. ಅಕ್ಟೋಬರ್ 17 ರಂದು ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ಸರಿಯಾಗಿ ತೀರ್ಥೋದ್ಭವವಾಗಲಿದೆ. ಅರ್ಚಕ ಗೋಪಾಲ ಆಚಾರ್ ಅವರ ನೇತೃತ್ವದಲ್ಲಿ ಎಲ್ಲಾ ಪೂಜಾ ವಿಧಿವಿಧಾನಗಳು ನಡೆಯಲಿವೆ.
ಪ್ರತೀ ಬಾರಿಯಂತೆ ಈ ಬಾರಿ ಕೊಳದಲ್ಲಿ ಸ್ನಾನ ಮಾಡಿ, ತೀರ್ಥ ಪ್ರೋಕ್ಷಣೆಗೆ ಅವಕಾಶ ನೀಡಿಲ್ಲ. ಪ್ರತ್ಯೇಕವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲಲು ಭಕ್ತರಿಗೆ ಅನುಕೂಲವಾಗುವಂತೆ ಈಗಾಗಲೇ ಪೊಲೀಸ್ ಇಲಾಖೆ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದು, ಎಚ್ಚರಿಕೆವಹಿಸಿದ್ದಾರೆ.
ತೀರ್ಥೋದ್ಭವವಾದ ತಕ್ಷಣವೇ ತೀರ್ಥ ಪ್ರೋಕ್ಷಣೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ 40 ಸ್ವಯಂ ಸೇವಕರು ಸಿದ್ಧರಿದ್ದು, ಅಷ್ಟೂ ಜನರಿಗೂ ಈಗಾಗಲೇ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ತೀರ್ಥೋದ್ಭವಕ್ಕೆ ಆಗಮಿಸುವ ಸ್ವಯಂ ಸೇವಕರಿಗೆ, ಭಕ್ತರಿಗೂ ಕೊರೋನಾ ಪರೀಕ್ಷೆ ಕಡ್ಡಾಯವಾಗಿದ್ದು, ವರದಿ ನೆಗೆಟಿವ್ ಬಂದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ: ಪ್ರವಾಹ ಪೀಡಿತ ಪ್ರದೇಶಕ್ಕೆ ಹೆಚ್ಚವರಿಯಾಗಿ ಎರಡು ಎನ್ಡಿಆರ್ಎಫ್ ತಂಡ ; ನಾಳೆ ಕಲಬುರ್ಗಿಗೆ ಸಚಿವ ಅಶೋಕ್ ಭೇಟಿ
ಜಿಲ್ಲೆಯಲ್ಲಿ ಮಿತಿಮೀರುತ್ತಿರುವ ಕೋವಿಡ್ ನಿಂದಾಗಿ ಅತ್ಯಂತ ಕಟ್ಟುನಿಟ್ಟಿನಲ್ಲಿ ನಿಯಮಗಳನ್ನು ಜಾರಿಗೆ ತರುವುದು ಅನಿವಾರ್ಯವಾಗಿದೆ. ಜೊತೆಗೆ ತೀರ್ಥೋದ್ಭವ ಆಚರಣೆ ಕೂಡ ಮಾಡಲೇಬೇಕಾಗಿರುವ ಹಿನ್ನಲೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಈ ಕುರಿತು ಭಕ್ತರಿಗೆ ತಿಳಿಸಿದ್ದು, ಇದನ್ನು ಪಾಲಿಸಬೇಕಾಗಿದೆ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್ ತಮ್ಮಯ್ಯ ಮನವಿ ಮಾಡಿದ್ದಾರೆ.
ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಮಹಾಮಾರಿಯ ಆತಂಕದ ನಡುವೆ ಸರಳ ಮತ್ತು ಸಾಂಪ್ರದಾಯಿಕ ತೀರ್ಥೋದ್ಭವ ಜಾತ್ರಾ ಮಹೋತ್ಸವ ನಡೆಸಲು ಜಿಲ್ಲಾಡಳಿತ ಭಾರೀ ಕಟ್ಟೆಚ್ಚರ ವಹಿಸಿದೆ.
Published by:
Seema R
First published:
October 16, 2020, 7:21 AM IST