ಬೆಂಗಳೂರು; ಸುಪ್ರೀಂಕೋರ್ಟ್ ಯಡಿಯೂರಪ್ಪ ಅವರಿಗೆ ಒಂದು ರೀತಿಯಲ್ಲಿ ಬೇಲ್ ಕೊಟ್ಟಿದೆ. ಅರೆಸ್ಟ್ ಮಾಡ್ಬೇಡಿ, ಬೇಲ್ ಕೊಡ್ತೀನಿ ಅಂದಿದೆ ಸುಪ್ರೀಂಕೋರ್ಟ್. ಬೇಲ್ ನಲ್ಲಿರುವ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರೆಯಬಹುದಾ? ಎಂದು ಸದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು.
ಸದನದಲ್ಲಿ ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಮಾತಿಗೆ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಮಧ್ಯಪ್ರವೇಶಿಸಿ, ಕೋರ್ಟ್ ತನಿಖೆಗೆ ಅವಕಾಶ ಕೊಟ್ಟಿದೆ. ಬೇರೇನೂ ಹೇಳಿಲ್ಲ ಎಂದು ಹೇಳಿದರು. ಇದಕ್ಕೆ ಮಾಧುಸ್ವಾಮಿ ಅವರು ಏನ್ ಹೇಳ್ತಾರೆ ಎಂದು ಸ್ಪೀಕರ್ ಕೇಳಿದರು. ಆದರೆ, ಇದಕ್ಕೆ ಸದನದಲ್ಲಿ ಏನನ್ನು ಹೇಳದ ಮಾಧುಸ್ವಾಮಿ ಮೌನವಾಗಿ ಕುಳಿತಿದ್ದರು. ಡಿನೋಟಿಫಿಕೇಷನ್ ಕೇಸ್ ಸಂಬಂಧದ ಚರ್ಚೆಯಲ್ಲಿ ಮಾಧುಸ್ವಾಮಿ ಅವರು ಸಿಎಂ ನೆರವಿಗೆ ಬಾರಲಿಲ್ಲ.
ಬಳಿಕ ಮಾತನಾಡಿದ ಬೊಮ್ಮಾಯಿ ಅವರು, ಸಿಎಂ ಜಾಮೀನಿನಲ್ಲಿದ್ದಾರೆ ಅಂತ ಸಿದ್ದರಾಮಯ್ಯ ಹೇಳುವುದು ಸರಿಯಲ್ಲ. ಕೋರ್ಟ್ ಮುಂದಿನ ತನಿಖೆಗೆ ಅವಕಾಶ ಕೊಟ್ಟಿದೆ. ಬೇಲ್ ಕೊಟ್ಟಿರೋದಲ್ಲ, ಕೋರ್ಟ್ ನಲ್ಲಿರುವ ವಿಷಯದ ಚರ್ಚೆ ಇಲ್ಲಿ ಅಪ್ರಸ್ತುತ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಾನು ಯಡಿಯೂರಪ್ಪ ಮೇಲೆ ಏನೂ ಆರೋಪ ಮಾಡಿಲ್ಲ. ಪ್ರಕರಣದಲ್ಲಿ ಇರುವ ಆರೋಪಗಳನ್ನು ತಿಳಿಸುತ್ತಿದ್ದೇನೆ ಅಷ್ಟೇ. ಮಾನ್ಯ ಸಿಎಂಗೆ ಹೀಗೆಲ್ಲ ಆಗಬಾರದಿತ್ತು. ನಮಗೆ ವ್ಯಥೆ ಆಗುತ್ತಿದೆ ಎಂದು ಸಿಎಂ ಕಾಲೆಳೆದರು. ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಕೆ ಜಿ ಬೋಪಯ್ಯ, ಏನಾಗಿದೆ ಸಿಎಂಗೆ!? ಅದಾಗಬಾರದಿತ್ತು, ಇದಾಗಬಾರದಿತ್ತು ಅಂದ್ರೇನು? ಅಂತ ಸಿದ್ದರಾಮಯ್ಯಗೆ ಪ್ರಶ್ನಿಸಿದರು. ಬಳಿಕ ಬಿಜೆಪಿ ಸದಸ್ಯರ ವಿರೋಧ ವ್ಯಕ್ತಪಡಿಸಿದರು.
ಆಗ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಸಂಬಂಧಿತ ಪ್ರಕರಣದ ಚರ್ಚೆ ಕೈ ಬಿಟ್ಟು ಮುಂದೆ ಹೋಗ್ತೀನಿ. ಒಂದು ಕಡೆ ಸಿಎಂ, ಇನ್ನೊಂದು ಕಡೆಡೆ ಸಚಿವರು ಇದ್ದಾರೆ. ನೈತಿಕವಾಗಿ ಸಿಎಂ ಮುಂದುವರೆಯಬಹುದಾ ಅಂತ ಜನ ಕೇಳುತ್ತಿದ್ದಾರೆ. ನಾವು ಜನರ ಪ್ರತಿನಿಧಿಗಳು. ಆದರೆ ಯಡಿಯೂರಪ್ಪ, ನಿರಾಣಿಗೆ ಈ ಕೇಸಿಂದ ರಿಲೀಫ್ ಸಿಗ್ಲಿ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ