ಕೆನಡಾದ ಸಂಸತ್ತಿನಲ್ಲಿ (Canada Parliament) ಕನ್ನಡದ (Kannada) ಕಂಪು ಹರಡಿದ ಕನ್ನಡಿಗೆ ಚಂದ್ರ ಆರ್ಯ (Kannadiga Chandra Arya) ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಕೆನಾಡದ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ಕ್ಷಣ ಕನ್ನಡಿಗರನ್ನು ಭಾವುಕರನ್ನಾಗಿಸಿತ್ತು. ಕೆನಡಾದ ಸಂಸದರಾಗಿರುವ ಚಂದ್ರ ಆರ್ಯ ಅವರು ತುಮಕೂರು (Tumakuru) ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು (Dwaralu Village, Sira) ಗ್ರಾಮದವರಾಗಿದ್ದಾರೆ. ಇದೀಗ ಚಂದ್ರ ಆರ್ಯ ಅವರ ಕನ್ನಡಾಭಿಮಾನ ಕಂಡು ಇಡೀ ಕರುನಾಡು ಹೆಮ್ಮೆಪಡುತ್ತಿದೆ, ಇನ್ನು ದ್ವಾರಾಳು ಗ್ರಾಮದ ಜನರು ತಮ್ಮೂರಿನ ಚಂದ್ರ ಆರ್ಯ ಅವರ ಸರಳತೆ, ಬಾಲ್ಯದ ಬಗ್ಗೆ ಹೇಳುತ್ತಾ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿಯ ಹಿರಿಯರು , ಆಪ್ತರು ಮತ್ತು ಗೆಳೆಯರು ಚಂದ್ರ ಆರ್ಯ ಅವರ ಸರಳತೆಯ ಮಾತನಾಡಿದ್ದಾರೆ.
ದ್ವಾರಾಳು ಗ್ರಾಮ 150 ಮನೆಗಳಿರುವ ಪುಟ್ಟ ಹಳ್ಳಿ. ವ್ಯವಸಾಯ ಕುಟುಂಬದಲ್ಲಿ ಜನಿಸಿದ ಚಂದ್ರ ಆರ್ಯ ಅವರ ಸದ್ಯ ಕೆನಾಡದ ಸಂಸದರಾಗಿದ್ದಾರೆ. ಪ್ರತಿ ಬಾರಿ ಊರಿಗೆ ಬಂದಾಗ ನಮ್ಮೊಂದಿಗೆ ಸಮಯ ಕಳೆಯುತ್ತಾರೆ. ಬಾಲ್ಯದಲ್ಲಿ ಹೇಗಿದ್ದೋ, ಇಂದು ಹಾಗೆ ಇದ್ದಾರೆ. ವಿದೇಶದಲ್ಲಿ ನೆಲೆಸಿದ್ರೂ ಚಂದ್ರ ಆರ್ಯ ಅವರ ಕನ್ನಡತನ ಬದಲಾಗಿಲ್ಲ ಎಂದು ಎಂದು ಗೆಳೆಯ ದಯಾನಂದ್ ಹೇಳುತ್ತಾರೆ.
ಚಂದ್ರ ಆರ್ಯ ಅವರ ಶಿಕ್ಷಣ
ಚಂದ್ರ ಆರ್ಯ ಅವರ ತಂದೆ ಗೋವಿಂದಪ್ಪ ವಾಣಿಜ್ಯ ತೆರಿಗೆ ಅಧಿಕಾರಿಯಾಗಿದ್ದರಿಂದ ದ್ವಾರಾಳು ಗ್ರಾಮದಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ತಂದೆ ಗೋವಿಂದಪ್ಪ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸುತ್ತಿರೋದರಿಂದ ಅಲ್ಲಿಯೇ ಎಸ್ಎಸ್ಎಲ್ ಸಿ ವರೆಗೆ ವಿದ್ಯಾಭ್ಯಾಸ ಪಡೆದು, ಬಳ್ಳಾರಿಯ ಮುನ್ಸಿಪಲ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ನಂತರ ರಾಮನಗರದಲ್ಲಿ ಇಂಜಿನೀಯರಿಂಗ್ ಪದವಿ ಪಡೆದುಕೊಂಡಿದ್ದರು.
ಇದನ್ನೂ ಓದಿ: Hubballi: ಹೆಸರಿಗೆ ಹೆದ್ದಾರಿ, ಸಾವಿಗೆ ರಹದಾರಿ: 12 ವರ್ಷದಲ್ಲಿ 390 ಬಲಿ; ಇದ್ರಿಂದ ಮುಕ್ತಿ ಯಾವಾಗ?
ವೃತ್ತಿ ಬದುಕು
ಇಂಜಿನೀಯರಿಂಗ್ ಪಡೆದ ಚಂದ್ರ ಆರ್ಯ ಅವರು ಆರಂಭದಲ್ಲಿ ಭಾರತೀಯ ಸೇನೆ ಸೇರಿ DRDOದಲ್ಲಿ ಕೆಲಸ ಮಾಡಿದರು. ನಂತರ ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಕೆಎಸ್ಎಫ್ಸಿಯಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದರು. ಕೆಲ ವರ್ಷಗಳ ನಂತರ ಈ ಹುದ್ದೆಗೂ ರಾಜೀನಾಮೆ ನೀಡಿದ ಚಂದ್ರ ಆರ್ಯ ಅವರು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಗ್ರಾನೈಟ್ ಕಾರ್ಖಾನೆ ಆರಂಭಿಸಿ ನಷ್ಟ ಅನುಭವಿಸಿದ್ದರು.
ಗ್ರಾನೈಟ್ ಉದ್ಯಮದಲ್ಲಿ ಕೈ ಸುಟ್ಟಕೊಂಡ ಚಂದ್ರ ಆರ್ಯ ಅವರು ಬೆಂಗಳೂರಿನಲ್ಲಿ ಕನ್ಸಲ್ಟೆನ್ಸಿ ಕಚೇರಿ ಆರಂಭಿಸಿದ್ದರು. ಕೊನೆಗೆ ಈ ವ್ಯವಹಾರ ಬಂದ್ ಮಾಡಿ ಕೆಲಸ ಅರಸಿ ದೋಹಾಗೆ ತೆರಳಿದರು. 1991ರಲ್ಲಿ ದಾಂಡೇಲಿ ಮೂಲದ ಸಂಗೀತಾ ಅವರನ್ನು ಮದುವೆ ಆಗಿದ್ದರು. ಸಂಗೀತಾ ಅವರು ಸಹ ಕೆಲಸ ಅರಸಿ ಕೆನಡಾಗೆ ತೆರಳಿದ್ರು. ನಂತರ ಚಂದ್ರ ಆರ್ಯ ಅವರು ಕೆನಡಾಗೆ ತೆರಳಿದರು. ಸಂಗೀತಾ ಅವರು ಕೆನಡಾದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.
ಕನ್ನಡ ರಾಜ್ಯೋತ್ಸವ ಆಚರಣೆ
ಚಂದ್ರ ಆರ್ಯ ಅವರು ಕೆನಡಾದಲ್ಲಿ ಫೈನಾನ್ಶಿಯಲ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಾ, ಕನ್ನಡ ಸಂಘ, ಸಂಸ್ಥೆಗಳ ಜೊತೆ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಚಂದ್ರ ಆರ್ಯ ಅವರು ಸಂಸತ್ತಿನವರೆಗೂ ಪ್ರಯಾಣ ಬೆಳೆಸಿದ್ದಾರೆ.
2015ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿ ಇವರು, ನಂತರ 2019ರಲ್ಲಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯವನ್ನು ತಮ್ಮದಾಗಿಸಿಕೊಂಡರು. ಅದೇ ವರ್ಷ ಕೆನಡಾ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡಾಭಿಮಾನ ಪ್ರದರ್ಶಿಸಿದ್ದರು.
ಪ್ರತಿ ವರ್ಷ ಊರಿಗೆ ಬರುವ ಚಂದ್ರ ಆರ್ಯ
ಇನ್ನೂ ಚಂದ್ರ ಆರ್ಯ ಅವರು ಪ್ರತಿ ವರ್ಷಕ್ಕೊಮ್ಮೆ ಗ್ರಾಮಕ್ಕೆ ಆಗಮಿಸುತ್ತಾರೆ. ಗ್ರಾಮಸ್ಥರ ಜೊತೆ ಸಾಮಾನ್ಯರಂತೆಯೇ ಬೆರೆಯುತ್ತಾರೆ. ಇಲ್ಲಿಯ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಾರೆ ಎಂದು ದ್ವಾರಾಳು ಗ್ರಾಮಸ್ಥ ಹಾಲಪ್ಪ ಹೇಳುತ್ತಾರೆ.
ಸಾಮಾಜಿಕ ಕಾರ್ಯಗಳು
‘ಗಜ್ಜಿಗರಹಳ್ಳಿ ಕರಿಯಣ್ಣ ಸೇವಾ ಟ್ರಸ್ಟ್’ ಮೂಲಕ ಚಂದ್ರ ಆರ್ಯ ಅವರ ಕುಟುಂಬ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಈ ಟ್ರಸ್ಟ್ ಮೂಲಕ ಅನ್ನದಾಸೋಹ, ಬಡವರ ಕಷ್ಟಕ್ಕೆ ಸಹಾಯ ಆಗುತ್ತಿದ್ದಾರೆ.
ಇದನ್ನೂ ಓದಿ: Canada Parliament: ಕೆನಡಾ ಪಾರ್ಲಿಮೆಂಟ್ನಲ್ಲಿ ಕಸ್ತೂರಿ ಕನ್ನಡ! ಇದು ಭಾವುಕ ಕ್ಷಣ
ಚಂದ್ರ ಆರ್ಯ ಅವರ ಬಗ್ಗೆ ತಂದೆ ಮಾತು
ಇತಿಹಾಸ ಸೃಷ್ಟಿಸುವಂತ ಶ್ರೀಮಂತ ಕುಟುಂಬ ನಮ್ಮದಲ್ಲ. ಜೀವನ ನಿರ್ವಹಣೆಗೆ ಸರ್ಕಾರಿ ನೌಕರಿ ಸೇರಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದೆ. ಮಕ್ಕಳು ಬುದ್ಧಿವಂತರು, ಅವರೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಂದ್ರ ಆರ್ಯನಿಗೆ ರಾಜ್ಯ ಮತ್ತು ಕನ್ನಡದ ಬಗ್ಗೆ ಒಲವು ಹೆಚ್ಚು. ತನ್ನೂರಿನ ಬಗ್ಗೆಯೂ ಆತನಿಗೆ ಹೆಚ್ಚು ಒಲವು. ಕೆನಡಾದ ಸಂಸತ್ತಿನಲ್ಲಿ ಕನ್ನಡ ಮಾತನಾಡಿದ್ದಾನೆ ಎಂದು ಚಂದ್ರ ಆರ್ಯ ಅವರ ತಂದೆ ಗೋವಿಂದಪ್ಪ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ